ಹೈಲೈಟ್ಸ್:
- ಎಲ್ಲರಿಗೂ ಆದರ್ಶಪ್ರಾಯರಾಗಿ ಬೆಳೆದ ಮಾಳವಿಕಾ ಹೆಗಡೆ
- ಸಾಲದಲ್ಲಿ ಮುಳುಕಿದ್ದ ಕೆಫೆ ಕಾಫಿ ಡೇ ಗೆ ಮರುಜೀವ ನೀಡಿದ ಮಾಳವಿಕಾ
- ಎರಡೇ ವರ್ಷದಲ್ಲಿ ಕಂಪನಿಯ ಸಾಲವನ್ನು ಅರ್ಧಕ್ಕಿಳಿಸಿದ ಸಾಧಕಿ
ಮಾಳವಿಕಾ ಹೆಗಡೆ ಸ್ತ್ರೀ ಶಕ್ತಿಗೆ ಸೂಕ್ತ ಉದಾಹರಣೆ. ಇವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಎನ್ನುವುದಕ್ಕಿಂತಲೂ, ಕೆಫೆ ಕಾಫಿ ಡೇ ಎಂಟರ್ಪ್ರೈಸಸ್ ಸಂಸ್ಥಾಪಕ ಸಿದ್ಧಾರ್ಥ್ ಹೆಗಡೆ ಪತ್ನಿ ಎಂದೇ ಹೆಚ್ಚು ಸುದ್ದಿಯಾಗಿದ್ದಾರೆ. ಆದರೆ, ಸಿದ್ಧಾರ್ಥ್ ಅಕಾಲಿಕ ಮರಣವಾದಾಗ, ಇನ್ಮುಂದೆ ಉದ್ಯಮ ಮುಂದುವರಿಸುವುದು ಕಷ್ಟಸಾಧ್ಯ ಎಂದೇ ಹಲವರ ಅಭಿಪ್ರಾಯವಾಗಿತ್ತು. ಆದರೆ, ಪತಿಯ ಅಗಲಿಕೆಯಿಂದಾದ ನೋವು, ನಷ್ಟಗಳ ನಡುವೆಯೂ ಮಾಳವಿಕಾ ಹೆಗಡೆಯವರ ಈ ಸಾಧನೆ ನಿಜಕ್ಕೂ ಆದರ್ಶಪ್ರಾಯವೇ ಹೌದು.
ಒಂದು ಕಡೆ ಗಂಡ ಸತ್ತಿದ್ದಾರೆ (ಸಾಲ ತೀರಿಸಲು ದಾರಿ ಕಾಣದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಸಿದ್ದಾರ್ಥ್ ಹೆಗಡೆ). ಮತ್ತೊಂದೆಡೆ ಕೆಫೆ ಕಾಫಿ ಡೇ ಕಂಪನಿ ಬರೋಬ್ಬರಿ 7 ಸಾವಿರ ಕೋಟಿ ರೂ. ಸಾಲದಲ್ಲಿದೆ. ಇನ್ನೊಂದೆಡೆ ಸಾವಿರಾರು ಉದ್ಯೋಗಿಗಳ ಬದುಕು.. ಹೀಗೆ ಹಲವು ಸಂಕಷ್ಟಗಳು ಮಾಳವಿಕಾ ಹೆಗಡೆಯನ್ನು ಸುತ್ತುವರಿದಿದ್ದವು. ಸಾಲ ಹೆಚ್ಚಾದರೆ, ಪತಿ ಮತ್ತು ಕುಟುಂಬಕ್ಕೆ ಕೆಟ್ಟ ಹೆಸರು (ವಿಜಯ ಮಲ್ಯ, ನೀರವ್ ಮೋದಿಯಂತಹ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವವರು ಇದಕ್ಕೆ ಹೊರತಾಗಿದ್ದಾರೆ). ಕಂಪನಿ ಮುಚ್ಚಿದರೆ ಸಾವಿರಾರು ನೌಕರರ ಕುಟುಂಬಗಳು ರಸ್ತೆಗೆ ಬೀಳಲಿವೆ. ಇನ್ನೇನು ಮಾಡಬೇಕು? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮಾಳವಿಕಾ ಕಠಿಣ ನಿರ್ಧಾರ ತೆಗೆದುಕೊಂಡರು. ಕಂಪನಿಗೆ ಬೆನ್ನೆಲುಬಾಗಿ ನಿಂತರು. ಕಂಪನಿಯು ಸಾಲ ತೀರಿಸಲಿದೆ ಎಂಬ ಭರವಸೆ ನೀಡಿದರು.
ಇದೀಗ, ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ನೋವಿನ ಪರಿಸ್ಥಿತಿಯಲ್ಲೂ ಕಂಪನಿಯನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡ ಅವರು, ಎಲ್ಲರ ನಿರೀಕ್ಷೆಗೂ ಮೀರಿ ಎರಡೇ ವರ್ಷದಲ್ಲಿ ಕಂಪನಿಯ ಸಾಲವನ್ನು ಅರ್ಧಕ್ಕೆ ಇಳಿಸಿದ್ದಾರೆ. ಅಂದರೆ, 7,200 ಕೋಟಿ ರೂ. ಇದ್ದ ಕಂಪನಿಯ ಸಾಲವನ್ನು 3,100 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಈ ಮೂಲಕ ನೌಕರರಲ್ಲಿಯೂ ಆತ್ಮವಿಶ್ವಾಸ ತುಂಬಿದ್ದಾರೆ. ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ. ಕೆಫೆ ಕಾಫಿ ಡೇ ಸಾಮ್ರಾಜ್ಯವನ್ನು ಪುನರ್ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸಿದ್ಧಾರ್ಥ್ ಹೆಗಡೆ ವಿಧಿಗೆ ತಲೆ ಬಾಗಿ ಜೀವ ತೊರೆದರು. ಆದರೆ ಮಾಳವಿಕಾ ಹೆಗಡೆ ವಿಧಿಯನ್ನೇ ಎದುರಿಸಿ ನಿಂತ ಗಟ್ಟಿಗಿತ್ತಿ ಎನಿಸಿದರು.
ಇದಲ್ಲದೆ ಕಂಪನಿಯ ಭವಿಷ್ಯದ ಯೋಜನೆಗಳ ಕುರಿತು ಮಾಳವಿಕಾ ಹೆಚ್ಚು ಸ್ಪಷ್ಟವಾಗಿದ್ದಾರೆ. ಅವರ ಮುಂದಿನ ಯೋಜನೆಗಳ ಬಗ್ಗೆ ಅವರಿಗಿರುವ ಆತ್ಮವಿಶ್ವಾಸ ಎಂತಹದ್ದು ಎಂಬುದು ದಿ ಎಕನಾಮಿಕ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿಯೇ ಗೊತ್ತಾಗುತ್ತದೆ. ಅವರು ಕಂಪನಿಯ ಉಳಿವಿಗಾಗಿ ಪಟ್ಟ ಕಷ್ಟ ಅರ್ಥವಾಗುತ್ತದೆ. ಕಷ್ಟದ ಸಮಯದಲ್ಲಿ ಉದ್ಯೋಗಿಗಳು ಉತ್ಸುಕರಾಗಿದ್ದರು ಮತ್ತು ಬ್ಯಾಂಕ್ಗಳು ತಾಳ್ಮೆಯಿಂದ ಕಾಯುತ್ತಿವೆ ಎಂದು ಅವರು ಹೇಳಿದರು. ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇನೆ ಮತ್ತು ತನ್ನ ಗಂಡನ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತೇನೆ ಎಂದು ಸಂದರ್ನದಲ್ಲಿ ಹೇಳಿರುವುದು ಅವರಿಗಿರುವ ಮಹತ್ವಾಕಾಂಕ್ಷೆಯನ್ನು ತಿಳಿಸುತ್ತದೆ.
Read more…
[wpas_products keywords=”deal of the day”]