Karnataka news paper

ಪಾದಯಾತ್ರೆಗೆ ಕರೆದುಕೊಂಡು ಹೋಗಿ ಎಚ್‌.ಎಂ. ರೇವಣ್ಣಗೆ ಕೊರೊನಾ ಅಂಟಿಸಿದ್ದಾರೆ-ಆರಗ ಜ್ಞಾನೇಂದ್ರ


ಹೈಲೈಟ್ಸ್‌:

  • ಎಚ್‌.ಎಂ. ರೇವಣ್ಣ ಅವರನ್ನು ಪಾದಯಾತ್ರೆಗೆ ಕರೆದುಕೊಂಡು ಹೋಗಿ ಕೊರೊನಾ ಸೋಂಕು ಅಂಟಿಸಿ ಕಳುಹಿಸಿದ್ದಾರೆ
  • ಕಾಂಗ್ರೆಸಿಗರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ
  • ಪಾದಯಾತ್ರೆಯ ಬಗ್ಗೆ ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು ಎಂದ ಗೃಹ ಸಚಿವರು

ಬೆಂಗಳೂರು: ಪಾದಯಾತ್ರೆಗೆ ಕರೆದುಕೊಂಡು ಹೋಗಿ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ ಅವರಿಗೆ ಕೋವಿಡ್ ಅಂಟಿಸಿ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್‌.ಎಂ. ರೇವಣ್ಣರನ್ನು ಪಾದಯಾತ್ರೆಗೆ ಕರೆದುಕೊಂಡು ಹೋಗಿ ಕೋವಿಡ್ ಅಂಟಿಸಿ ಕಳುಹಿಸಿದ್ದಾರೆ. ಇದನ್ನು ನಾವು ಮಾಡಿದ್ದಾ? ಎಂದು ಪ್ರಶ್ನಿಸಿದರು.

ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರ ರಕ್ಷಣೆಯ ದೃಷ್ಟಿಯಿಂದ ಸಮಾಲೋಚನೆ ನಡೆಸಲಾಗುತ್ತಿದೆ. ಕಠಿಣ ನಿಯಮ ಜಾರಿಗೆ ಬರಬಹುದು. ಸದ್ಯ ಕೋವಿಡ್ ಪರಿಸ್ಥಿತಿ ಗಂಭೀರವಾಗಿ ಇಲ್ಲ. ಆದರೆ ಎರಡನೇ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿ ಏನಾಯ್ತು ಎಂಬುದನ್ನು ನೋಡಿದ್ದೇವೆ ಎಂದು ವಿವರಿಸಿದರು.

ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್‌ ನಿಯಮ ಉಲ್ಲಂಘನೆ; ಮತ್ತೆ 41 ಮಂದಿ ವಿರುದ್ಧ ಎಫ್‌ಐಆರ್‌
ಸರ್ಕಾರಕ್ಕೆ ಲಾಕ್‌ಡೌನ್ ಜಾರಿಗೊಳಿಸುವ ಇರಾದೆ ಇಲ್ಲ. ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಅದೊಂದು ವಿಧಾನ ಅಷ್ಟೇ. ವೀಕೆಂಡ್ ಲಾಕ್‌ಡೌನ್ ಸಂದರ್ಭದಲ್ಲಿಯೂ ಜನರು ಕಣ್ಣೀರು ಹಾಕಿದ್ದರು. ಪ್ರತಿನಿತ್ಯ ಅನ್ನಕ್ಕಾಗಿ ಪರದಾಡುವವರ ಮೇಲೆ ಲಾಕ್‌ಡೌನ್ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರ ಅಲ್ಲ. ಅದನ್ನು ಜಾರಿಗೊಳಿಸುವುದೂ ಇಲ್ಲ. ಸಿಎಂ ಕೂಡಾ ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಸೂಚನೆ ಅನುಸರಿಸುತ್ತೇವೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿಗೆ ಕೋವಿಡ್ ಪಾಸಿಟಿವ್; ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಪಾದಯಾತ್ರೆ ಬಗ್ಗೆ ಕಾಂಗ್ರೆಸ್‌ ಆಲೋಚಿಸಲಿ

ಪಾದಯಾತ್ರೆಯ ಬಗ್ಗೆ ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು. ಕಾಂಗ್ರೆಸ್ ಇದರಿಂದ ಗಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ. ಜನಸಾಮಾನ್ಯರೂ ಅವರ ಬಗ್ಗೆ ಅಸಮಾಧಾನ ಪಟ್ಟಿದ್ದಾರೆ. ಹೋರಾಟ ಮಾಡಲಿ. ಆದರೆ ಪಾದಯಾತ್ರೆ ನಡೆಸುವ ಸಮಯ ಯಾವುದು? ಜನರ ಜೀವನದ ಪ್ರಶ್ನೆ ಇದ್ದಾಗಲೂ ಪಾದಯಾತ್ರೆ ಮಾಡುತ್ತೇವೆ ಎಂದರೆ, ಅದು ಅವರಿಗೇ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪಿಪಿಆರ್ ರಿಪೋರ್ಟ್ ತಯಾರಿಸಲು ಐದು ವರ್ಷ ತೆಗೆದುಕೊಂಡರು. ಐದು ವರ್ಷ ಸಿಂಹಾಸನದ ಮೇಲೆ ಕುಳಿತಾಗ ‘ನಮ್ಮ ನೀರು, ನಮ್ಮ ಹಕ್ಕು’ ಅನ್ನೋದು ಕಾಂಗ್ರೆಸ್‌ನವರಿಗೆ ನೆನಪೇ ಆಗಲಿಲ್ಲ. ಈ ಸಂಬಂಧ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿ, “ಡಿಕೆ ಶಿವಕುಮಾರ್ ಬಾಡಿ ಲಾಂಗ್ವೇಜ್‌ ಬಗ್ಗೆ ನಾನು ಏನೂ ಹೇಳಲ್ಲ. ಈ ಬಗ್ಗೆ ನಿಮಗೇ ಗೊತ್ತಿದೆ. ಈ ರೀತಿ ದಾಷ್ಟ್ಯದ ಮಾತನ್ನು ಆಡುತ್ತಾ ಬಂದಿದ್ದಾರೆ. ನಾನು ಅದರ ಬಗ್ಗೆ ಯೋಚನೆ ಮಾಡಲ್ಲ. ಬೆಂಗಳೂರಿನ ಜನರ ರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಇದೆ ಪೊಲೀಸರು ಇದ್ದಾರೆ. ಕಾಂಗ್ರೆಸ್‌ನವರು ಸರ್ಕಾರ ನಡೆಸಿದವರು. ಅವರು ಇವತ್ತಲ್ಲ ನಾಳೆ ಈ ಬಗ್ಗೆ ಯೋಚನೆ ಮಾಡುತ್ತಾರೆ, ಪಾದಯಾತ್ರೆ ವಾಪಸ್ ಪಡೆಯುತ್ತಾರೆ ಎಂದು ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದರು.



Read more

[wpas_products keywords=”deal of the day sale today offer all”]