ಹೈಲೈಟ್ಸ್:
- ಕೊರೊನಾ ಸಂಕಷ್ಟ ಹಾಗೂ ಇನ್ನಿತರ ಸಮಸ್ಯೆಗಳಿಂದ ಅಶಕ್ತ ವರ್ಗದ ಜನರು ವ್ಯಾಪಾರ ಮಾಡಲು ತಡಕಾಡುತ್ತಿದ್ದಾರೆ
- ಸಾಲ ಕೊಡಲು ನೂರೆಂಟು ಷರತ್ತುಗಳನ್ನು ವಿಧಿಸುತ್ತಿರುವುದು ಬಡವರ ಆಸರೆಗೆ ಕಲ್ಲು ಹಾಕಿದಂತಾಗಿದೆ
- ಸಾಕಷ್ಟು ಅರ್ಜಿದಾರರು ಬ್ಯಾಂಕ್ಗಳ ವಿಳಂಬ ಧೋರಣೆಯಿಂದ ರೋಸಿ ಹೋಗಿದ್ದಾರೆ
ಚಿಕ್ಕಬಳ್ಳಾಪುರ: ಸರಕಾರಗಳು ಅಶಕ್ತ ವರ್ಗಗಳಿಗೆ ಸಾಲದ ಯೋಜನೆಗಳನ್ನು ಘೋಷಿಸಿ ಬಿಡುತ್ತವೆ. ಆದರೆ ಈ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಲು ನೂರೆಂಟು ಸಮಸ್ಯೆಗಳು ಸೃಷ್ಟಿಯಾಗಿವೆ. ಎಲ್ಲ ಪರಿಶೀಲಿಸಿ ಸಾಲ ಕೊಡಲು ಅರ್ಜಿಗಳನ್ನು ಕಳುಹಿಸಿದರೂ ಬ್ಯಾಂಕ್ಗಳು ಅಳೆದು ತೂಗಿ ಸಾಲ ಕೊಡುವಷ್ಟರಲ್ಲಿ ಬೇಡಪ್ಪ ಈ ಸಾಲದ ಸಹವಾಸ ಎನ್ನುವಂತಾಗಿದೆ.
ಕೊರೊನಾ ಸಂಕಷ್ಟ ಹಾಗೂ ಇನ್ನಿತರ ಸಮಸ್ಯೆಗಳಿಂದ ಅಶಕ್ತ ವರ್ಗದ ಜನರು ವ್ಯಾಪಾರ ಮಾಡಲು ತಡಕಾಡುತ್ತಿದ್ದಾರೆ. ಜೀವನ ನಡೆಸಲು ಕನಿಷ್ಠ ಬಂಡವಾಳ ಹೂಡಲು ಪರದಾಡುತ್ತಿದ್ದಾರೆ. ಇಂತಹ ಜನರಿಗೆ ಸರಕಾರ ಅಲ್ಪಮೊತ್ತದ ಸಾಲದ ಯೋಜನೆಗಳನ್ನು ಏನೋ ಘೋಷಿಸಿದೆ. ಆದರೆ ಕೆಲವು ಬ್ಯಾಂಕ್ಗಳಿಂದ ಇಂತಹ ಜನರಿಗೆ ಸಾಲ ಸಿಗುವುದೇ ಮರೀಚಿಕೆಯಂತಾಗಿಬಿಟ್ಟಿದೆ.
ನೂರೆಂಟು ಷರತ್ತು
ಆತ್ಮನಿರ್ಭರ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮೊದಲ ಹಂತದಲ್ಲಿ 10 ಸಾವಿರ, ಆನಂತರ 20 ಸಾವಿರ ರೂಪಾಯಿ ಸಾಲ ನೀಡುವ ಯೋಜನೆಯಿದೆ. ಬಡ್ಡಿರಹಿತವಾಗೇ ಸಾಲ ಕೊಡಬೇಕು. ಅದಾಗುತ್ತಿಲ್ಲ. ಬಡ್ಡಿಯನ್ನು ವಿಧಿಸುತ್ತಿದ್ದಾರೆ. ಆದರೂ ಸಾಲ ಕೊಡಲು ನೂರೆಂಟು ಷರತ್ತುಗಳನ್ನು ವಿಧಿಸುತ್ತಿರುವುದು ಬಡವರ ಆಸರೆಗೆ ಕಲ್ಲುಹಾಕಿದಂತಾಗಿದೆ.
ಫೈನಾನ್ಸ್ಗಳ ಮೊರೆ
ಪ್ರಧಾನಮಂತ್ರಿ ಸೌನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ತಲಾ 10 ಸಾವಿರ ಸಾಲ ಕೊಡಬೇಕು. ಆ ಸಾಲವನ್ನು ತೀರಿಸಿದರೆ ಮತ್ತೆ 20 ಸಾವಿರ ಸಾಲ ಕೊಡಬೇಕು. ವಿಪರ್ಯಾಸ ಎಂದರೆ ಮೊದಲ ಹಂತದ 10 ಸಾವಿರ ಸಾಲ ಪಡೆಯಲೇ ಫಲಾನುಭವಿಗಳು ಅಲೆದಾಡಿರುತ್ತಾರೆ. ಇನ್ನೊಂದೆಡೆ ಸಾಲ ವಸೂಲಿಗೆ ಹಿಂಸೆ ಕೊಡುವ ಕಾರಣ ಸಾಕಷ್ಟು ಬೀದಿಬದಿ ವ್ಯಾಪಾರಿಗಳು ಇದರ ಸಹವಾಸವೇ ಬೇಡ ಎಂದು ಬಡ್ಡಿ ಹೆಚ್ಚಾದರೂ ಸುಲಭವಾಗಿ ಸಿಗುವ ಸ್ಥಳೀಯ ಫೈನಾನ್ಸ್ನವರಿಂದಲೇ ಹಣ ಪಡೆದು ವ್ಯಾಪಾರ ಮಾಡುತ್ತಿದ್ದಾರೆ.
ಮುಟ್ಟಲಾಗುತ್ತಿಲ್ಲ ಗುರಿ
ಅಂದು ದುಡಿದು ಅಂದೇ ತಿನ್ನುವ ಜನರಿಗೆಂದೇ ಈ ಅಲ್ಪಮೊತ್ತದ ಸಾಲದ ವ್ಯವಸ್ಥೆ ಇದೆ. ಅಂತಹವರಿಗೆ ಬ್ಯಾಂಕ್ಗಳು ನೂರೆಂಟು ದಾಖಲೆ ಕೇಳಿ ಅಲೆದಾಡಿಸುತ್ತಿರುವ ಕಾರಣ ಸರಕಾರದ ಯೋಜನೆಗಳು ಘೋಷಣೆಯಾಗೇ ಉಳಿದಿವೆ. ಉದಾಹರಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3287 ಬೀದಿಬದಿ ವ್ಯಾಪಾರಿಗಳು ಸಾಲಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ 1961 ಜನರಿಗೆ ಮಾತ್ರ 10 ಸಾವಿರ ರೂಪಾಯಿ ಸಾಲ ಸಿಕ್ಕಿದೆ. ಇನ್ನು 20 ಸಾವಿರ ಸಾಲಕ್ಕಾಗಿ 132 ಮಂದಿ ಅರ್ಜಿ ಹಾಕಿದ್ದರು. ಆದರೆ ಸಿಕ್ಕಿರೋದು 48 ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ. ಸರಕಾರದ ಗುರಿಯಂತೆ 854 ಜನರಿಗೆ 2ನೇ ಅವಧಿಯ ಸಾಲ ಕೊಡಬೇಕಿತ್ತು. ಗುರಿ ಪ್ರಕಾರ ಇನ್ನು 722 ಮಂದಿಗೆ ಸಾಲ ಕೊಡಬೇಕಿದೆ.
ವಿಳಂಬ ಧೋರಣೆ
ಸಾಕಷ್ಟು ಅರ್ಜಿದಾರರು ಬ್ಯಾಂಕ್ಗಳ ವಿಳಂಬ ಧೋರಣೆಯಿಂದ ರೋಸಿ ಹೋಗಿದ್ದಾರೆ. 10 ಸಾವಿರ ಸಾಲ ಪಡೆಯಲು 2-3 ಸಾವಿರ ಖರ್ಚು ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಸಾಕಷ್ಟು ವ್ಯಾಪಾರಸ್ಥರು ಆ ಸಾಲದ ಕಡೆ ತಲೆಹಾಕಿ ಮಲಗುತ್ತಿಲ್ಲ. ಆದರೆ ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಹೇಳೋದೇ ಬೇರೆ. ಸಂಬಂಧಪಟ್ಟ ಇಲಾಖೆಯ ಅರ್ಜಿಗಳನ್ನು ಪರಿಶೀಲಿಸಿ ಎಲ್ಲ ಸರಿಯಾಗಿದ್ದರೆ ಫಲಾನುಭವಿಗಳಿಗೆ ಸಾಲ ಕೊಡುತ್ತಿದ್ದೇವೆ. ಫಲಾನುಭವಿಗಳ ಸಾಮರ್ಥ್ಯ ಆಧರಿಸಿ ಸಾಲ ಮಂಜೂರು ಕಾರ್ಯ ನಡೆಯುತ್ತಿದೆ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ.
ಇನ್ನೊಂದೆಡೆ ಸಾಲ ಕೊಟ್ಟ ಬ್ಯಾಂಕ್ಗಳು ಒಂದು ಕಂತಿನ ಸಾಲ ಮರುಪಾವತಿ ತಡವಾದರೂ ಮನೆಗಳ ಬಳಿ ಬಂದು ವಸೂಲಿಗೆ ನಿಲ್ಲುತ್ತಿರುವುದು ಫಲಾನುಭವಿಗಳಿಗೆ ಇರಿಸುಮುರಿಸು ಉಂಟಾಗಿದೆ. ಲಕ್ಷ ಲಕ್ಷ ಸಾಲ ಪಡೆದವರ ತಂಟೆಗೆ ಹೋಗದ ಬ್ಯಾಂಕ್ಗಳಿ ಅಲ್ಪಮೊತ್ತದ ಸಾಲದ ವಸೂಲಿಗೆ ಬಂದು ಆ ಖರ್ಚುನ್ನು ನಮ್ಮ ಮೇಲೆಯೇ ಹಾಕುತ್ತಿದ್ದಾರೆ. ಹೀಗಾಗಿ ಈ ಸಾಲದ ಸಹವಾಸವೇ ಬೇಡ ಎಂದು ಸಾಕಷ್ಟು ಫಲಾನುಭವಿಗಳು ಸಾಲ ಪಡೆಯಲು ಹೋಗುತ್ತಿಲ್ಲ.
ಸರಕಾರಿ ಯೋಜನೆಗಳಡಿ ಸಾಲ ಕೊಡಲು ಕೆಲವು ಬ್ಯಾಂಕ್ಗಳು ಭಾರೀ ವಿಳಂಬ ಧೋರಣೆ ಅನುಸರಿಸುತ್ತಿವೆ. ಫಲಾನುಭವಿಗಳ ಜೊತೆಯೂ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನಿಗದಿತ ಅವಧಿಯಲ್ಲಿ ಸಾಲ ಮಂಜೂರು ಮಾಡದೆ ಅಲೆದಾಡಿಸಿಕೊಳ್ಳುತ್ತಿದ್ದಾರೆ.
ವೆಂಕಟಾಚಲಪತಿ, ಜಿಲ್ಲಾಅಭಿಯಾನ ವ್ಯವಸ್ಥಾಪಕರು, ಜಿಲ್ಲಾಕೌಶಲಾಭಿವೃದ್ಧಿ ಇಲಾಖೆ
ಸರಕಾರಿ ಯೋಜನೆಗಳ ಅರ್ಹ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಸಾಮರ್ಥ್ಯ ಅನುಸಾರ ಸಾಲ ನೀಡಲಾಗುತ್ತಿದೆ. ಸಾಕಷ್ಟು ಫಲಾನುಭವಿಗಳು ಸಾಲ ಪಡೆದ ನಂತರ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿಲ್ಲ. ಕೆಲವರ ದಾಖಲೆಗಳು ಸಾಲ ಕೊಡಲು ಅರ್ಹತೆ ಹೊಂದಿರುವುದಿಲ್ಲ.
ಬಸವರಾಜ್, ವ್ಯವಸ್ಥಾಪಕರು, ಲೀಡ್ ಬ್ಯಾಂಕ್
Read more
[wpas_products keywords=”deal of the day sale today offer all”]