Karnataka news paper

ಯುಕೆಯಿಂದ ಬಂದ ಇಬ್ಬರಿಗೆ ಕೊರೊನಾ: ಐವರ ಮಾದರಿ ಜೆನೋಮ್‌ ಸೀಕ್ವೆನ್ಸ್‌ಗೆ ರವಾನೆ, ಶುರುವಾಯ್ತು ಓಮಿಕ್ರಾನ್‌ ಆತಂಕ


ಬೆಂಗಳೂರು: ಕರ್ನಾಟಕದಲ್ಲಿ ಮೂರನೇ ಓಮಿಕ್ರಾನ್‌ ಪತ್ತೆಯಾಗಿರುವ ಬೆನ್ನಲ್ಲೇ ಮತ್ತಷ್ಟು ಆತಂಕ ಶುರುವಾಗಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಿಂದ ಆಗಮಿಸಿದ ಪ್ರಯಾಣಿಕರ ಪೈಕಿ ಇಬ್ಬರಿಗೆ ಕೊರೊನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ.

ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರಿಗೆ ಕೊರೊನಾ ಇರುವುದು ಪತ್ತೆಯಾಗುತ್ತಿದೆ.

ಈಗ ಯುಕೆಯಿಂದ ಬಂದ ಮತ್ತಿಬ್ಬರು ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಆತಂಕದ ವಿಷಯದ ಎಂದರೆ ಸೋಮವಾರ ಒಂದೇ ದಿನ ವಿಮಾನ ನಿಲ್ದಾಣದಲ್ಲಿ ಐವರಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇವರೆಲ್ಲರೂ ವಿದೇಶದಿಂದ ಆಗಮಿಸಿದ್ದಾರೆ.

ಈಗ ಈ ಐವರ ಮಾದರಿಯನ್ನು ಜೆನೋಮ್‌ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ. ಇದರ ವರದಿ ಬರುವುದು ನಾಲ್ಕೈದು ದಿನಗಳಾಗಬಹುದು. ಈ ಹಿನ್ನೆಲೆಯಲ್ಲಿ ಈಗ ಓಮಿಕ್ರಾನ್‌ ಆತಂಕ ಶುರುವಾಗಿದೆ.

ಬೆಳಗ್ಗೆಯಿಂದ ಹಲವಾರು ಮಂದಿ ಕೆಐಎಬಿಗೆ ಬಂದಿದ್ದರು. ಈ ಪೈಕಿ ಎಲ್ಲರಿಗೂ ಪರೀಕ್ಷೆ ನಡೆಸಿದಾಗ ಐವರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಮುಂಜಾನೆ ಲಂಡನ್‌ನಿಂದ ಬಂದಿದ್ದ ಮೂವರಿಗೆ ಹಾಗೂ ಮಧ್ಯಾಹ್ನ ಬಂದ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 18 ವರ್ಷದ ಇಬ್ಬರು ಯುವತಿಯರಿಗೆ ಸೋಂಕು ಇದೆ.

ಕೊರೊನಾ ಪಾಸಿಟಿವ್‌ ದೃಢ ಹಿನ್ನೆಲೆ ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಎಲ್ಲರ ಸ್ಯಾಂಪಲ್ ಪಡೆದು ಜಿನೋಮ್‌ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಒಂದೇ ದಿನ ಐದು ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು ಆತಂಕದ ವಿಷಯವಾಗಿದೆ.

ಲಾಕ್‌ಡೌನ್‌ ಒಂದೇ ಅಂತಿಮ ಪರಿಹಾರವಲ್ಲ

ಬೆಂಗಳೂರು: ‘‘ಕೋವಿಡ್‌-19 ಸೋಂಕು ತಡೆಗೆ ಲಾಕ್‌ಡೌನ್‌ ಒಂದೇ ಅಂತಿಮ ಪರಿಹಾರವಲ್ಲ. ಮೊದಲ ಬಾರಿ ಲಾಕ್‌ಡೌನ್‌ ಮಾಡಿದ್ದಾಗ ಯಾವುದೇ ಪೂರ್ವ ತಯಾರಿ ಇರಲಿಲ್ಲ. ಈಗ ಕೋವಿಡ್‌ನ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಿಲ್ಲ,’’ ಎಂದು ಸರಕಾರ ಸ್ಪಷ್ಟಪಡಿಸಿದೆ.

‘ರಾಜ್ಯದಲ್ಲಿ ಸೋಂಕು ಕಂಡು ಬಂದ ಪ್ರದೇಶವನ್ನು ಕಂಟೈನ್ಮೆಂಟ್‌ ಜೋನ್‌ ಮಾಡುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಆಂದೋಲನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಆರೋಗ್ಯ ಮೂಲ ಸೌಕರ್ಯಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಅನೇಕ ತಾಲೂಕು ಆಸ್ಪತ್ರೆಗಳಲ್ಲೂ ಪಿಎಂ ಕೇರ್ಸ್ ಅಥವಾ ಸಿಎಸ್‌ಆರ್‌ ನಿಧಿ ಮೂಲಕ ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗಿದೆ’’ ಎಂದು ತಿಳಿಸಲಾಗಿದೆ.



Read more