ಹೈಲೈಟ್ಸ್:
- ಸಂಸ್ಥೆಯು ಜವಾಬ್ದಾರಿ ತೆಗೆದುಕೊಂಡ ಬಳಿಕ ಇಲ್ಲಿ ಯಾವುದೇ ಸಮರ್ಪಕ ವ್ಯವಸ್ಥೆ ಮಾಡಿಲ್ಲ
- ಆಡಳಿತ ನಿರ್ವಹಣೆಯನ್ನು ಪೂರ್ತಿಯಾಗಿ ಸರ್ಕಾರದ ಕೈಗೊಪ್ಪಿಸಬೇಕಿದೆ
- ಎಂಡೋ ಪೀಡಿತ ಸಂತ್ರಸ್ತರನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ
ಇಲ್ಲಿ ಆಯಾಗಳು ಮಾತ್ರ ಒಂದಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಇಲ್ಲಿನ ಸಿಬ್ಬಂದಿಗಳು ಕೇವಲ ಕಾಲ ಹರಣ ಮಾಡಿ ಎಂಡೋ ಸಂತ್ರಸ್ತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಇಲ್ಲಿ ಇತ್ತೀಚೆಗೆ ಇಲಿ ಸತ್ತಿರುವುದನ್ನು ತೆರವು ಮಾಡದೆ ಮೂರು ದಿನ ಅದೇ ದುರ್ವಾಸನೆ ಮಧ್ಯೆ ಸಂತ್ರಸ್ತರು ಕಾಲ ಕಳೆಯುವಂತಾಗಿತ್ತು. ಈ ಬಗ್ಗೆ ಪೋಷಕರು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ.
ಕನಿಷ್ಟ ಕೋವಿಡ್ ವ್ಯಾಕ್ಸಿನ್ ಪಡೆಯದ ಅನಿತಾ ಎನ್ನುವ ಸಿಬ್ಬಂದಿ ಯಾವುದೇ ಜವಾಬ್ದಾರಿ ಇಲ್ಲದೇ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಕರ್ತವ್ಯ ಲೋಪವೆಸಗುತ್ತಿದ್ದಾರೆ. ಮಕ್ಕಳಿಗೆ ಫಿಸಿಯೋಥೆರಪಿ ಕೂಡಾ ಸರಿಯಾಗಿ ಮಾಡುತ್ತಿಲ್ಲ. ಕೊಳೆತ ಹಣ್ಣುಗಳ ಜ್ಯೂಸ್, ಕಳಪೆ ಅಕ್ಕಿಯ ಅನ್ನವನ್ನು ಕೊಟ್ಟು ಮಕ್ಕಳ ಆರೋಗ್ಯ ಕೆಡುವಂತಾಗಿದೆ. ವಿಪರ್ಯಾಸವೆಂದರೆ ಈ ಬಗ್ಗೆ ಪ್ರಶ್ನಿಸಿದ ಸಿಬ್ಬಂದಿಯನ್ನೇ ಕೆಲಸದಿಂದ ವಜಾ ಮಾಡಿದ್ದಾರೆ.
ವಿದ್ಯುತ್ ಹೋದರೆ ಬದಲಿ ವ್ಯವಸ್ಥೆ ಇಲ್ಲ, ಫ್ಯಾನ್ ಇಲ್ಲ, ಕಟ್ಟಡ ದುರಸ್ಥಿ ಇಲ್ಲ, ಸುತ್ತಮುತ್ತಲೂ ಇರುವ ಕಾಡನ್ನೇ ತೆರವು ಮಾಡಿಲ್ಲ. ಇದರಿಂದಾಗಿ ಹುಳ ಹುಪ್ಪಟೆಗಳು, ಹಾವು, ಚೇಳುಗಳು ಕೂಡ ಕೇಂದ್ರದ ಒಳಗೆ ಬರುತ್ತಿವೆ. ಮಲ ವಿಸರ್ಜನೆಯ ಬಗ್ಗೆ ಅರಿವಿಲ್ಲದ ಮಕ್ಕಳಿಗೆ ಪ್ಯಾಡ್ ವ್ಯವಸ್ಥೆ ಮಾಡದೇ ಪಾಲಕಿಯೇ ಸ್ವಚ್ಚಗೊಳಿಸುತ್ತಿದ್ದಾರೆ. ಪ್ಯಾಡ್ ತರಲು ಹೇಳಿದ ಪಾಲಕಿಗೆ ಮ್ಯಾನೇಜರ್ ಬೈದು ಕಳಿಸಿದ್ದಾರೆ. ಜೊತೆಗೆ ಆ ಮಕ್ಕಳಿಗೆ ಪಿಯೋಥೆರಪಿ ಸ್ವೀಚ್ ಥೆರಪಿ ಮಾಡದೇ ಅವರನ್ನು ದೂರವಿಟ್ಟಿದ್ದಾರೆ.
ಈ ಹಿಂದೆ ಹುಡುಗನೊಬ್ಬನಿಗೆ ನಿದ್ದೆಯ ಮಾತ್ರೆ ಕೊಟ್ಟು ಅವನು ಅಸ್ವಸ್ಥನಾದ ಬಳಿಕ ಹೆದರಿದ ಪೋಷಕರು ಹುಡುಗನನ್ನು ಕೇಂದ್ರಕ್ಕೆ ಕಳುಹಿಸುತ್ತಿಲ್ಲ. ಈ ಸಂತ್ರಸ್ತನ ಪೋಷಕರಿಗೆ ಪಾಲನಾ ಕೇಂದ್ರದಿಂದ ದೂರವಾಣಿ ಕರೆ ಮಾಡಿ ಬಾಲಕನನ್ನು ಕೇಂದ್ರಕ್ಕೆ ಕಳುಹಿಸದೆ ಇದ್ದರೆ ಮಾಸಿಕ ಭತ್ಯೆ ಕಡಿತಗೊಳಿಸುವುದಾಗಿ ಬೆದರಿಸಿದ್ದಾರೆ. ಇಲ್ಲಿನ ಸಿಬ್ಬಂದಿ ಮಧ್ಯೆ ಕಿತ್ತಾಟ ನಡೆದು ಎಂಡೋ ಪೀಡಿತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇವರ ಅವ್ಯವಹಾರಗಳು ಗೊತ್ತಾಗಬಾರದೆಂದು ಇಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡುತ್ತಾರೆ. ಪಾಲನಾ ಕೇಂದ್ರದ ಒಳಗೆ ನಡೆಯುವ ಯಾವುದೇ ವಿಷಯವನ್ನು ಹೊರಗೆ ತಿಳಿಸಬಾರದೆಂದು ಬೆದರಿಕೆ ಒಡ್ಡಿರುತ್ತಾರೆ.
ಪಾಲನಾ ಕೇಂದ್ರದ ಅವ್ಯವಸ್ಥೆಯಿಂದಾಗಿ ಮೊದಲು 30 ರಿಂದ 35 ಮಕ್ಕಳಿದ್ದ ಪಾಲನಾ ಕೇಂದ್ರದಲ್ಲಿ ಈಗ 10 – 11 ಸೀಮಿತವಾಗಿದೆ. ಇಲ್ಲಿಯ ತನಕ ಪೋಷಕರ ಸಭೆ ಕರೆದಿಲ್ಲ, ಮಕ್ಕಳ ಚಿಕಿತ್ಸೆಯೂ ನುರಿತ ತಜ್ಞ ವೈದ್ಯರಿಂದ ಮಾಡಿಸುತ್ತಿಲ್ಲ. ಹಳೆ ಚಾಪೆಯಲ್ಲಿ ಎಂಡೋ ಪೀಡಿತ ಚಾಪೆಯಲ್ಲಿ ಮಲಗಿಸಿರುವುದನ್ನು ಫೋಟೋ ತೆಗೆದು ಜಿಲ್ಲಾಧಿಕಾರಿಯವರಿಗೆ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯು ಜವಾಬ್ದಾರಿ ತೆಗೆದುಕೊಂಡ ಬಳಿಕ ಇಲ್ಲಿ ಯಾವುದೇ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ ಆಡಳಿತ ನಿರ್ವಹಣೆಯನ್ನು ಪೂರ್ತಿಯಾಗಿ ಸರ್ಕಾರದ ಕೈಗೊಪ್ಪಿಸಿ ಎಂಡೋ ಪೀಡಿತ ಸಂತ್ರಸ್ತರನ್ನು ರಕ್ಷಣೆ ಮಾಡಬೇಕು. ಒಳ್ಳೆಯ ಸೇವಾ ಮನೋಭಾವದ ಸಿಬ್ಬಂದಿಗಳನ್ನು ನೇಮಿಸೋ ಮೂಲಕ ಅವರಿಗೆ ಬದುಕುವ ಹಕ್ಕು ಹಾಗೂ ಕೇಂದ್ರದಲ್ಲಿ ಪ್ರೀತಿ ಸಿಗುವಂತೆ ಮಾಡಬೇಕು ಎಂದು ದೂರಿನಲ್ಲಿ ಅಗ್ರಹಿಸಿರುವ ಪೋಷಕರು, ಇನ್ನು ಮುಂದೆ ಮಕ್ಕಳಿಗೆ ತೊಂದರೆಯಾದರೆ ಅಧಿಕಾರಿ ವರ್ಗದವರೇ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಸಿದ್ದಾರೆ.
Read more
[wpas_products keywords=”deal of the day sale today offer all”]