Karnataka news paper

ಕಾಯಿ ಕೀಳುವುದೂ ಈಗ ಘನ ಉದ್ಯೋಗ: ಮರ ಹತ್ತಲು ಸರಕಾರವೇ ನೀಡುತ್ತೆ ತರಬೇತಿ!


ಹೈಲೈಟ್ಸ್‌:

  • ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶ
  • ಮೈಸೂರು, ಮಂಡ್ಯ, ಚಾ.ನಗರದ 20 ಮಂದಿಗೆ ತರಬೇತಿ
  • ಮರ ಹೊಂದಿರುವವರಿಗೆ ಸಕಾಲದಲ್ಲಿ ಕೊಯ್ಲಿಗೆ ಅನುವು

ಎಸ್‌.ಕೆ.ಚಂದ್ರಶೇಖರ್‌ ಮೈಸೂರು
”ಟೈಮಿಗೆ ಸರಿಯಾಗಿ ಕಾಯಿ ಕೀಳೋರೇ ಸಿಗಲ್ಲ, ಈ ವೃತ್ತಿ ತಿಳಿದಿದ್ದವರು ನಗರಕ್ಕೆ ವಲಸೆ ಹೋಗಿದ್ದರೆ, ಇನ್ನು ಕೆಲವರು ವಯಸ್ಸಾಗಿದೆ ನಾನು ಮರ ಹತ್ತಲ್ಲಎನ್ನುತ್ತಿದ್ದಾರೆ. ಹೀಗಾದರೆ ನಮ್ಮ ಪಾಡು ಯಾರತ್ರ ಹೇಳೋಣ…” ತೆಂಗು ಹಾಗೂ ನಾನಾ ತೋಟಗಾರಿಕೆ ಬೆಳೆಗಾರ, ಮೈಸೂರು ತಾಲೂಕು ಮೇಗಳಾಪುರದ ಮಂಜಣ್ಣ ಅವರ ನೋವಿನ ನುಡಿ ಇದು.

ಈ ಸಮಸ್ಯೆ ಅವರದ್ದಷ್ಟೇ ಅಲ್ಲ ಸಾಕಷ್ಟು ತೆಂಗು ಬೆಳೆಗಾರರು ಎದುರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದನ್ನೆಲ್ಲ ಗಮನಿಸಿ ಮೈಸೂರಿನ ಇಲವಾಲದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ, ಇದೇ ಪ್ರಥಮ ಬಾರಿಗೆ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಭಾಗದವರಿಗೆ ಯಂತ್ರದ ಮೂಲಕ ತೆಂಗಿನ ಮರ ಹತ್ತಲು ತರಬೇತಿ ನೀಡಲು ಮುಂದಾಗಿದೆ. ಆ ಮೂಲಕ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ದೊರಕಿಸುವುದು ಹಾಗೂ ಮರ ಹೊಂದಿದವರು ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಿಸಲು ಅನುವು ಮಾಡಿಕೊಡಲಾಗುತ್ತಿದೆ.

ರಾಮನಗರ: ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗೆ ರೈತರ ನಿರಾಸಕ್ತಿ

ಮೊದಲ ಹಂತದಲ್ಲಿ 20 ಮಂದಿಗೆ ತರಬೇತಿ
ಇತ್ತೀಚಿನ ದಿನಗಳಲ್ಲಿ ತೆಂಗಿನ ಕಾಯಿಗಳನ್ನು ಕೀಳಲು ಅನುವಾಗುವಂತೆ ಹಲವು ಸಂಶೋಧನಾ ಕೇಂದ್ರಗಳು ಮರ ಹತ್ತುವ ಯಂತ್ರಗಳನ್ನು ಅಭಿವೃದ್ಧಿಪಡಿಸಿವೆ. ಈ ನಿಟ್ಟಿನಲ್ಲಿ ಯುವಕರಿಗೆ ಸ್ವ ಉದ್ಯೋಗ ಒದಗಿಸಲು, ಗ್ರಾಮಾಂತರ ಪ್ರದೇಶದಲ್ಲಿ ಎತ್ತರ ತಳಿಗಳನ್ನು ಕೊಯ್ಲು ಮಾಡುವ ನಿಟ್ಟಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಸಹಭಾಗಿತ್ವದೊಂದಿಗೆ 6 ದಿನ ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. 18 ರಿಂದ 60 ವರ್ಷದೊಳಗಿನ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದ 20 ಮಂದಿಯನ್ನೊಳಗೊಂಡ ತಂಡ ಈಗಾಗಲೇ ನೋಂದಾಯಿಸಿಕೊಂಡಿದ್ದು, ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಡಿ.28ರಿಂದ ಜ.2ರವರೆಗೆ ತರಬೇತಿ ನಡೆಯಲಿದೆ.

ಸ್ವ-ಉದ್ಯೋಗ: ಗ್ರಾಮೀಣ ಪ್ರದೇಶದ ಯುವಕರಿಗೆ ಸ್ವ ಉದ್ಯೋಗ, ತೆಂಗಿನ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ, ಸಮಗ್ರ ರೋಗ/ಕೀಟ ನಿರ್ವಹಣೆ, ಹೊಸ ತಾಂತ್ರಿಕತೆ, ಎತ್ತರ ತೆಂಗು ತಳಿಯಲ್ಲಿ ಕೊಯ್ಲು ಮಾಡುವ ವಿಧಾನ, ತೆಂಗಿನ ಬೆಳೆಯಲ್ಲಿ ಮೌಲ್ಯ ವರ್ಧನೆಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕರು, ಈ ತರಬೇತಿ ಪಡೆದು ಸ್ವಯಂ ಉದ್ಯೋಗ ಅಳವಡಿಸಿ ಸಮಗ್ರ ವೈಜ್ಞಾನಿಕ ಪದ್ಧತಿಗಳನ್ನು ತಮ್ಮ ತೆಂಗಿನ ತೋಟದಲ್ಲಿ ಅಳವಡಿಸಿಕೊಳ್ಳಬಹುದು. ಆ ಮೂಲಕ ಹೆಚ್ಚಿನ ಉತ್ಪಾದಕತೆಯನ್ನು ಪಡೆಯಬಹುದು.

ತೆಂಗು ಬೆಳೆಗಾರರಿಗೆ ವರದಾನ; ತೆಂಗಿನ ಮರದ ಕಲ್ಪರಸ ಶೀಘ್ರದಲ್ಲೇ ಮಾರುಕಟ್ಟೆಗೆ!

ನಗರವಾಸಿಗಳಿಗೂ ಅನುಕೂಲ
ಸರಸ್ವತಿಪುರಂ, ಶಾರದಾದೇವಿನಗರ, ಹೆಬ್ಬಾಳು, ಹಿನಕಲ್‌, ದಟ್ಟಗಳ್ಳಿ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ನಿವಾಸಿಗಳು ತಮ್ಮ ಮನೆಯ ಆಸು-ಪಾಸಿನಲ್ಲಿ ತೆಂಗಿನ ಮರಗಳನ್ನು ಸಲಹುತ್ತಿದ್ದಾರೆ. ಆದರೆ, ಸಕಾಲದಲ್ಲಿ ಕಾಯಿ ಕೊಯ್ಲು ಮಾಡುವವರು ದೊರೆಯದೆ ಕಲ್ಪವೃಕ್ಷದ ಸುತ್ತ ಕಬ್ಬಿಣದ ಜಾಲರಿಗಳನ್ನು ಹಾಕಿಸಿ ಅದರೊಳಗೆ ತೆಂಗಿನಕಾಯಿ ಬೀಳುವಂತೆ ಮಾಡಿದ್ದಾರೆ. ಈ ತರಬೇತಿಯಿಂದ ಒಂದಷ್ಟು ಜನರಿಗೆ ಉದ್ಯೋಗ ದೊರೆಯಲಿದ್ದು, ನಿವಾಸಿಗಳಿಗೂ ಕಾಯಿಕೀಳಿಸುವ ಸಮಸ್ಯೆ ಬಗೆಹರಿದಂತಾಗಿ ಇನ್ನಷ್ಟು ಜನರು ಕಲ್ಪವೃಕ್ಷ ಬೆಳೆಸಲು ಉತ್ತೇಜಿಸಿದಂತಾಗುತ್ತದೆ.

ಹೆಚ್ಚೆಚ್ಚು ತರಬೇತಿ ನೀಡಲಿ

ಈ ಹಿಂದೆ ಕಾಯಿ ಕೀಳುವುದನ್ನು ವೃತ್ತಿಯಾಗಿಸಿಕೊಂಡು ಕುಟುಂಬದ ಕಾಯಕ ಎಂಬಂತೆ ಕೆಲಸ ಮಾಡುವ ತಂಡವೇ ಗ್ರಾಮಗಳಲ್ಲಿತ್ತು. ಕೆಲವರು ಸಾಂಪ್ರದಾಯಿಕವಾಗಿ ಕಲಿತು ಕಾಯಿ ಕೀಳುವ ಕೆಲಸ ಮಾಡುತ್ತಾ ಒಂದಷ್ಟು ಹಣ ಗಳಿಸುತ್ತಿದ್ದರು. ಇನ್ನು ಕೆಲವರು ತೋಟ ಗುತ್ತಿಗೆ ಪಡೆಯುವ ಮೂಲಕ ವ್ಯಾಪಾರಸ್ಥರಿಗೆ ನೆರವಾಗುತ್ತಿದ್ದರು. ರೈತರು ಕೂಡ ಇವರು ಹೇಳುತ್ತಿದ್ದವರಿಗೇ ತೋಟಗಳನ್ನು ವರ್ಷದ ಗುತ್ತಿಗೆ ಕೊಡುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಹಳ್ಳಿಗಳನ್ನು ತಡಕಾಡಿದರೂ ಕಾಯಿ ಕೀಳುವ ವೃತ್ತಿವಂತರು ಸಿಗುತ್ತಿಲ್ಲ. ರೈತರು ಕಾಯಿ ಕೊಯ್ಲು ಸಮಯ ಬಂದರೆ, ಹತ್ತಾರು ಹಳ್ಳಿಗಳನ್ನು ತಿರುಗಿ ಕರೆ ತಂದು ಮೂರು ಪಟ್ಟು ಹಣ ನೀಡಿ ಕಾಯಿ ಕೀಳಿಸಬೇಕಿದೆ. ಹೆಚ್ಚಿನ ಶ್ರಮ, ಸಾಮರ್ಥ್ಯ, ಕೌಶಲ್ಯ ಬೇಡುವ ಈ ವೃತ್ತಿಗೆ ಈಗಿನ ತಲೆಮಾರಿನ ಯುವಕರು ಮುಂದೆ ಬರುತ್ತಿಲ್ಲ. ಈಗಿರುವ ಕೆಲ ಮಂದಿಗೂ ವಯಸ್ಸಾದರೆ ಈ ಕೆಲಸ ಮಾಡುವವರೇ ಇಲ್ಲವಾಗಿದೆ ಎಂಬುದು ರೈತರ ಅಭಿಪ್ರಾಯ.

ಎಳನೀರು ಬೆಳೆಗಾರರಿಗೆ ಮತ್ತೆ ಆತಂಕ: ಬೆಳೆದವರಿಗೆ ಮೂರಾಣೆ, ಮಧ್ಯವರ್ತಿಗಳಿಗೆ ಎಂಟಾಣೆ!

ತರಬೇತಿ ಪಡೆದು ಈ ಕಾಯಕದಲ್ಲಿ ತೊಡಗುವವರಿಗೆ ಪ್ರಾರಂಭದ ಒಂದು ವರ್ಷ ಆರೋಗ್ಯ ವಿಮೆ ಮಾಡಿಸಲಾಗುತ್ತಿದ್ದು, 2 ಲಕ್ಷ ರೂ. ವರೆಗೆ ಕವರೇಜ್‌ ಹೊಂದಿರುತ್ತದೆ. ತೆಂಗು ಅಭಿವೃದ್ಧಿ ಮಂಡಳಿ ಅನುದಾನ ಗಮನಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ ಶಿಬಿರ ಆಯೋಜಿಸಲಾಗುವುದು.
– ಡಾ.ಸಿದ್ದಪ್ಪ ಆರ್‌. ಸಹಾಯಕ ಪ್ರಾಧ್ಯಾಪಕ, ತೋಟಪಟ್ಟಿ ಮತ್ತು ಮಸಾಲೆ ಬೆಳೆಗಳ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು.



Read more