Karnataka news paper

ಸರ್ಕಾರಿ ಕೆಲಸ ಕೊಡಿಸಿ ಮದ್ವೆ ಆಗ್ತೀನಿ ಎಂದು ಯುವತಿಯರಿಗೆ ನಾಮ ಹಾಕಿದ್ದ ವಂಚಕ ಅಂದರ್..!


ಹೈಲೈಟ್ಸ್‌:

  • ವಿವಾಹದ ಆಮಿಷವೊಡ್ಡಿ ವಂಚಿಸುತ್ತಿದ್ದವನ ಸೆರೆ
  • ಹೆಸ್ಕಾಂ ಅಧಿಕಾರಿ ಎಂಬ ಸೋಗಿನಲ್ಲಿ ಕೃತ್ಯ
  • ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದ ಆರೋಪಿ

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಹೆಸ್ಕಾಂನ ಸೆಕ್ಷನ್‌ ಅಧಿಕಾರಿ ಎಂದು ಬರೆದುಕೊಳ್ಳುವುದರ ಜತೆಗೆ ಅಂದ ಚಂದದ ಫೋಟೋಗಳನ್ನು ಹಾಕಿ ಯುವತಿಯರನ್ನು ಆಕರ್ಷಿಸಿ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದವನನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಮೂಲದ ಜೈ ಭೀಮ್‌ ವಿಠಲ್‌ ಪಡುಕೋಟೆ (33) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಮೊಬೈಲ್‌, ನಿಸ್ಸಾನ್‌ ಕಾರು ವಶಪಡಿಸಿಕೊಳ್ಳುವುದರ ಜತೆಗೆ ಆತನ ಬ್ಯಾಂಕ್‌ ಖಾತೆಯಲ್ಲಿದ್ದ 1.66 ಲಕ್ಷ ರೂ. ತಡೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು, ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡ ಬಳಿಕ ಸರಕಾರಿ ಕೆಲಸ ಕೊಡಿಸುವುದಾಗಿ ತಿಳಿಸುತ್ತಿದ್ದ. ನಂಬಿಕೆ ಗಳಿಸಿದ ಬಳಿಕ ಕೆಲಸ ಕೊಡಿಸಿದ ನಂತರ ಮದುವೆಯಾಗುವುದಾಗಿ ಹೇಳುತ್ತಿದ್ದ. ಇದರಿಂದ ಮರುಳಾಗುತ್ತಿದ್ದ ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ.

ಜೈಲು ಸೇರಿದ್ದ ಆರೋಪಿ: ತಂದೆಯ ಸಾವಿನ ಬಳಿಕ ಕೆಲ ತಿಂಗಳ ಹಿಂದೆ ಅನುಕಂಪದ ಆಧಾರದ ಮೇಲೆ ಲೈನ್‌ಮ್ಯಾನ್‌ ಕೆಲಸಕ್ಕೆ ಸೇರಿದ್ದ ಜೈ ಭೀಮ್‌ ವಿಠಲ್‌ ಪಡುಕೋಟೆ, ನಗರದಲ್ಲಿ 8 ತಿಂಗಳು ಕಾರ್ಯನಿರ್ವಹಿಸಿದ್ದ. ಮುದ್ದೇಬಿಹಾಳದ ಸುನಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಈತ, ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾದಾಗ 2013ರಲ್ಲಿ ಆಕೆಯನ್ನು ಕೊಂದು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಇದಾದ ನಂತರ ಜೀವನ ನಿರ್ವಹಣೆಗೆ ಹಣ ಗಳಿಸಲು ವಂಚನೆ ಮಾಡಲು ಪ್ರಾರಂಭಿಸಿದ್ದ. ಆದರೆ, ಜೀವನ್‌ ಸಾಥಿ, ಭಾರತ್‌ ಮ್ಯಾಟ್ರಿಮೋನಿ ಸೇರಿ ಇನ್ನಿತರ ಆನ್‌ಲೈನ್‌ ವಿವಾಹ ವೇದಿಕೆಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ಸೆಕ್ಷನ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಮಾಹಿತಿ ಅಪ್‌ಲೋಡ್‌ ಮಾಡಿದ್ದ.

ಮೈಸೂರು ಅರಸರ ಸಂಬಂಧಿ ಹೆಸರಿನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಯುವತಿಯರಿಗೆ ವಂಚನೆ!
ವಂಚನೆ ಹೇಗೆ?

ಜೀವನ್‌ ಸಾಥಿ, ಭಾರತ್‌ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಖಾತೆ ತೆರೆದಿದ್ದ ಆರೋಪಿ, ವರನನ್ನು ಹುಡುಕುತ್ತಿರುವ ಯುವತಿಯರಿಗೆ ನಿಮ್ಮ ಪ್ರೊಫೈಲ್‌ ಇಷ್ಟವಾಗಿದೆ ಎಂದು ಸಂದೇಶ ಕಳುಹಿಸುತ್ತಿದ್ದ. ಅಲ್ಲದೆ, ಯುವತಿಯರ ಕುಟುಂಬದ ಬಗ್ಗೆ ಮಾಹಿತಿ ಪಡೆದುಕೊಂಡು ಹುಡುಗಿ ನೋಡಲು ಬರುವುದಾಗಿ ಹೇಳುತ್ತಿದ್ದ. ಆರೋಪಿಯ ಮಾತಿನ ಮೋಡಿಗೆ ಮರುಳಾಗಿ ಯುವತಿಯರು ಈತನ ಮಾತನ್ನು ನಂಬುತ್ತಿದ್ದರು. ಬಳಿಕ ಯುವತಿಯರೊಂದಿಗೆ ಸಲುಗೆಯಿಂದ ಮಾತನಾಡಿ ತಾನು ಹೆಸ್ಕಾಂನಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಪರಿಚಯವಿದೆ. ಇಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ನಿಮ್ಮ ಪರಿಚಿತರಿಗೆ ಬೇಕಾದರೆ ಇಲ್ಲಿ ಕೆಲಸ ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದ. ಆತನ ಮಾತನ್ನು ನಂಬುತ್ತಿದ್ದ ಅಮಾಯಕ ಯುವತಿಯರು ಸಂಬಂಧಿಕರಿಗೆ ಕೆಲಸ ಬೇಕು ಎಂದು ಹೇಳಿದರೆ, ಅವರ ಹೆಸರಿನಲ್ಲಿ ಈಗಾಗಲೇ 10 ಸಾವಿರ ರೂ. ಲಂಚ ಕೊಟ್ಟಿದ್ದೇನೆ. ಇನ್ನೂ 1 ರಿಂದ 2 ಲಕ್ಷ ರೂ. ಕೊಟ್ಟರೆ ಕೆಲಸ ಸಿಗುತ್ತದೆ ಎಂದು ನಂಬಿಸಿ ಆನ್‌ಲೈನ್‌ ಮೂಲಕವೇ ಹಣ ಪಡೆದುಕೊಳ್ಳುತ್ತಿದ್ದ.

ವಿವಾಹವಾಗಲು ಒಪ್ಪಿದ ಯುವತಿಯರು, ಆರೋಪಿ ಜೈ ಭೀಮ್‌ನನ್ನು ಭೇಟಿಯಾಗುತ್ತಿದ್ದರು. ಈ ವೇಳೆ ಯುವತಿಯರ ಬ್ಯಾಂಕ್‌ ದಾಖಲೆ, ಎಟಿಎಂ ಕಾರ್ಡ್‌ ವಿವರ ಪಡೆದು ಅವರ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದ ಯುವತಿಯರು ಹಣ ಹಿಂತಿರುಗಿಸುವಂತೆ ಸೂಚಿಸಿದರೆ ಅವರಿಗೆ ಬೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ.

6 ಮದುವೆಯಾದ ಬೆಂಗಳೂರಿನ ವಂಚಕನ ವಿರುದ್ಧ ದೂರು : ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್‌
21 ಲಕ್ಷ ರೂ. ವಂಚನೆ

ವಿವಾಹವಾಗುವುದಾಗಿ ನಂಬಿಸಿ 3 ಯುವತಿಯರ ಜತೆಗೆ ದೈಹಿಕ ಸಂಪರ್ಕ ಹೊಂದಿ ವಂಚಿಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದೆ. ಇದುವರೆಗೆ ಶಿವಮೊಗ್ಗ, ಹಾವೇರಿ, ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ರಾಯಚೂರು ಮೂಲದ ಒಟ್ಟು 26 ಯುವತಿಯರಿಂದ ಒಟ್ಟು 21.30 ಲಕ್ಷ ರೂ. ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಗಾಳ ಹಾಕಲು ಹೋಗಿ ಸಿಕ್ಕಿ ಬಿದ್ದ..!

ಪೊಲೀಸ್‌ ಇಲಾಖೆಯ ಮಹಿಳಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ವಿವಾಹವಾಗಲು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ವರನನ್ನು ಹುಡುಕುತ್ತಿದ್ದರು. ಈ ವೇಳೆ ಆರೋಪಿ ರಿಕ್ವೆಸ್ಟ್‌ ಕಳುಹಿಸಿ, ಬಳಿಕ ಸಂದೇಶ ಕಳುಹಿಸಿದ್ದ. ವಿವಾಹವಾಗುವುದಾಗಿಯೂ ತಿಳಿಸಿದ್ದ. ಆದರೆ, ಯುವತಿ ಈತನ ಬಗ್ಗೆ ಪರಿಶೀಲಿಸಿದಾಗ ಅನುಮಾನ ಬಂದ ಹಿನ್ನೆಲೆ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈತನನ್ನು ವಿಚಾರಣೆ ನಡೆಸಿದಾಗ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇಳಿವಯಸ್ಸಿನಲ್ಲಿ ಮದುವೆಯಾಗಲು ಮುಂದಾದ ವ್ಯಕ್ತಿಯನ್ನು ನಂಬಿಸಿ ವಂಚನೆ ಮಾಡಿ ಪರಾರಿಯಾದ ಮಹಿಳೆ



Read more

[wpas_products keywords=”deal of the day sale today offer all”]