ಹೈಲೈಟ್ಸ್:
- ಭಾರತ ಸೀಮಿತ ಓವರ್ಗಳ ತಂಡದ ನಾಯಕನಾಗಿ ರೋಹಿತ್ ಶರ್ಮಾ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ.
- ಮುಂಬರುವ ವಿಶ್ವಕಪ್ ಟೂರ್ನಿಗಳನ್ನು ಗೆಲ್ಲಲು ತಾನು ರೂಪಿಸಿರುವ ಮಾಸ್ಟರ್ ಪ್ಲಾನ್ ಅನ್ನು ರೋಹಿತ್ ಶರ್ಮಾ ತಿಳಿಸಿದ್ದಾರೆ.
- ಕಳೆದ ವಾರವಷ್ಟೇ ಭಾರತ ಸೀಮಿತ ಓವರ್ಗಳ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು.
ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 2013ರಲ್ಲಿ ಕೊನೆಯ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆದರೆ, ಅಂದಿನಿಂದ ಇಲ್ಲಿಯವರೆಗೂ ಭಾರತ ಐಸಿಸಿ ಟೂರ್ನಿಗಳಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಹಣಾಹಣಿಯಲ್ಲಿ ಸೋತು ನಿರಾಸೆ ಅನುಭವಿಸಿದೆ. ಅದರಂತೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಸೋಲುಂಡಿತ್ತು.
ಅಷ್ಟೇ ಅಲ್ಲದೆ ಕಳೆದ ತಿಂಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರ ನಡೆದಿತ್ತು. ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಕಳೆದ ವಾರದಲ್ಲಿ ರೋಹಿತ್ ಶರ್ಮಾಗೆ ಸೀಮಿತ ಓವರ್ಗಳ ಭಾರತ ತಂಡಕ್ಕೆ ನೂತನ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿತು.
‘ವಿರಾಟ್ ಇಲ್ಲದೇ ಇದ್ದರೂ ರೋಹಿತ್ ಏಷ್ಯಾ ಕಪ್ ಗೆದ್ದುಕೊಟ್ಟಿದ್ದಾರೆ’ ಎಂದ ಗಂಗೂಲಿ!
ಇತ್ತೀಚೆಗೆ ಬಿಸಿಸಿಐ ಟಿವಿಯಲ್ಲಿ ಭಾರತ ತಂಡ ಐಸಿಸಿ ಟೂರ್ನಿಯಲ್ಲಿನ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, “2013ರಲ್ಲಿ ನಾವು ಕೊನೆಯ ಬಾರಿ ಐಸಿಸಿ ಟೂರ್ನಿ ಗೆದ್ದಿದ್ದೇವೆ. ಆದರೆ, ಅಂದಿನಿಂದ ಇಲ್ಲಿಯವರೆಗೂ ನಾವು ಐಸಿಸಿ ಟ್ರೋಫಿ ಗೆದ್ದಿಲ್ಲ. ಆದರೆ ಒಂದಂತೂ ನಿಜ, ಚಾಂಪಿಯನ್ಸ್ ಟ್ರೋಫಿ ಬಳಿಕ ಇಲ್ಲಿಯವರೆಗೂ ನಾವು ಯಾವುದೇ ರೀತಿಯ ತಪ್ಪು ಮಾಡಿದ್ದೇವೆ ಎಂದು ನನಗೆ ಅನಿಸುತ್ತಿಲ್ಲ. ಒಂದು ತಂಡವಾಗಿ ನಾವು ಉತ್ತಮ ಪ್ರದರ್ಶನ ತೋರಿದ್ದೇವೆ. ಆದರೆ, ಮುಂದಿನ ಟೂರ್ನಿಗಳಲ್ಲಿ ಇನ್ನಷ್ಟು ಹೆಚ್ಚಿನ ಗಮನವನ್ನು ಕೇಂದ್ರಿಕರಿಸಲಿದ್ದೇವೆ,” ಎಂದರು.
“ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಈ ಕಾರಣದಿಂದ ಈ ಹಂತದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾವೆಲ್ಲರೂ ವೃತ್ತಿಪರರರಾಗಿದ್ದೇವೆ ಹಾಗೂ ಈ ಹಾದಿಯಲ್ಲಿ ನಾವು ಸರಿಯಾದ ಹೆಜ್ಜೆಯನ್ನು ಇಡಬೇಕಾದ ಅಗತ್ಯವಿದೆ. ಸರಿಯಾದ ಹಾದಿಯಲ್ಲಿ ನಾವು ಸಾಗಿದ್ದೇ ಆದಲ್ಲಿ ಮುಂದಿನ ಟೂರ್ನಿಗಳಲ್ಲಿ ನಮ್ಮ ಪರವಾಗಿ ಸಂಗತಿಗಳು ಮೂಡಿ ಬರಲಿವೆ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
‘ಕ್ಯಾಪ್ಟನ್ಸಿ ಇಲ್ಲದ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್ಮನ್’ ಎಂದ ಗಂಭೀರ್!
ಪ್ರಕ್ರಿಯೆಯನ್ನು ನಾವು ಹಿಂಬಾಲಿಸಬೇಕಿದೆ: ರೋಹಿತ್
ಗುರಿ ಮುಟ್ಟುವುದರ ಬದಲಿಗೆ ಪಂದ್ಯದ ಪ್ರಕ್ರಿಯೆಯನ್ನು ಹಿಂಬಾಲಿಸುವುದರ ಮೇಲೆ ನಾಯಕತ್ವ ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಭಾರತ ಸೀಮಿತ ಓವರ್ಗಳ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
“ಹೌದು, ಮುಂದಿನ ದಿನಗಳಲ್ಲಿ ಹಲವು ವಿಶ್ವಕಪ್ ಟೂರ್ನಿಗಳು ಬರಲಿವೆ. ಅದರಂತೆ ಈ ಟೂರ್ನಿಗಳಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ನಾವು ಐಸಿಸಿ ಚಾಂಪಿಯನ್ಷಿಪ್ಸ್ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾವು ಒಂದು ಗುಂಪಾಗಿ ಪ್ರಕ್ರಿಯೆಗಳನ್ನು ಹಿಂಬಾಲಿಸಬೇಕಾಗುತ್ತದೆ. ನೀವು ಒಂದು ಟೂರ್ನಿ ಗೆಲ್ಲಬೇಕಾದರೆ, ಇದರ ಹಿಂದಿನ ಹಲವು ಸಂಗತಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕಾಗುತ್ತದೆ,” ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದ್ದಾರೆ.
ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದ ರೋಹಿತ್ ಶರ್ಮಾ!
“ತಂಡದ ಸದಸ್ಯರಿಗೆ ನಾನು ಹೇಳ ಬಯಸುವ ಒಂದು ಅಂಶವೇನೆಂದರೆ, ಹುಡುಗರು ಸೆಮಿಫೈನಲ್ ಹಾಗೂ ಫೈನಲ್ ಬಗ್ಗೆ ಯೋಚಿಸದೆ, ಪ್ರಕ್ರಿಯೆಯ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸುವುದು ತುಂಬಾ ಮುಖ್ಯವಾಗುತ್ತದೆ. ಸಣ್ಣ-ಸಣ್ಣ ಗುರಿಗಳನ್ನು ಮುಟ್ಟಿದರೆ, ನಂತರ ನಾವು ಅಂದುಕೊಂಡಿರುವ ದೊಡ್ಡ ಗುರಿಯನ್ನು ತಲುಪಬಹುದು,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.