Karnataka news paper

ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡೋದೆ ಸಿದ್ದರಾಮಯ್ಯ ಸ್ವಭಾವ : ಬಿಎಸ್ ಯಡಿಯೂರಪ್ಪ


ಹೈಲೈಟ್ಸ್‌:

  • ಮಸೂದೆಗಳನ್ನು ವಿರೋಧ ಮಾಡೋದೆ ಸಿದ್ದರಾಮಯ್ಯ ಸ್ವಭಾವ
  • ಮಾಜಿ ಸಿಎಂ ವಿರುದ್ಧ ಗುಡುಗಿದ ಬಿಎಸ್‌ ಯಡಿಯೂರಪ್ಪ
  • ಸಮಸ್ಯೆ ವಿಷಯಾಂತರ ಮಾಡೋ ಉದ್ದೇಶದಿಂದ ಕಾಯ್ದೆ ಎಂದಿದ್ದ ಸಿದ್ದು

ಬೆಳಗಾವಿ: ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡುವುದೇ ಸಿದ್ದರಾಮಯ್ಯ ಸ್ವಭಾವ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ತರಬೇಕು. ಅನಗತ್ಯವಾಗಿ ವಿರೋಧ ಮಾಡದೆ ಕಾಂಗ್ರೆಸ್ ಸಹಕಾರ ಕೊಡಬೇಕು.
ಈ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಇದೆ. ನಮ್ಮ ರಾಜ್ಯದಲ್ಲೂ ಈ ಕಾಯ್ದೆ ತರ್ತೀವಿ ಎಂದರು.

ಸಿದ್ದರಾಮಯ್ಯ ಬಿಜೆಪಿ ತರೋ ಮಸೂದೆಗಳನ್ನು ವಿರೋಧ ಮಾಡೋದೆ ಅವರ ಸ್ವಭಾವ. ಇಂಥಹ ಕಾಯ್ದೆಗಳಿಗೆ ಸಿದ್ದರಾಮಯ್ಯ ವಿರೋಧ ಮಾಡುತ್ತಲೇ ಇದ್ದಾರೆ. ಕಾಂಗ್ರೆಸ್ ನ ಕೆಲವರಿಗೆ ಈ ಕಾಯ್ದೆ ತರೋದು ಇಷ್ಟ ಇದೆ. ಈ ಕಾಯ್ದೆಯನ್ನು ಕಾಂಗ್ರೆಸ್ ಅವರೇ ಕೆಲವರು ಸ್ವಾಗತ ಮಾಡ್ತಾ ಇದ್ದಾರೆ. ಬಹಳಷ್ಟು ಜನರಿಗೆ ಇದನ್ನು ತರಬೇಕು ಅಂತ ಇದ್ದಾರೆ ಎಂದರು.

ಸಿದ್ದರಾಮಯ್ಯ ಏನಂದರು?
ಜನಸಾಮಾನ್ಯರ ಸಮಸ್ಯೆ ವಿಷಯಾಂತರ ಮಾಡೋ ಉದ್ದೇಶದಿಂದ ಮತಾಂತರ ನೀಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಅಧಿವೇಶನಕ್ಕೂ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರ ನಿಷೇಧ ಕಾಯ್ದೆಯಲ್ಲಿ ರಾಜಕೀಯ ದುರುದ್ದೇಶ ಇದೆ. ಹಾಗಾಗಿಯೇ ಇದನ್ನು ತರಲು ಹೊರಟಿದ್ದಾರೆ.‌ ನಮ್ಮ ಸಂವಿಧಾನ ಬಹಳ ಸ್ಪಷ್ಟವಾಗಿ ಹೇಳಿದೆ. ಯಾವುದೇ ಧರ್ಮ ಪಾಲನೆ ಮಾಡುವ ಅವಕಾಶ ಇದೆ. ಆದರೆ,
ಬಲವಂತದ ಮತಾಂತರಕ್ಕೆ ಮಾತ್ರ ಅವಕಾಶವಿಲ್ಲ ಎಂದರು.

ಬಲವಂತದಿಂದ ಮಾಡಿದರೆ ತಪ್ಪು. ಈಗ ಕಾಯ್ದೆ ತರುವ ಅಗತ್ಯ ಏನಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಯಾವುದೋ ಧರ್ಮ ಜಾತಿಯವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ತೊಂದರೆ ಕೊಡುವ ಉದ್ದೇಶ ಇದರ ಹಿಂದಿದೆ. ವಿಧೇಯಕದ ಪ್ರಸ್ತಾವನೆಯನ್ನೇ ವಿರೋಧ ಮಾಡುತ್ತೇವೆ ಎಂದು ತಿಳಿಸಿದರು. ಇವತ್ತು ಅಧಿವೇಶನದಲ್ಲಿ ಪ್ರವಾಹ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ.

ಮಳೆ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ರಸ್ತೆ, ಸೇತುವೆ ಹಾನಿಯಾಗಿದೆ ಆದರೂ ಪರಿಹಾರ ಸಿಕ್ಕಿಲ್ಲ. ಬಿಟ್ ಕಾಯಿನ್, ಭ್ರಷ್ಟಾಚಾರದ ಆರೋಪ ಇದೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಈ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಮತಾಂತರ ನಿಷೇಧ ಕಾಯ್ದೆ ಎಂದು ತಿಳಿಸಿದ್ದಾರೆ. ಇದಕ್ಕೆ ಇದೀಗ ಯಡಿಯೂರಪ್ಪ ಅವರು ಈ ರೀತಿ ಉತ್ತರಿಸಿದ್ದಾರೆ.



Read more