Karnataka news paper

ನಿರ್ಬಂಧದ ನಡುವೆ ಭಾನುವಾರ ಮೇಕೆದಾಟು ಪಾದಯಾತ್ರೆ ಆರಂಭ, ಏನಾಗಲಿದೆ ಕ್ಲೈಮ್ಯಾಕ್ಸ್‌?


ಹೈಲೈಟ್ಸ್‌:

  • ನಿರ್ಬಂಧದ ನಡುವೆ ಭಾನುವಾರ ಸಂಗಮದಿಂದ ಆರಂಭವಾಗಲಿದೆ ಕಾಂಗ್ರೆಸ್‌ ಪಾದಯಾತ್ರೆ
  • ಕೋವಿಡ್‌ ಕರ್ಫ್ಯೂ, ಸೆಕ್ಷನ್‌ 144 ಜಾರಿ ನಡುವೆಯೂ 8.30ಕ್ಕೆ ಕಾವೇರಿ – ಅರ್ಕಾವತಿ ಸಂಗಮದಲ್ಲಿ ಪಾದಯಾತ್ರೆಗೆ ಚಾಲನೆ
  • ಯಾತ್ರೆ ತಡೆಯದಿರಲು, ಬಲ ಪ್ರಯೋಗ ಮಾಡದಿರಲು ಸರಕಾರದ ನಿರ್ಧಾರ
  • ಭಾನುವಾರದ ರಾಜಕೀಯ ಮೇಲಾಟ, ಪಾದಯಾತ್ರೆ ತೆಗೆದುಕೊಳ್ಳಲಿರುವ ತಿರುವು ಇನ್ನೂ ಅಸ್ಪಷ್ಟ

ರಾಮನಗರ/ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ಸರಕಾರ ಹಾಗೂ ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ಮೇಕೆದಾಟು ಜಟಾಪಟಿ ಇನ್ನಷ್ಟು ರೋಚಕತೆ ಪಡೆದುಕೊಂಡಿದೆ. ಕೋವಿಡ್‌ ಕರ್ಫ್ಯೂ, ಸೆಕ್ಷನ್‌ 144 ಜಾರಿ ನಡುವೆಯೂ ಭಾನುವಾರ ಬೆಳಗ್ಗೆ 8.30ಕ್ಕೆ ಕಾವೇರಿ ಹಾಗೂ ಅರ್ಕಾವತಿ ಸೇರುವ ಸಂಗಮದಿಂದ ಮೇಕೆದಾಟು ಪಾದಯಾತ್ರೆಗೆ ಚಾಲನೆ ದೊರೆಯಲಿದೆ.

ಈ ನಡುವೆ ಕಾಂಗ್ರೆಸ್‌ ಮುಖಂಡರ ಬಂಧನ, ಪಾದಯಾತ್ರೆಗೆ ತಡೆ ಇತ್ಯಾದಿ ಕಠಿಣ ಕ್ರಮಕ್ಕೆ ಮುಂದಾಗದಿರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಯಾವುದೇ ಬಲವಂತದ ಕ್ರಮದಿಂದ ಕಾಂಗ್ರೆಸ್‌ಗೇ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಡಿಕೆಶಿಯವರ ಕನಕಪುರದ ನಿವಾಸದಲ್ಲಿ ಶನಿವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿ ರೂಪುರೇಷೆ ಅಂತಿಮಗೊಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ, ಜಿ. ಪರಮೇಶ್ವರ ಮತ್ತಿತರರು ಭಾಗವಹಿಸಿದ್ದರು. ಬಳಿಕ ಶಿವಕುಮಾರ್‌ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಂದಿನ ತಂತ್ರಗಾರಿಕೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಮೇಕೆದಾಟು ಪಾದಯಾತ್ರೆಗೆ ಕ್ಷಣಗಣನೆ, ಘಟಾನುಘಟಿ ನಾಯಕರು ಭಾಗಿ; ಪೊಲೀಸರು, ಸರಕಾರಕ್ಕೆ ಸವಾಲಾದ ಯಾತ್ರೆ
‘ನೀರಿಗಾಗಿ ನಡಿಗೆ, ನಮ್ಮ ನೀರು-ನಮ್ಮ ಹಕ್ಕು’ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯಲಿದೆ. ಕೋವಿಡ್‌ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳೊಂದಿಗೆ ಸರಕಾರದ ಮಾರ್ಗಸೂಚಿ ಪಾಲಿಸುವುದರೊಂದಿಗೆ ಹೋರಾಟ ನಡೆಸಲಾಗುವುದು ಎಂಬುದು ಕಾಂಗ್ರೆಸ್‌ ಮುಖಂಡರ ವಾದ. ಆದರೆ, ವೀಕೆಂಡ್‌ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳ ನಡುವೆ ಹೋರಾಟಕ್ಕೆ ಮುಂದಾಗಿರುವುದರ ಪರಿಣಾಮಗಳ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ಡಿ.ಕೆ. ಶಿವಕುಮಾರ್‌ ಜತೆ ದೂರವಾಣಿ ಮೂಲಕ ಮಾತನಾಡಿ ವಿವರಿಸಿದ್ದಾರೆ.

ಅಲ್ಲದೆ ಜಿಲ್ಲಾಡಳಿತದ ಪರವಾಗಿ ಶನಿವಾರ ಮಧ್ಯಾಹ್ನ ಸಂಗಮದಲ್ಲಿಯೇ ಡಿಕೆ ಶಿವಕುಮಾರ್‌ ಅವರನ್ನು ರಾಮನಗರ ಎಸ್ಪಿ ಎಸ್‌. ಗಿರೀಶ್‌ ಸಹ ಭೇಟಿ ಮಾಡಿ, ಗೌಪ್ಯ ಸಭೆ ನಡೆಸಿದ್ದಾರೆ. ಇಲ್ಲಿ ಕಾನೂನು ಕ್ರಮ ಹಾಗೂ ಕೋವಿಡ್‌ ನಿಯಾಮವಳಿಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎನ್ನಲಾಗಿದೆ. ಹೀಗಿದ್ದರೂ ಭಾನುವಾರ ಏನೆಲ್ಲ ರಾಜಕೀಯ ಮೇಲಾಟ ನಡೆಯಲಿದೆ ಹಾಗೂ ಪಾದಯಾತ್ರೆ ಯಾವ ತಿರುವು ಪಡೆಯಲಿದೆ ಎಂಬುದು ಅಸ್ಪಷ್ಟವಾಗಿದೆ.

ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಮೇಕೆದಾಟು ಯೋಜನೆಗೆ ಅನುಮತಿ ಪಡೆದಿಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್‌ ಗೇಮ್‌ ಪ್ಲ್ಯಾನ್‌ ಏನು?

ಭಾನುವಾರ ಬೆಳಗ್ಗೆ ಸಂಗಮ ಸೇರಿ, ಅಲ್ಲಿ ಕಾವೇರಿ ದಡದಲ್ಲಿ ನಿರ್ಮಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ 12 ಕಿ.ಮೀ ನಡೆದು ಏಗ್ಗನೂರಿನಲ್ಲಿ ರಾತ್ರಿ ಕಳೆಯಲಿದ್ದಾರೆ. ಸದ್ಯದ ಮಟ್ಟಿಗೆ ನೂರಕ್ಕೂ ಹೆಚ್ಚು ಶಾಸಕರು (ವಿಧಾನ ಪರಿಷತ್‌ ಸದಸ್ಯರೂ ಸೇರಿ) ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಚಿತ್ರರಂಗದ ಹಲವು ಗಣ್ಯರೂ ಪಾಲ್ಗೊಳ್ಳಲಿದ್ದಾರೆ. ಪ್ರತಿ 20 ಮಂದಿಗೆ ಒಬ್ಬ ಯೂತ್‌ ಕಾಂಗ್ರೆಸ್‌ ಸದಸ್ಯರು ಉಸ್ತುವಾರಿ ಹೊರಲಿದ್ದಾರೆ. ಇನ್ನು ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಡಿಕೆಶಿಯನ್ನು ಬಂಧಿಸಿದರೆ, ಅವರ ಬದಲಿಗೆ ಸಿದ್ದರಾಮಯ್ಯ ಪಾದಯಾತ್ರೆ ಮುಂದುವರಿಸಲಿದ್ದಾರೆ. ಅವರನ್ನೂ ಬಂಧಿಸಿದರೆ, ಸಂಸದ ಡಿ.ಕೆ. ಸುರೇಶ್‌ ಹಾಗೂ ಇನ್ನುಳಿದ ಮುಖಂಡರು ಈ ಯಾತ್ರೆಯ ಹೊಣೆ ಹೊರಲಿದ್ದಾರೆ ಎಂಬುದು ಕಾಂಗ್ರೆಸ್‌ ಪ್ಲ್ಯಾನ್‌.

ಮೇಕೆದಾಟು ಪಾದಯಾತ್ರೆ ಹೋರಾಟ ಹತ್ತಿಕ್ಕಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದ ಡಿಕೆಶಿ
ಏನೇನು ಬೆಳವಣಿಗೆ?

* ನಮಗೆ ಅನುಮತಿ ಬೇಕಿಲ್ಲ, ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದ ಡಿಕೆ ಶಿವಕುಮಾರ್‌

* ಬೆಂಗಲಿಗರೊಂದಿಗೆ ದೇವಸ್ಥಾನ, ಮಸೀದಿಯ ಬೀಗ ತೆರೆದು ಡಿಕೆಶಿ ಪ್ರವೇಶ

* ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಲೋಕಸಭೆ-ರಾಜ್ಯಸಭೆ ಸದಸ್ಯರೂ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಶಾಸಕ-ಸಂಸತ್‌ ಸದಸ್ಯರು ಯಾತ್ರೆಯಲ್ಲಿ ಭಾಗಿ ನಿರೀಕ್ಷೆ.

* ಕೋವಿಡ್‌ ನಿಯಮ ಪಾಲಿಸುವಂತೆ ಸರಕಾರದಿಂದ ಜಿಲ್ಲಾಧಿಕಾರಿಗಳ ಮೂಲಕ ಸಂದೇಶ

* ಕನಕಪುರದಲ್ಲಿ ಶಾಸಕಾಂಗ ಪಕ್ಷದ ಸಭೆ, ಯಾತ್ರೆ ನಿಲ್ಲಿಸದಿರಲು ನಿರ್ಧಾರ

ಕೋವಿಡ್‌ ನಿಯಮ ಉಲ್ಲಂಘಿಸುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಪರವಾಗಿ ಡಿಕೆ ಶಿವಕುಮಾರ್‌ ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ಗಿರೀಶ್‌ ಸ್ಪಷ್ಟಪಡಿಸಿದ್ದಾರೆ.

ಇದು ರೈತರ ಪಾದಯಾತ್ರೆಯಲ್ಲ. ಹೈಟೆಕ್‌ ಕಾಂಗ್ರೆಸ್‌ ಕಾರ್ಯಕರ್ತರ ಪಾದಯಾತ್ರೆ. ಸದ್ಯಕ್ಕೆ ಆ ಭಾಗದಲ್ಲಿ ನೀರು ಚೆನ್ನಾಗಿಯೇ ಹರಿಯುತ್ತಿದೆ. ಇವರ ಕಾಲ್ಗುಣದಿಂದ ಬರಗಾಲ ಸೃಷ್ಟಿಯಾಗದಿದ್ದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ನಾಯಕರು ಹಠ ಬಿಟ್ಟು, ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರಕಾರದ ಜತೆ ಸಹಕರಿಸಬೇಕು.

ಆರಗ ಜ್ಞಾನೇಂದ್ರ, ಗೃಹ ಸಚಿವ

ಇದು ಆಕಸ್ಮಿಕ ಹೋರಾಟವಲ್ಲ. 2 ತಿಂಗಳ ಹಿಂದೆಯೇ ಈ ಬಗ್ಗೆ ನಿರ್ಧರಿಸಲಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಸರಕಾರ ವಿಳಂಬ ದ್ರೋಹ ಎಸಗುತ್ತಿದೆ. ಅದಕ್ಕಾಗಿ ಈ ಹೋರಾಟ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.



Read more

[wpas_products keywords=”deal of the day sale today offer all”]