Karnataka news paper

ಅಂಕೋಲಾ: ನೂರಲ್ಲ ಇನ್ನೂರಲ್ಲ, ಬರೋಬ್ಬರಿ 5000 ತೆಂಗಿನಕಾಯಿ ಬಿಟ್ಟು ಅಚ್ಚರಿಗೆ ಕಾರಣವಾದ ಕಲ್ಪವೃಕ್ಷ!


ಕಾರವಾರ: ಒಂದು ತೆಂಗಿನ ಮರದಲ್ಲಿ 50- 100 ತೆಂಗಿನಕಾಯಿಗಳಾಗುವುದು ಸರ್ವೇ ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಓರ್ವರ ಮನೆಯಲ್ಲಿನ ತೆಂಗಿನ ಮರ ಐದು ಸಾವಿರಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಹೊಂದಿ ಅಚ್ಚರಿಗೆ ಕಾರಣವಾಗಿದೆ.

ಹೌದು, ಒಂದು ತೆಂಗಿನ ಮರವೆಂದರೆ 50ರಿಂದ ನೂರು ಕಾಯಿಗಳಾಗುವುದನ್ನು ನಾವು ನೀವು ಕೇಳಿರ್ತೀವಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಳಾ ಬಂದರಿನ ಅನಿಲ್ ನಾಯ್ಕ ಎನ್ನುವವರ ಮನೆಯಲ್ಲಿನ ತೆಂಗಿನ ಮರವೊಂದರಲ್ಲಿ ಐದು ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳಾಗಿವೆ. 25 ವರ್ಷಗಳ ಹಿಂದೆ ಅನಿಲ್ ಅವರ ತಂದೆ ರಾಮ ನಾಯ್ಕ ಅವರು ಬೆಂಗಳೂರಿನಿಂದ ತೆಂಗಿನ ಸಸಿಯೊಂದನ್ನು ತಂದು ನೆಟ್ಟಿದ್ದರು. ಬೆಳೆದು ನಿಂತು ಐದು ವರ್ಷಗಳ ನಂತರ ಕಾಯಿ ನೀಡಲಾರಂಭಿಸಿದ ಈ ತೆಂಗು, ಮೊದ ಮೊದಲು ವರ್ಷಕ್ಕೆ ಕೇವಲ 50- 80 ಕಾಯಿಗಳನ್ನು ನೀಡುತ್ತಿದ್ದವು. ಆದರೆ ಬರಬರುತ್ತಾ ಈ ಕಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದ್ದು, ಸದ್ಯ ಐದು ಸಾವಿರಕ್ಕೂ ಹೆಚ್ಚು ಕಾಯಿಯಾಗಲಾರಂಭಿಸಿದೆ.
ಕೆಂಪಡಕೆ ದರವನ್ನೂ ಮೀರಿದ ಚಾಲಿ ಬೆಲೆ; ಹಳೆ ಅಡಕೆಗೆ ಮಾರ್ಕೆಟ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!
ಪ್ರತಿ ಗೊಂಚಲಲ್ಲಿ ಕನಿಷ್ಠವೆಂದರೂ ನಾಲ್ಕುನೂರು ಕಾಯಿಗಳಾಗಿವೆ. ಈ ತೆಂಗಿಗೆ ಯಾವುದೇ ಗೊಬ್ಬರವಾಗಲಿ, ರಾಸಾಯನಿಕವನ್ನಾಗಲಿ ಬಳಸುವುದಿಲ್ಲ. ಆದರೂ ಇಷ್ಟೆಲ್ಲ ಕಾಯಿಗಳಾಗುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಚಿಕ್ಕ ಚಿಕ್ಕ ಕಾಯಿಗಳಾಗಿದ್ದರೂ ಉತ್ತಮ ರುಚಿಯ ನೀರು ಈ ತೆಂಗಿನಲ್ಲಿದೆ. ಹೀಗಾಗಿ ಜನವರಿಯ ಸಮಯದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಇರುಮುಡಿ ಕಟ್ಟಲೆಂದು ಈ ಕಾಯಿಗಳನ್ನು ನೀಡಲಾಗುತ್ತದೆ. ಅದನ್ನ ಬಿಟ್ಟು ಅಧ್ಯಯನಕ್ಕೆ ಬರುವವರಿಗೆ ಕಾಯಿಗಳನ್ನು ನೀಡಲಾಗುತ್ತದೆ ಹೊರತು ದುಡ್ಡಿಗಾಗಿ ಕಾಯಿ ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಅನಿಲ ನಾಯ್ಕ.
ತರಕಾರಿ ಇಳುವರಿ ಇಳಿಕೆ, ಗಗನಮುಖಿಯಾದ ಬೆಲೆ; ಟೊಮೆಟೋ, ನುಗ್ಗೆಕಾಯಿ ಮುಟ್ಟಂಗಿಲ್ಲ!
ಇನ್ನು ಈ ತಳಿ ಅಪರೂಪದ್ದಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೀಗಾಗಿ ಈ ತಳಿಯನ್ನು ಅಧ್ಯಯನ ಮಾಡಲು ಸ್ಥಳೀಯ ನೆಲದನಿ ಸಸ್ಯ ಸಂಶೋಧನಾ ಸಂಸ್ಥೆ ಮುಂದಾಗಿದೆ. ಗಜನಿ ಪ್ರದೇಶದಲ್ಲಿ ಬೆಳೆದ ಈ ತೆಂಗಿಗೆ ಎ.ಆರ್.ಗಜ್ನಿ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡರೆ ರೈತರಿಗೆ ಹೆಚ್ಚು ಆದಾಯ ತರುವ ಬೆಳೆಯಾಗಬಲ್ಲದು ಎನ್ನುತ್ತಾರೆ. ನೆಲದನಿ ಸಸ್ಯ ಸಂಶೋಧನಾ ಸಂಸ್ಥೆಯ ಕೆ.ರಮೇಶ್. ಒಟ್ಟಾರೆಯಾಗಿ ಐದು ಸಾವಿರಕ್ಕೂ ಹೆಚ್ಚು ಕಾಯಿ ಬಿಟ್ಟು ಅಚ್ಚರಿ ಮೂಡಿಸಿರುವ ಈ ತೆಂಗಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ರೈತರಿಗೆ ಇದು ವರದಾನವಾಗಬಲ್ಲದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.



Read more