ಹೈಲೈಟ್ಸ್:
- ತಂದೆ ಮೃತರಾದ ನಂತರ ಆಸ್ತಿ ಪಾಲು ಮಾಡಿಕೊಂಡ ಮಕ್ಕಳು
- ತಾಯಿಗೆ ಎಳ್ಳಷ್ಟೂ ಪಾಲು ನೀಡದೆ ಮನೆಯಿಂದ ಆಚೆ ಹಾಕಿದರು..!
- ಇದೀಗ ಕಾನೂನು ಹೋರಾಟದಲ್ಲಿ ಮಕ್ಕಳ ವಿರುದ್ಧವೇ ಗೆದ್ದ ತಾಯಿ..!
ಮನೆಯಿಂದ ಹೊರ ಹಾಕಿದ್ದ ಸ್ವಂತ ಮಕ್ಕಳ ವಿರುದ್ಧವೇ ವೃದ್ದೆಯೊಬ್ಬರು ಕಾನೂನು ಹೋರಾಟ ಮಾಡಿ ಜಯ ಗಳಿಸಿದ ಘಟನೆ ಇದು.. ಈ ಘಟನೆ ನಡೆದಿರೋದು ಹಾವೇರಿ ಜಿಲ್ಲೆಯಲ್ಲಿ..
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವೀರಾಪೂರ ಗ್ರಾಮದ 76 ವರ್ಷದ ಪ್ರೇಮವ್ವ ಹವಳಣ್ಣನವರ್ ತನ್ನ ಮಕ್ಕಳ ವಿರುದ್ಧ ಹೋರಾಡಿ ಜಯ ಗಳಿಸಿದ ವೃದ್ದೆ.
ವೃದ್ದೆ ಪ್ರೇಮವ್ವ ಅವರ ಪತಿ ಶ್ರೀಕಾಂತ್ ತೀರಿ ಹೋಗಿ ಆರು ವರ್ಷಗಳೇ ಕಳೆದಿವೆ. ತಂದೆ ಶ್ರೀಕಾಂತ ಸಾವನ್ನಪ್ಪುತ್ತಿದ್ದಂತೆಯೇ ಗಂಡು ಮತ್ತು ಹೆಣ್ಣು ಮಕ್ಕಳು ಗೆ ವೃದ್ದೆಗೆ ಆಸ್ತಿಯಲ್ಲಿ ಯಾವುದೇ ಪಾಲು ಕಲ್ಪಿಸಿಲ್ಲ. ಅಲ್ಲದೆ ವೃದ್ದೆ ಪ್ರೇಮವ್ವಳಿಗೆ ಆಶ್ರಯ ನೀಡದೆ ಮನೆಯಿಂದ ಹೊರ ಹಾಕಿದ್ದಾರೆ.
ಸ್ವಂತ ಗಂಡು ಮಕ್ಕಳು ಮತ್ತು ಹೆಣ್ಣು ಮಗಳು ಮತ್ತು ಆಕೆಯ ಪತಿ ಸೇರಿ ವೃದ್ದೆ ಪ್ರೇಮವ್ವಳನ್ನ ಮನೆಯಿಂದ ಹೊರ ಹಾಕಿದ್ದಾರೆ. ಒಂದು ವರ್ಷದ ಹಿಂದೆ ಹೊರ ಹಾಕಲ್ಪಟ್ಟಿದ್ದ ವೃದ್ದೆ ಪ್ರೇಮವ್ವ ಅವರು, ಬೇರೆಯವರ ಸಹಾಯದಿಂದ ಹಾವೇರಿಯಲ್ಲಿರುವ ಸ್ವಧಾರಾ ಗೃಹದಲ್ಲಿ ಆಶ್ರಯ ಪಡೆದಿದ್ದಾಳೆ.
ಇಲ್ಲಿಯ ಮುಖ್ಯಸ್ಥೆ ಪರಿಮಳಾ ಜೈನ್ ಅವರು ವೃದ್ದೆಗೆ ಆಶ್ರಯ ನೀಡಿದ್ದಲ್ಲದೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ. ಅದರಂತೆ ಕಳೆದ ಕೆಲ ದಿನಗಳ ಹಿಂದೆ ಹಿರಿಯರ ನ್ಯಾಯಾಲಯದ ಮೂಲಕ ಇಬ್ಬರು ಮಕ್ಕಳಾದ ಸಂತೋಷ ಮತ್ತು ಧನಿಕುಮಾರ್ಗೆ ನೊಟೀಸ್ ಕಳಿಸಿದ್ದಾರೆ.
ವೃದ್ದೆ ಪ್ರೇಮವ್ವಳ ಜೀವನಕ್ಕೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡುವಂತೆ ತಿಳಿಸಿದ್ದಾರೆ. ಆದರೆ ಸಂತೋಷ ಮತ್ತು ಧನಿಕುಮಾರ್ ನೊಟೀಸ್ಗೆ ಕ್ಯಾರೆ ಅಂದಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯರ ನ್ಯಾಯಾಲಯದ ಮೆಟ್ಟಿಲೇರಿದ ಪರಿಮಳಾ ಜೈನ್, ವೃದ್ದೆಯ ಜೀವನಕ್ಕೆ ಮೂರು ಎಕರೆ 32 ಗುಂಟೆ ಜಮೀನು ನೀಡುವಂತೆ ಮನವಿ ಮಾಡಿದ್ದಾರೆ.
ನ್ಯಾಯಾಲಯ ಮಕ್ಕಳ ಹೆಸರಿನಲ್ಲಿದ್ದ ಆರು ಎಕರೆ 32 ಗುಂಟೆ ಜಮೀನಿನಲ್ಲಿ ಮೂರು ಎಕರೆ 32 ಗುಂಟೆ ಜಮೀನನ್ನ ವೃದ್ದೆ ಪ್ರೇಮವ್ವಳ ಹೆಸರಲ್ಲಿ ಮಾಡಿದೆ. ಅಲ್ಲದೆ ನೀನು ಜೀವಂತವಾಗಿರುವವರೆಗೆ ಈ ಆಸ್ತಿ ಅನುಭವಿಸು. ನೀನು ನಿಧನವಾದ ನಂತರ ಆಸ್ತಿ ನಿನ್ನ ಮಕ್ಕಳಿಗೆ ಹೋಗುತ್ತೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಮಕ್ಕಳು ಜಗಳ ತಗೆದರೆ ನೀನು ನಿಧನವಾದ ನಂತರ ಅವರಿಗೆ ಹೋಗಬೇಕಾದ ಆಸ್ತಿಯನ್ನೂ ತಡೆ ಹಿಡಿಯುವುದಾಗಿ ನ್ಯಾಯಾಲಯ ಭರವಸೆ ನೀಡಿದೆ.
ಇದರಿಂದ ಖುಷಿಗೊಂಡ ವೃದ್ದೆ ಪ್ರೇಮವ್ವ, ಇದೀಗ ತನ್ನ ಮನೆಗೆ ಹೋಗಲು ಉತ್ಸುಕಳಾಗಿದ್ದಾಳೆ. ಸ್ವಧಾರಾ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ್, ಹಾನಗಲ್ ತಹಶೀಲ್ದಾರ್ ಯರ್ರಿಸ್ವಾಮಿ ಮತ್ತು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಈ ಕಾರ್ಯಕ್ಕೆ ವೃದ್ದೆ ಸಂತಸ ವ್ಯಕ್ತಪಡಿಸಿದ್ದಾಳೆ.
ಸ್ವಂತ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ನನ್ನನ್ನ ಮನೆಯಿಂದ ಹೊರ ಹಾಕಿದರು. ಆದರೆ ಈ ಅಧಿಕಾರಿಗಳು ತಮ್ಮ ಸ್ವಂತ ತಾಯಿಯ ರೀತಿ ನನಗೆ ನ್ಯಾಯ ದೊರಕಿಸಿದ್ದಾರೆ ಎನ್ನುತ್ತಿದ್ದಾಳೆ ಪ್ರೇಮವ್ವ. ಹಾಲಿನಂತಿದ್ದ ಮನೆಯನ್ನ ಗಂಡು ಮಕ್ಕಳು ಸೊಸೆಯಂದಿರು ಒಡೆದು ಹಾಕಿದ್ದರು. ಈಗ ಮತ್ತೆ ತನ್ನ ಹಾಲಿನಂತ ಮನೆತನ ಕಟ್ಟುವ ವಿಶ್ವಾಸವನ್ನ ಪ್ರೇಮವ್ವ ವ್ಯಕ್ತಪಡಿಸುತ್ತಿದ್ದಾಳೆ.
Read more
[wpas_products keywords=”deal of the day sale today offer all”]