ಹೈಲೈಟ್ಸ್:
- ಓಮಿಕ್ರಾನ್ ಸೌಮ್ಯ ಸ್ವಭಾವದ್ದು ಎಂದು ಹೇಳುವುದು ಸೂಕ್ತವಲ್ಲ
- ಓಮಿಕ್ರಾನ್ನಿಂದ ಆಸ್ಪತ್ರೆ ದಾಖಲಾಗುವಿಕೆ, ಸಾವು ಹೆಚ್ಚಾಗುತ್ತಿದೆ
- ಹೊಸ ತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಕಠಿಣ ಎಚ್ಚರಿಕೆ
- ಓಮಿಕ್ರಾನ್ ಒಂದು ಸಾಮಾನ್ಯ ಶೀತ ಎಂದು ನಿರ್ಲಕ್ಷಿಸುವುದು ಬೇಡ
ಓಮಿಕ್ರಾನ್ ತಳಿಯ ಕೊರೊನಾ ವೈರಸ್ ಅಪಾಯಕಾರಿಯಲ್ಲ. ಅದು ವೇಗವಾಗಿ ಹರಡುತ್ತದೆ ಹಾಗೂ ಲಘು ಲಕ್ಷಣಗಳನ್ನು ತೋರಿಸುತ್ತದೆಯೇ ವಿನಾ, ಡೆಲ್ಟಾ ತಳಿಯಷ್ಟು ಮಾರಣಾಂತಿಕವಲ್ಲ ಎಂದು ಅನೇಕ ವಿಜ್ಞಾನಿಗಳು ಹೇಳಿದ್ದಾರೆ. ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಕೂಡ ಇತ್ತೀಚೆಗೆ ಅದನ್ನು ಪುನರುಚ್ಚರಿಸಿದ್ದರು. ಆದರೆ ಡಬ್ಲ್ಯೂಎಚ್ಒ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ.
ದಾಖಲೆಯ ಸಂಖ್ಯೆಯಲ್ಲಿ ಜನರು ಓಮಿಕ್ರಾನ್ ಹೊಸ ತಳಿಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ. ಅನೇಕ ದೇಶಗಳಲ್ಲಿ ಅದು ಹಿಂದೆ ಆರ್ಭಟ ಮೆರೆದಿದ್ದ ಡೆಲ್ಟಾವನ್ನು ಮೀರಿಸುವಂತೆ ಅದು ವ್ಯಾಪಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ಕಡಿಮೆ ಅಪಾಯಕಾರಿಯಂತೆ ಕಾಣಿಸುತ್ತಿದೆ. ಅದರಲ್ಲಿಯೂ ಮುಖ್ಯ ಲಸಿಕೆ ಪಡೆದವರಿಗೆ ಹೆಚ್ಚು ಅಪಾಯ ಉಂಟುಮಾಡಿಲ್ಲ. ಹಾಗೆಂದು ಇದನ್ನು ‘ಸೌಮ್ಯ’ ತಳಿ ಎಂದು ವರ್ಗೀಕರಿಸುವುದು ಸರಿಯಲ್ಲ’ ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
‘ಹಿಂದಿನ ಪ್ರಭೇದಗಳಂತೆಯೇ ಓಮಿಕ್ರಾನ್ ಕೂಡ ಜನರು ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತಿದೆ ಮತ್ತು ಸೋಂಕಿತರನ್ನು ಸಾಯಿಸುತ್ತಿದೆ. ವಾಸ್ತವವಾಗಿ ಪ್ರಕರಣಗಳ ಸುನಾಮಿಯು ಭಾರಿ ದೊಡ್ಡದಾಗಿದೆ ಹಾಗೂ ವೇಗವಾಗಿದೆ. ಇದು ಜಗತ್ತಿನಾದ್ಯಂತ ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ತಿಳಿಸಿದ್ದಾರೆ.
ಕಳೆದ ವಾರ ಜಾಗತಿಕ ಕೋವಿಡ್ 19 ಪ್ರಕರಣಗಳ ಸಂಖ್ಯೆ ಶೇ 71ರಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ಶೇ 100ರಷ್ಟು ಹೆಚ್ಚಳ ಕಂಡಿದೆ. ಜಗತ್ತಿನಾದ್ಯಂತ ಇರುವ ಗಂಭೀರ ಪ್ರಕರಣಗಳಲ್ಲಿ ಶೇ 90ರಷ್ಟು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದ್ದಾರೆ.
ಸಿರಿವಂತ ದೇಶಗಳ ವಿರುದ್ಧ ಆರೋಪ
ಶ್ರೀಮಂತ ದೇಶಗಳು ಲಭ್ಯವಿರುವ ಲಸಿಕೆಗಳನ್ನು ಕಳೆದ ವರ್ಷ ಬಾಚಿಕೊಂಡಿದ್ದವು. ಇದು ಹೊಸ ತಳಿ ವೈರಸ್ಗಳ ಸೃಷ್ಟಿಗೆ ಸೂಕ್ತವಾಗಿ ತಳಹದಿ ನಿರ್ಮಿಸಲು ಕಾರಣವಾಯಿತು ಎಂದು ಟೆಡ್ರೊಸ್ ಆರೋಪಿಸಿದ್ದಾರೆ. 2022ರಲ್ಲಿ ಲಸಿಕೆಗಳನ್ನು ಸಮರ್ಪಕ ರೀತಿಯಲ್ಲಿ ಹಂಚಿಕೊಳ್ಳುವ ಮೂಲಕ ಕೋವಿಡ್ 19ರ ಸಾವು ಹಾಗೂ ವಿನಾಶವನ್ನು ಅಂತ್ಯಗಾಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಓಮಿಕ್ರಾನ್ ಅಂತ್ಯವಲ್ಲ!
ಓಮಿಕ್ರಾನ್ ತಳಿ ಸೋಂಕು, ಕೊರೊನಾ ವೈರಸ್ ಸಾಂಕ್ರಾಮಿಕ ಅಂತ್ಯಗೊಳ್ಳುವ ಮುಂಚಿನ ಕೊನೆಯ ತಳಿ ಆಗಿರುವುದು ಸಾಧ್ಯವೇ ಇಲ್ಲ ಎಂದು ಡಬ್ಲ್ಯೂಎಚ್ಒ ಕೋವಿಡ್ 19 ತಾಂತ್ರಿಕ ತಂಡದ ಮುಖ್ಯಸ್ಥೆ ಮರಿಯಾ ವಾನ್ ಕೆರ್ಖೋವ್ ಹೇಳಿದ್ದಾರೆ.
‘ಓಮಿಕ್ರಾನ್ ಕೇವಲ ಸಾಮಾನ್ಯ ಶೀತವಲ್ಲ. ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ನಲ್ಲಿ ಆಸ್ಪತ್ರೆಗೆ ದಾಖಲಾಗುವ ಅಪಾಯ ಕಡಿಮೆ ಎಂದು ಕೆಲವು ವರದಿಗಳು ತಿಳಿಸಿವೆ. ಆದರೂ ಓಮಿಕ್ರಾನ್ ಸೋಂಕು ತಗುಲಿದ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಓಮಿಕ್ರಾನ್ ಮಾಮೂಲಿ ಶೀತವಲ್ಲ’ ಎಂದು ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಕೂಡ ಹೇಳಿದ್ದಾರೆ. ‘ಓಮಿಕ್ರಾನ್ ಕಾರಣದಿಂದ ಆರೋಗ್ಯ ವ್ಯವಸ್ಥೆ ಒತ್ತಡಕ್ಕೆ ಸಿಲುಕಬಹುದು. ಪ್ರಕರಣಗಳ ಏರಿಕೆಯು ಹಠಾತ್ ಮತ್ತು ಭಾರಿ ದೊಡ್ಡ ಪ್ರಮಾಣದಲ್ಲಿ ಉಂಟಾಗಬಹುದು. ಹೀಗಾಗಿ ಹೆಚ್ಚಿನ ಸಂಖ್ಯೆಯ ರೋಗಿಗಳ ಪರೀಕ್ಷೆ, ಸಲಹೆ ಹಾಗೂ ನಿಗಾದ ವ್ಯವಸ್ಥೆ ಹೊಂದಿರುವುದು ಬಹಳ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
Read more
[wpas_products keywords=”deal of the day sale today offer all”]