Karnataka news paper

339 ಕೋಟಿ ರೂ ವೆಚ್ಚದ ಶ್ರೀ ಕಾಶಿ ವಿಶ್ವನಾಥ ಧಾಮ: ಏನಿದು ಯೋಜನೆ? ಇದರ ವಿಶೇಷತೆಗಳೇನು?


ಹೈಲೈಟ್ಸ್‌:

  • ಕಾಶಿ ವಿಶ್ವನಾಥ ದೇವಾಲಯದ ಸುತ್ತಲಿನ ಆವರಣದ ಅಭಿವೃದ್ಧಿ
  • 339 ಕೋಟಿ ರೂ ವೆಚ್ಚದ ಒಂದನೇ ಹಂತದ ಯೋಜನೆ ಉದ್ಘಾಟನೆ
  • 40ಕ್ಕೂ ಹೆಚ್ಚು ಪುರಾತನ ದೇವಸ್ಥಾನಗಳಿಗೆ ಕಾಯಕಲ್ಪ, ಹೊಸ ರೂಪ
  • ದೇವಾಲಯದ ಸುತ್ತಲೂ ಹಲವು ಸೌಲಭ್ಯಗಳುಳ್ಳ 23 ಕಟ್ಟಡಗಳು

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಭವ್ಯವಾದ ಕಾಶಿ ವಿಶ್ವನಾಥ್ ಧಾಮ ಕಾರಿಡಾರ್ ಅನ್ನು ಸೋಮವಾರ ಉದ್ಘಾಟಿಸುತ್ತಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನವನ್ನು ಗಂಗಾ ನದಿಯೊಂದಿಗೆ ಸಂಪರ್ಕಿಸುವ ಸುಲಭ ಮಾರ್ಗವನ್ನು ನಿರ್ಮಿಸುವುದು ಪ್ರಧಾನಿ ಮೋದಿ ಅವರ ದೀರ್ಘಕಾಲದ ಕನಸಾಗಿತ್ತು. ಅದು ಈಡೇರುತ್ತಿದೆ. 2019ರ ಮಾರ್ಚ್ 8ರಂದು ಪ್ರಧಾನಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.

ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ನ ಮೊದಲ ಹಂತವನ್ನು ಪ್ರಧಾನಿ ಉದ್ಘಾಟಿಸುತ್ತಿದ್ದು, ಇದು ಸುಮಾರು 339 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಕಾಶಿ ವಿಶ್ವನಾಥ ಧಾಮ ಉದ್ಘಾಟನೆಗೆ ಕ್ಷಣಗಣನೆ..! ಸೋಮವಾರ ಸಾಧು ಸಂತರ ಜೊತೆ ಪ್ರಧಾನಿ ಮೋದಿ ಲೋಕಾರ್ಪಣೆ
ಈ ಯೋಜನೆಯು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಹರಡಿದ್ದು, 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಮತ್ತು ಹೊಸ ಸೌಂದರ್ಯ ಪಡೆದುಕೊಂಡಿವೆ. ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದ್ದು, ಆಕರ್ಷಕ ಶಿಲ್ಪ ಕಲೆಗಳಿಂದ ಪ್ರವಾಸಿಗರು, ಭಕ್ತರನ್ನು ಸೆಳೆಯುವ ಗುರಿ ಹೊಂದಲಾಗಿದೆ. ಜತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿಗಳು, ಆಹಾರ ಮಳಿಗೆ ಮುಂತಾದವು ಇದರಲ್ಲಿ ಸೇರಿವೆ.

ಕಾಶಿ ವಿಶ್ವನಾಥ ದೇವರ ಸುಗಮ ಮತ್ತು ಸುರಕ್ಷಿತ ದರ್ಶನ ಹಾಗೂ ಪೂಜೆಗಾಗಿ ಮೂರು ಪ್ರಯಾಣಿಕ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಲಾಕರ್‌ಗಳು, ಟಿಕೆಟ್ ಕೌಂಟರ್‌ಗಳು, ಅಂಗಡಿಗಳಂತಹ ಸೌಲಭ್ಯಗಳು ಸಿಗಲಿವೆ.

ಮರ-ಗಿಡಗಳ ಅಲಂಕಾರ
ಈ ಮೊದಲು ಆವರಣವು 3000 ಚದರ ಅಡಿಗಳಷ್ಟು ಮಾತ್ರ ವ್ಯಾಪ್ತಿ ಹೊಂದಿತ್ತು. ಅದನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿ 5 ಲಕ್ಷ ಚದರ ಅಡಿಯಷ್ಟು ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ ನಿರ್ಮಿಸಲಾದ ಕಾಶಿ ಕಾರಿಡಾರ್ ರುದ್ರಾಕ್ಷ, ಪಾರಿಜಾತ, ನೆಲ್ಲಿ, ಅಶೋಕ ಮುಂತಾದ ಮರಗಳನ್ನು ಬೆಳಸಲಾಗುತ್ತದೆ. ದೇವಸ್ಥಾನದ ಆವರಣದ ಸುತ್ತ ಹಾಗೂ ಮಂದಿರ ಚೌಕಗಳುದ್ದಕ್ಕೂ ಮರಗಳನ್ನು ಬೆಳೆಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆ ಸಂದೇಶ ನೀಡಲಾಗುತ್ತದೆ.
ಡಿ. 13ರಂದು ಪ್ರಧಾನಿಯಿಂದ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆ, ದೇಶದ 51,000 ಸ್ಥಳಗಳಲ್ಲಿ ಲೈವ್‌
ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಈ ಮಹತ್ವದ ಯೋಜನೆಯ ಲೋಕಾರ್ಪಣೆ ಸಲುವಾಗಿ ಕಂಗೊಳಿಸುವ ದೀಪಾಲಂಕಾರಗಳನ್ನು ಮಾಡಲಾಗಿದೆ. ನಗರದಲ್ಲಿನ ಸುಮಾರು 8 ಲಕ್ಷ ಮನೆಗಳಿಗೆ ಅಂದಾಜು 28-30 ಲಕ್ಷ ಲಡ್ಡುಗಳನ್ನು ವಿತರಿಸಲು ವಾರಾಣಸಿ ಜಿಲ್ಲಾಡಳಿತ ಮುಂದಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸುವ ಕರಪತ್ರಗಳನ್ನು ಹಂಚಲಾಗುತ್ತಿದೆ.

ಬಿಜೆಪಿ ಮುಖ್ಯಮಂತ್ರಿಗಳ ಸಮ್ಮೇಳನ
ಇದೇ ಸಂದರ್ಭದಲ್ಲಿ ಸೋಮವಾರ ಮತ್ತು ಮಂಗಳವಾರ- ಎರಡು ದಿನಗಳ ಕಾಲ ನಡೆಯುವ ವಾರಾಣಸಿ ಸಮ್ಮೇಳನದಲ್ಲಿ ಬಿಜೆಪಿ ಆಡಳಿತದ 12 ರಾಜ್ಯಗಳ ಮುಖ್ಯಮಂತ್ರಿಗಳು 9 ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಾದಗಳು ನಡೆಯಲಿವೆ.



Read more