ಹೈಲೈಟ್ಸ್:
- ಮನನೊಂದು ಮಠದಿಂದ ದೂರವಾಗಿದ್ದ ಶ್ರೀಗಳು
- ಟ್ರಸ್ಟ್ ಕಮಿಟಿ ಅಧ್ಯಕ್ಷರು ಸೇರಿದಂತೆ ಇತರೆ ಟ್ರಸ್ಟಿಗಳ ವರ್ತನೆಯಿಂದ ಬೇಸರ
- ವಾಪಸ್ ಬಂದ ಶ್ರೀಗಳನ್ನು ಅದ್ದೂರಿಯಾಗಿ ಬರಮಾಡಿಕೊಂಡ ಭಕ್ತರು
ಸ್ವಾಮೀಜಿ ಆಗಮನದೊಂದಿಗೆ ಜನವರಿ 9 ರಂದು ಮಠದ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ಮುಂದುವರಿಯಲಿವೆ. ಮಠದ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಟ್ರಸ್ಟ್ ಕಮಿಟಿ ಪುನಾರಚಿಸಲಾಗಿದ್ದು, ರಾಜೇಶ ರಾವ್ ಬಸವಂತರಾವ್ ದೇಸಾಯಿ ಅವರನ್ನು ಟ್ರಸ್ಟ್ ಚೇರಮನ್ರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಮನವೊಲಿಕೆ ಯಶಸ್ವಿ
6 ತಿಂಗಳ ಹಿಂದೆ ಮಠದ ಟ್ರಸ್ಟ್ ಚೇರ್ಮನ್ ಸೇರಿ 3-4 ಟ್ರಸ್ಟಿಗಳು ಇಲ್ಲಸಲ್ಲದ ಟೀಕೆ ಮಾಡಿದ್ದರಲ್ಲದೆ ಅಸಭ್ಯವಾಗಿ ವರ್ತಿಸಿ ನೋವುಂಟು ಮಾಡಿದ್ದರು ಎಂಬ ಕಾರಣಕ್ಕೆ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಮಠದಿಂದ ದೂರವಾಗಿ ಕಾಶಿಗೆ ತೆರಳಿದ್ದರು. ಹೀಗಾಗಿ 6 ತಿಂಗಳಿಂದ ಮಠದಲ್ಲಿ ಯಾವೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಏತನ್ಮಧ್ಯೆ ಮಠದ ಜಾತ್ರಾ ಮಹೋತ್ಸವ ಸಮೀಪಿಸುತ್ತಿದ್ದು, ಸ್ವಾಮೀಜಿ ಇಲ್ಲದೇ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದುಕೊಂಡು ಭಕ್ತರು ಸ್ವಾಮೀಜಿಯನ್ನು ಮನವೊಲಿಸಲು ನಿರ್ಧರಿಸಿದ್ದರು.
ಮುಂದುವರಿಕೆಗೆ ಸಲಹೆ
ಭಕ್ತರ ಕೋರಿಕೆಯಂತೆ ಸ್ವಾಮೀಜಿ ಕಾಶಿಯಿಂದ ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಆಗಮಿಸಿದ್ದರು. ಪೂರ್ವ ನಿಗದಿಯಂತೆ ಅಣ್ಣಿಗೇರಿಯಿಂದ ನೂರಾರು ಭಕ್ತರು ಗುರುವಾರ (ಜನವರಿ 6) ಹುಬ್ಬಳ್ಳಿಗೆ ಆಗಮಿಸಿ ಸ್ವಾಮೀಜಿಯವರಲ್ಲಿ ಕ್ಷಮೆ ಕೋರಿ, ಮಠಕ್ಕೆ ಬರುವಂತೆ ಮನವಿ ಮಾಡಿಕೊಂಡರು. ಹೊಸಳ್ಳಿ ಬೂದಿಶ್ವರ ಸ್ವಾಮೀಜಿ, ವರವಿ ಸ್ವಾಮೀಜಿ, ಇಂಗಳಗಿ ಸ್ವಾಮೀಜಿ ಯವರು ಕೂಡ ಭಕ್ತರಿಗೆ ಕೆಲವು ಕಿವಿಮಾತು ಹೇಳಿದರು. ಮಠದಲ್ಲಿ ಮುಂದುವರಿಯುವಂತೆ ಶಿವಕುಮಾರ ಸ್ವಾಮೀಜಿಗೂ ಸಲಹೆ ಮಾಡಿದರು.
ನನಗೆ ಟ್ರಸ್ಟ್ನ ಕೆಲ ಸದಸ್ಯರ ನಡವಳಿಕೆ, ಇಲ್ಲಸಲ್ಲದ ಟೀಕೆಗಳಿಂದ ಮಾನಸಿಕ ನೋವುಂಟಾಗಿತ್ತು. ಈ ನೋವನ್ನು ಇತರ ಸದಸ್ಯರ ಮುಂದೆ ಹೇಳಿಕೊಂಡಿದ್ದೆ. ಆದರೂ ಸರಿ ಹೋಗಲಿಲ್ಲ. ಕೊನೆಗೆ ಬೇಸರ ಎನಿಸಿ ಮಠದಿಂದ ದೂರವಾಗಿದ್ದೆ. ಇದೀಗ ಮಠದ ಸಾವಿರಾರು ಭಕ್ತರ ಪ್ರೀತಿಗೆ ಮನಸೋತು ಶರಣರ ಸಮ್ಮುಖದಲ್ಲಿ ದಾಸೋಹ ಮಠಕ್ಕೆ ಮರಳಿದ್ದೇನೆ.
ಶಿವಕುಮಾರ್ ಸ್ವಾಮೀಜಿ, ದಾಸೋಹ ಮಠ ಅಣ್ಣಿಗೇರಿ
ಭಕ್ತರ ಪ್ರೀತಿಗೆ ಮಣಿದು ಶಿವಕುಮಾರ ಸ್ವಾಮೀಜಿ ಮಠಕ್ಕೆ ಮರಳುವುದಾಗಿ ಮಾತು ಕೊಟ್ಟರು. ಸಂತಸಗೊಂಡ ಭಕ್ತರು ಸ್ವಾಮೀಜಿಯನ್ನು ಅಣ್ಣಿಗೇರಿಗೆ ಕರೆದೊಯ್ದರು. ಅಣ್ಣಿಗೇರಿಯಲ್ಲಿ ರುದ್ರಮುನೀಶ್ವರ ಪ್ರವೇಶ ದ್ವಾರದಿಂದ ಮಠದವರೆಗೆ ಅದ್ದೂರಿ ಮೆರವಣಿಗೆ ಮೂಲಕ ಸಂಭ್ರಮದಿಂದ ಸ್ವಾಮೀಜಿಯವರನ್ನು ಸ್ವಾಗತಿಸಿದರು.
ಮಠದಿಂದ ಶ್ರೀಗಳು ದೂರವಾದಾಗಿನಿಂದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಸ್ವಾಮೀಜಿ ಆಗಮನದೊಂದಿಗೆ ದಾಸೋಹ ಮಠ ಮತ್ತೆ ಕಳೆಗಟ್ಟಿದ್ದು, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರದಿಂದ ಜಾತ್ರಾ ಮಹೋತ್ಸವ ಕಾರ್ಯಚಟುವಟಿಕೆಗಳು ಶುಭಾರಂಭಗೊಳ್ಳಲಿವೆ.
ಹುಣಸಕಟ್ಟಿ, ಕೊಂಕಣಕುರಹಟ್ಟಿ, ಬೆನಕನಹಳ್ಳಿ, ತಾರಿಕೊಪ್ಪ, ತುಪ್ಪದಕುರಹಟ್ಟಿ,ಆರೆಕುರಹಟ್ಟಿ ಗ್ರಾಮದ ಮುಖಂಡರು ಹಾಗೂ ಮಠದ ಇತರ ಶಾಖಾ ಮಠದ ನೂರಾರು ಭಕ್ತರು 40 ಕ್ಕೂ ಹೆಚ್ಚು ವಾಹನಗಳಲ್ಲಿ ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಆಗಮಿಸಿದ್ದರು.
ಮಠದ ಶ್ರೀಗಳು ಕೆಲ ತಿಂಗಳಿಂದ ದೂರ ಉಳಿದಿದ್ದರು. ಇದೀಗ ಅವರ ಮನವೊಲಿಸಿದ್ದೇವೆ. ನಿಮ್ಮ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ ಎಂದು ಸ್ವಾಮೀಜಿಗೆ ತಿಳಿಸಿದ್ದೇವೆ. ಭಕ್ತರ ಬೇಡಿಕೆಯಂತೆ ಶ್ರೀಗಳು ಮಠಕ್ಕೆ ಬರಲೊಪ್ಪಿರುವುದು ಸಂತಸವಾಗಿದೆ.
ಷಣ್ಮುಖ ಗುರಿಕಾರ, ಮಠದ ಟ್ರಸ್ಟ್ ಮುಖಂಡರು
ದಾಸೋಹ ಮಠ..
ಅಣ್ಣಿಗೇರಿಯ ರುದ್ರ ಮುನಿಶ್ವರ ದಾಸೋಹ ಮಠ ಸಿದ್ಧಾರೂಢ ಪರಂಪರೆಗೆ ಸೇರಿದ್ದು. ಸಿದ್ಧಾರೂಢರ ಸಮಕಾಲಿನರಾಗಿದ್ದ ರುದ್ರಮುನೀಶ್ವರ ಶ್ರೀಗಳು ಅಣ್ಣಿಗೇರಿಯಲ್ಲಿ ದಾಸೋಹ ಮಠ ಸ್ಥಾಪಿಸಿದ್ದಾರೆ. ಅವರ ಕಾಲದ ನಂತರ ಶಂಕರೇಂದ್ರ ಸ್ವಾಮೀಜಿ 40 ವರ್ಷ ಪೀಠಾಧಿಪತಿಯಾಗಿದ್ದರು. ಅವರ ನಂತರ ಅಂದರೆ 13 ವರ್ಷದಿಂದ ಶಿವಕುಮಾರ ಸ್ವಾಮೀಜಿ ಪೀಠಾಧಿಪತಿಯಾಗಿದ್ದಾರೆ.
Read more
[wpas_products keywords=”deal of the day sale today offer all”]