Karnataka news paper

‘ದ್ರಾವಿಡ್‌ರಿಂದ ಪಂತ್‌ಗೆ ದೊಣ್ಣೆ ಪೆಟ್ಟು ಬಿದ್ದಿರುತ್ತದೆ’: ಸುನಿಲ್‌ ಗವಾಸ್ಕರ್‌!


ಹೈಲೈಟ್ಸ್‌:

  • ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಟೆಸ್ಟ್‌ಗಳ ಕ್ರಿಕೆಟ್‌ ಸರಣಿ.
  • ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಪಂತ್‌ ಬೇಜವಾಬ್ದಾರಿ ಆಟಕ್ಕೆ ವ್ಯಾಪಕ ಟೀಕೆ.
  • ಯುವ ಆಟಗಾರನ ವಿರುದ್ಧ ಟೀಕೆಗಳ ಸುರಿಮಳೆಗೈದ ಸುನಿಲ್‌ ಗವಾಸ್ಕರ್‌.

ಜೊಹಾನ್ಸ್‌ಬರ್ಗ್‌: ಟೀಮ್ ಇಂಡಿಯಾ ಯುವ ವಿಕೆಟ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಅವರ ಬೇಜವಾಬ್ದಾರಿಯುತ ಬ್ಯಾಟಿಂಗ್‌ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಟೀಕೆಗಳ ಸುರಿಮಳೆ ಗೈದಿದ್ದಾರೆ.

ದಿ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಮೂರು ಟೆಸ್ಟ್‌ಗಳ ಸರಣಿಯ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ ವಿಕೆಟ್‌ ಕೈಚೆಲ್ಲಿದ ರೀತಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆಗಷ್ಟೇ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಬಿದ್ದಿರುವುದು ಗೊತ್ತಿದ್ದರೂ ಕೂಡ ಕ್ರೀಸ್‌ಗೆ ಬಂದ ಕೂಡಲೇ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪಂತ್‌ ವಿಕೆಟ್‌ ಕೈಚೆಲ್ಲಿದರು.

ಪಂತ್‌ ಅವರ ಈ ಮೂರ್ಖತನದ ಬ್ಯಾಟಿಂಗ್‌ ಸಲುವಾಗಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಂದ ಖಂಡಿತಾ ದೊಣ್ಣೆ ಪೆಟ್ಟು ತಿಂದಿರುತ್ತಾರೆ ಎಂದು ಗವಾಸ್ಕರ್‌ ಹೇಳಿದ್ದಾರೆ. ಕಗಿಸೋ ರಬಾಡ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಬಂದು ಬಲವಾಗಿ ಹೊಡೆಯುವ ಪ್ರಯತ್ನ ಮಾಡಿ ಕೀಪರ್‌ಗೆ ಕ್ಯಾಚಿತ್ತ ಪಂತ್‌ 3 ಎಸೆತಗಳಲ್ಲಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‌ ಸೇರಿದ್ದರು.

‘ನಿಮ್ಮ ಬೇಜವಾಬ್ದಾರಿಯುತ ಶಾಟ್‌ಗೆ ಕ್ಷಮೆ ಇಲ್ಲ’ ಪಂತ್‌ ವಿರುದ್ಧ ಗವಾಸ್ಕರ್‌ ಕಿಡಿ!

ಔಟ್‌ ಆಗುವ ಹಿಂದಿನ ಎಸೆತದಲ್ಲೇ ರಬಾಡ ಎಸೆದ ಬೌನ್ಸರ್‌ನಲ್ಲಿ ಪಂತ್‌ ವಿಚಲಿತರಾಗಿದ್ದರು. ಇನ್ನು ಭಾರತ ತಂಡ ಆಗಷ್ಟೇ ಸೆಟ್‌ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್‌ ಪೂಜಾರ ಅವರ ವಿಕೆಟ್‌ ಕಳೆದುಕೊಂಡಿತ್ತು. ಹೀಗಿರುವಾಗ ಎಚ್ಚರಿಕೆಯ ಆಟವಾಡದೆ ಬೇಜವಾಬ್ದಾರಿಯುತವಾಗಿ ವಿಕೆಟ್‌ ಒಪ್ಪಿಸಿದ್ದು, ಹಲವರಿಗೆ ಅಸಮಾಧಾನ ತಂದಿದೆ. ಪಂತ್‌ ಇಲ್ಲಿ 30-40 ರನ್‌ಗಳ ಕೊಡುಗೆ ಕೊಟ್ಟಿದ್ದರೂ ಭಾರತ ತಂಡ ಪಂದ್ಯ ಗೆಲ್ಲುವ ಉತ್ತಮ ಸ್ಥಿತಿಗೆ ತಲುಪಿರುತ್ತಿತ್ತು.

“ಇದು ಮೌಲ್ಯಯುತ ಪ್ರಶ್ನೆ. ಪಂತ್‌ 30-40 ರನ್‌ಗಳಿಸಿದ್ದಾಗ ಈ ರೀತಿಯ ಹೊಡೆತಕ್ಕೆ ಕೈಹಾಕಿ ವಿಕೆಟ್‌ ಕೈಚೆಲ್ಲಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆಸ್ಟ್ರೇಲಿಯಾದಲ್ಲಿ ಈ ಕೆಲಸವನ್ನು ಮಾಡಿ ತೋರಿಸಿದ್ದಾರೆ ಕೂಡ. ಅಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ದಿಟ್ಟ ಆವಾಡಿದ್ದರು. ಮೊದಲು ಪಿಚ್‌ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ಹೊಡೆತಗಳಿಗೆ ಕೈ ಹಾಕಬೇಕು. ಆಸ್ಟ್ರೇಲಿಯಾದಲ್ಲಿ ಅವರು ಮಾಡಿದ್ದು ಇದನ್ನೇ,” ಎಂದು ಗವಾಸ್ಕರ್‌ ಹೇಳಿದ್ದಾರೆ.

“ಈಗ ಇಲ್ಲಿ ಮಾಡುತ್ತಿರುವುದನ್ನು ಇಂಗ್ಲೆಂಡ್‌ ವಿರುದ್ಧವೂ ಮಾಡಿದ್ದರು. ಜೇಮ್ಸ್‌ ಆಂಡರ್ಸನ್‌ ಎದುರು ಮುನ್ನಗ್ಗಿ ಬಾರಿಸುವ ಪ್ರಯತ್ನ ಮಾಡಿದರು. ಇದಾದ ಬಳಿಕ ತಮ್ಮ ಆಟಕ್ಕೆ ಇರುವುದು ಇದೊಂದೇ ಮಾರ್ಗ ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ, ಖಂಡಿತಾ ಈ ರೀತಿಯ ಆಟ ಸರಿಯಲ್ಲ. ಖಂಡಿತಾ ಡ್ರೆಸಿಂಗ್‌ ರೂಮ್‌ಗೆ ಪಂತ್‌ ತೆರಳಿದಾಗ ಕೋಚ್‌ ರಾಹುಲ್ ದ್ರಾವಿಡ್‌ ದೊಣ್ಣೆ ಪೆಟ್ಟು ಕೊಟ್ಟಿರುತ್ತಾರೆ,” ಎಂದಿದ್ದಾರೆ.

ಐಸಿಸಿ ರ‍್ಯಾಂಕಿಂಗ್‌: ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 18 ಸ್ಥಾನ ಜಿಗಿದ ರಾಹುಲ್‌!

ಇನ್ನು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‌ಗಳ ಜಯ ದಾಖಲಿಸಿ 3 ಟೆಸ್ಟ್‌ಗಳ ಸರಣಿಯಲ್ಲಿ 1-1 ಅಂತರದ ಸಮಬಲ ತಂದುಕೊಂಡಿದೆ. 240 ರನ್‌ಗಳ ಕಠಿಣ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ 67.4 ಓವರ್‌ಗಳಲ್ಲಿ 3 ವಿಕೆಟ್‌ಗೆ 243 ರನ್‌ಗಳಿಸಿ ಭರ್ಜರಿ ಜಯ ದಾಖಲಿಸಿತು. ನಾಯಕ ಡೀನ್‌ ಎಲ್ಗರ್‌ ಅಜೇಯ 96 ರನ್‌ ಗಳಿಸಿ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಜಯ ತಂದುಕೊಟ್ಟರು. ಸರಣಿಯ ಮೂರನೇ ಟೆಸ್ಟ್‌ ಕೇಪ್‌ ಟೌನ್‌ನಲ್ಲಿ ನಡೆಯಲಿದೆ.

ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ ಸ್ಕೋರ್‌
ಭಾರತ: ಮೊದಲ ಇನಿಂಗ್ಸ್‌ 63.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲ್‌ಔಟ್‌.
ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್‌ 79.4 ಓವರ್‌ಗಳಲ್ಲಿ 229ಕ್ಕೆ ಆಲ್‌ಔಟ್‌.
ಭಾರತ: ಎರಡನೇ ಇನಿಂಗ್ಸ್ 60.1 ಓವರ್‌ಗಳಲ್ಲಿ 266ಕ್ಕೆ ಆಲ್‌ಔಟ್‌.
ದಕ್ಷಿಣ ಆಫ್ರಿಕಾ: ದ್ವಿತೀಯ ಇನಿಂಗ್ಸ್‌ 67.4 ಓವರ್‌ಗಳಲ್ಲಿ 243/3
ಪಂದ್ಯಶ್ರೇಷ್ಠ: ಡೀನ್‌ ಎಲ್ಗರ್‌



Read more

[wpas_products keywords=”deal of the day gym”]