Karnataka news paper

ಸಾಮಾಜಿಕ ನ್ಯಾಯ ಪರ ಹೋರಾಟದಲ್ಲಿ ರಾಜಿ ಇಲ್ಲ – ‘ಮಾಚಿದೇವ ಶ್ರೀ ಪ್ರಶಸ್ತಿ’ ಸ್ವೀಕರಿಸಿದ ಸಿದ್ದರಾಮಯ್ಯ


ಹೈಲೈಟ್ಸ್‌:

  • ಮಾಜಿ ಸಿಎಂ ಸಿದ್ದರಾಮಯ್ಯಗೆ ‘ಮಾಚಿದೇವ ಶ್ರೀ ಪ್ರಶಸ್ತಿ’ ಪ್ರದಾನ
  • ಸಾಮಾಜಿಕ ನ್ಯಾಯ ಪರ ಹೋರಾಟದಲ್ಲಿ ರಾಜಿ ಇಲ್ಲ ಎಂದ ಮಾಜಿ ಸಿಎಂ
  • ಸರಕಾರ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ನೀಡಲಿ ಎಂದ ವಿಪಕ್ಷ ನಾಯಕರು

ಚಿತ್ರದುರ್ಗ: ‘ನಾನು ಮೊದಲಿನಿಂದಲೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಪರವಾಗಿ ದನಿಯೆತ್ತಿದ್ದೇನೆ, ಹೋರಾಟ ಮಾಡುತ್ತಾ ಬಂದಿದ್ದೇನೆ. ಯಾರು ಏನೇ ತಪ್ಪು ತಿಳಿದರೂ ಇದರಲ್ಲಿ ರಾಜಿ ಇಲ್ಲ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಶ್ರೀ ಮಾಚಿದೇವ ಗುರುಪೀಠದಲ್ಲಿ ಗುರುವಾರ ಕಾಯಕ ಜನೋತ್ಸವದ ಪ್ರಯುಕ್ತ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಗುರುಪೀಠದಿಂದ ಆರಂಭಿಸಿರುವ ‘ಮಾಚಿದೇವ ಶ್ರೀ ಪ್ರಶಸ್ತಿ’ಯನ್ನು ಮೊದಲನೆಯವರಾಗಿ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಸಿಎಂ ಇದ್ದಾಗಲೇ ಅನೇಕ ಜಯಂತಿಗಳನ್ನು ಮಾಡಿದೆ. ಕಿತ್ತೂರ ರಾಣಿ ಚೆನ್ನಮ್ಮ, ಜೈನರ ಮಹಾವೀರ ಜಯಂತಿ ಸೇರಿ ಅನೇಕ ಜಯಂತಿಗಳನ್ನು ಮಾಡಿದೆ. ವಿಧಾನಸೌಧದಲ್ಲಿ ಶಾಸಕರ ಭವನದ ಎದುರು ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿದ್ದು, ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಸಂಪತ್ತಿನಲ್ಲಿ ಪಾಲು ಸಿಗಬೇಕು ಎನ್ನುವ ಕಾನೂನು ಮಾಡಿದ್ದು ನಮ್ಮ ಸರಕಾರ’ ಎಂದು ಹೇಳಿದರು.

13 ಜಯಂತಿ ಘೋಷಿಸಿದ ನಾನು ಮತಾಂಧನಲ್ಲ: ಸಿದ್ದರಾಮಯ್ಯ
ಪರಿಶಿಷ್ಟರಿಗೆ ಅನುದಾನ ನೀಡಿ

‘ಪರಿಶಿಷ್ಟರ ಅಭಿವೃದ್ಧಿಗೆ ಮೊದಲು ಐದು ಸಾವಿರ ಕೋಟಿ ರೂ. ಮಾತ್ರ ಕೊಡುತ್ತಿದ್ದರು. ನಾವು ಕಾನೂನು ಮಾಡಿದ ನಂತರ ಅಧಿಕಾರ ಬಿಡುವ ಹೊತ್ತಿಗೆ 30 ಸಾವಿರ ಕೋಟಿ ರೂ. ಅನುದಾನ ಆಗಿತ್ತು. ಈಗದು 25 ಸಾವಿರ ಕೋಟಿ ಆಗಿದೆ. ಬಜೆಟ್‌ನಿಂದ ಬಜೆಟ್‌ಗೆ ಈ ಅನುದಾನ ಹೆಚ್ಚಳ ಆಗಬೇಕಿತ್ತು. ಈಗ ಕನಿಷ್ಟ 40 ಸಾವಿರ ಕೋಟಿ ರೂ. ಆಗಬೇಕಿತ್ತು. ಆದರೆ, ಈಗ ಕಡಿಮೆಯಾಗಿದೆ. ಯಾರೂ ಕೇಳುತ್ತಿಲ್ಲ, ಕೇಳಿದರೆ ಕೊರೊನಾ ಎಂದು ಹೇಳುತ್ತಾರೆ. ಹೆಚ್ಚೆಂದರೆ ಕೊರೊನಾ ನಿರ್ವಹಣೆಗೆ ಐದರಿಂದ ಆರು ಸಾವಿರ ಕೋಟಿ ರೂ. ಇರಬಹುದು. ಕೊಡಲು ಮನಸ್ಸು, ಬದ್ಧತೆ ಇರಬೇಕು’ ಎಂದರು.

ಮೊಸಳೆ ಕಣ್ಣೀರು ನಂಬಬೇಡಿ

‘ನಾನು ರಾಜಕಾರಣ ಮಾಡಲು ಹೋಗಲ್ಲ. ಮೊಸಳೆ ಕಣ್ಣೀರು ಸುರಿಸೋದು ಬೇರೆ, ಬದ್ಧತೆ ಬೇರೆ. ಮೊಸಳೆ ಕಣ್ಣೀರನ್ನು ಸುರಿಸೋರನ್ನು ನಂಬಲು ಹೋಗಬೇಡಿ. ನಾನಾಗಲೀ, ಯಾರಾದರೂ ಆಗಲಿ. ಯಾರಿಗೆ ಬದ್ಧತೆ ಇದೆಯೋ ಅವರನ್ನು ಬೆಂಬಲಿಸಿ. ಯಾರಿಗೆ ಬದ್ಧತೆ ಇಲ್ಲದವರನ್ನು ನಿಮ್ಮ ಅಭಿವೃದ್ಧಿಯ, ಬದಲಾವಣೆಯ ವಿರೋಧಿಗಳು ಎಂದು ತೀರ್ಮಾನಿಸಬೇಕು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬೇಡಿ’ ಎಂದು ತಿಳಿಸಿದರು.

ಸಿದ್ದರಾಮಯ್ಯ ಧೀರ ರಾಜಕಾರಣಿ : ಮುರುಘಾಶ್ರೀ

ಸಿದ್ದರಾಮಯ್ಯನವರಿಗೆ ಮಾಚಿದೇವ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಸಿದ್ದರಾಮಯ್ಯ ಪ್ರಬುದ್ಧ ಹಾಗೂ ಧೀರ ರಾಜಕಾರಣಿ. ಪ್ರಬುದ್ಧತೆಯ ಜತೆಗೆ ಅವರಲ್ಲಿ ಬದ್ಧತೆ ಇದೆ. ಬಾಬಾ ಸಾಹೇಬರು, ಬಸವಣ್ಣ, ಗಾಂಧೀಜಿ ಇಂತಹ ಪ್ರಬುದ್ಧತೆ, ಬದ್ಧತೆಯಿಂದಲೇ ಜೀವನದಲ್ಲಿ ಮಹತ್ತರ ಸಾಧನೆ ಮಾಡಿದರು. ಅವರು ಮಾತನಾಡುತ್ತಾರೆಂದರೆ ಜನ ಲಕ್ಷ್ಯ ಕೊಟ್ಟು ಕೇಳುತ್ತಾರೆ. ಅವರ ವ್ಯಕ್ತಿತ್ವ, ಜೀವನದಲ್ಲಿ ಗಟ್ಟಿತನ ಇದೆ. ಅವರೊಬ್ಬರ ಗಟ್ಟಿ ವ್ಯಕ್ತಿ’ ಎಂದು ಪ್ರಶಂಸಿಸಿದರು.

ಸಭೆಯಲ್ಲಿ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶಾಸಕ ಟಿ. ರಘುಮೂರ್ತಿ, ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾನಾಯ್ಕ್‌, ಮಾಜಿ ಸಚಿವ ಡಿ. ಸುಧಾಕರ್‌, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ತಿಪ್ಪೇಸ್ವಾಮಿ, ಸಮಾಜದ ಮುಖಂಡರಾದ ಎಚ್‌.ಎನ್‌. ಗೋಪಿಕೃಷ್ಣ, ಹನುಮಂತಪ್ಪ, ರಾಜು, ಎಂಎಲ್‌ಸಿ ಅಭ್ಯರ್ಥಿಯಾಗಿದ್ದ ಸೋಮಶೇಖರ್‌, ಕಾಂಗ್ರೆಸ್‌ ಮುಖಂಡರಾದ ಹನುಮಲಿ ಷಣ್ಮುಖಪ್ಪ, ಯೋಗೇಶ್‌ಬಾಬು, ಶಶಿಕಲಾ ಸುರೇಶ್‌ಬಾಬು, ಗೀತಾ ನಂದಿನಿಗೌಡ, ಆರ್‌.ಕೆ. ಸರ್ದಾರ್‌ ಇತರರು ಇದ್ದರು.

ಮಡಿವಾಳರ ಪ್ರಾತಿನಿಧ್ಯಕ್ಕೆ ಪ್ರಯತ್ನ: ಸಿದ್ದರಾಮಯ್ಯ

ಮಡಿವಾಳ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕು ಹಾಗೂ ಅನ್ನಪೂರ್ಣಮ್ಮ ಅವರ ವರದಿ ಆಧರಿಸಿ, ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕು ಎಂಬ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದೀರಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒತ್ತಾಯ ಮಾಡುತ್ತೇನೆ. ಈ ಸರಕಾರದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

‘ಯಾರೂ ತಪ್ಪು ತಿಳಿಯಬೇಡಿ. ಏಕೆಂದರೆ, ನಾನು ಬಹಳಷ್ಟು ಜನಾಂಗದವರಿಗೆ ಶಿಫಾರಸು ಮಾಡಿ ಕಳುಹಿಸಿದ್ದೇನೆ. ತಳವಾರ, ಪರಿವಾರ ಸಮುದಾಯವನ್ನು ಕೇಂದ್ರ ಸರಕಾರ ಎಸ್‌ಟಿಗೆ ಸೇರಿಸಿದೆ. ರಾಜ್ಯ ಸರಕಾರ ಸೇರಿಸಿಲ್ಲ. ಅವರದೇ ಮಂತ್ರಿ ಇದ್ದಾರೆ, ಆದರೂ ಸೇರಿಸಿಲ್ಲ. ಕೊಡಗಿನಲ್ಲಿರುವ ಕುರುಬರು, ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಯ ಗೊಂಡ ಸಮಾಜದವರು, ಗೊಲ್ಲರನ್ನು ಎಸ್‌ಟಿಗೆ ಸೇರಿಸಿ ಎಂದು ಹೇಳಿದ್ದರೂ ಇವತ್ತಿನವರೆಗೂ ಮಾಡಿಲ್ಲ. ಆದ್ದರಿಂದ ನನಗೆ ನಂಬಿಕೆ ಇಲ್ಲ’ ಎಂದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಸೂಚನೆ ಇದೆ. ಒಂದು ವೇಳೆ ನಾವು ಬಂದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಪ್ರಾತಿನಿಧ್ಯ ಹಾಗೂ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಧಾನಸಭೆಯಲ್ಲಿ ಸಮುದಾಯ ಪ್ರತಿನಿಧಿಸಲು ಒಬ್ಬರು ಬೇಕೇ ಬೇಕು. ಒಂದು ವೇಳೆ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟು ಗೆಲ್ಲದೇ ಹೋದರೆ, ಎಂಎಲ್‌ಸಿಯನ್ನಂತೂ ಮಾಡೇ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಮಡಿವಾಳದ ಸಮಾಜದ ಕೊಡುಗೆ

“ಸ್ವಾಮೀಜಿಯವರು ನನ್ನನ್ನು ಭೇಟಿ ಮಾಡಿ ‘ಮಾಚಿದೇವ ಶ್ರೀ ಪ್ರಶಸ್ತಿ’ ಪ್ರದಾನ ಮಾಡುತ್ತೇವೆ. ನೀವು ಸ್ವೀಕರಿಸಬೇಕು” ಎಂದು ಮನವಿ ಮಾಡಿದ್ದರು. ಮೊದಲನೇ ಬಾರಿ ಕೊಡುತ್ತಿದ್ದೀರಿ, ನನಗಿಂತ ಸಾಧನೆ ಮಾಡಿದವರು ಇದ್ದಾರೆ. ಪ್ರದಾನ ಸಮಾರಂಭಕ್ಕೆ ನಾನು ಕೂಡಾ ಬರುತ್ತೇನೆ ಎಂದು ಹೇಳಿದೆ. ಸ್ವಾಮೀಜಿ ‘ಇಲ್ಲ, ನಿಮಗೆ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ಸ್ವೀಕಾರ ಮಾಡಬೇಕು’ ಎಂದು ಹೇಳಿ ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಶಸ್ತಿ ಮೊತ್ತ ಒಂದು ಲಕ್ಷ ರೂ. ಜತೆಗೆ ಮತ್ತೆ ಒಂದು ಲಕ್ಷ ರೂ. ದೇಣಿಗೆಯಾಗಿ ನೀಡುತ್ತಿದ್ದೇನೆ. ಇದನ್ನು ಜನಾಂಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಬಳಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಶ್ರೀ ಮಾಚಿದೇವ ಶ್ರೀಗಳು ಇದನ್ನು ಶಾಶ್ವತ ಶಿಕ್ಷಣ ನಿಧಿಯನ್ನಾಗಿ ಬಳಸುವುದಾಗಿ ಭರವಸೆ ನೀಡಿದರು.



Read more

[wpas_products keywords=”deal of the day sale today offer all”]