ಹೈಲೈಟ್ಸ್:
- ರಾತ್ರಿ 10ರ ನಂತರ ಅಂಗಡಿಗಳು, ವಾಣಿಜ್ಯ ಕೇಂದ್ರಗಳನ್ನ ಮುಚ್ಚಬೇಕು
- ಇಲ್ಲವಾದ್ರೆ ಕೇಸ್ ದಾಖಲು ಮಾಡುವಂತೆ ಪೊಲೀಸ್ ಆಯುಕ್ತರ ಸೂಚನೆ
- ಪಬ್, ಕ್ಲಬ್, ಬಾರ್, ಹೋಟೆಲ್, ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್, ಜಿಮ್ ಬಂದ್
ಸರ್ಕಾರದ ಕಠಿಣ ನಿಯಮವನ್ನು ಜಾರಿಗೆ ತರಲು ಮೈಸೂರಿನಲ್ಲೂ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಎರಡು ವಾರ ಟಫ್ ರೂಲ್ಸ್ ಜಾರಿಗೊಳಿಸುವ ಸಲುವಾಗಿ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಇದನ್ನು ಪಾಲಿಸಲು ಮೈಸೂರು ಪೊಲೀಸರೂ ಸಿದ್ಧತೆ ಮಾಡಿಕೊಳ್ತಿದ್ದಾರೆ.
ಈ ಸಂಬಂಧ ಈಗಾಗಲೇ ಮೈಸೂರಿನ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಸರ್ಕಾರದ ಹೊಸ ಮಾರ್ಗಸೂಚಿಗಳ ಜಾರಿ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪ್ರಮುಖವಾಗಿ ಮೈಸೂರು ನಗರದಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲನೆ ಕುರಿತು ಸೂಚನೆ ನೀಡಿರುವ ಪೊಲೀಸ್ ಆಯುಕ್ತರು, ರಾತ್ರಿ 10ರ ನಂತರ ಅಂಗಡಿಗಳು, ವಾಣಿಜ್ಯ ಕೇಂದ್ರಗಳನ್ನ ಮುಚ್ಚದಿದ್ರೆ ಕೇಸ್ ದಾಖಲು ಮಾಡುವಂತೆ ಹಾಗೂ ಪಬ್, ಕ್ಲಬ್, ಬಾರ್, ಹೋಟೆಲ್, ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್, ಜಿಮ್ ಇತ್ಯಾದಿಗಳನ್ನು ಬಂದ್ ಮಾಡುವಂತೆಯೂ ಖಡಕ್ ಸೂಚನೆ ನೀಡಿದ್ದಾರೆ.
ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಇರಲಿದ್ದು, ಗುರುವಾರ ರಾತ್ರಿ ಎಂದಿನಂತೆ ನೈಟ್ ಕರ್ಫ್ಯೂ ಇರಲಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಅನಗತ್ಯ ಸಂಚಾರ ನಡೆಸಿದ್ರೆ ವಾಹನ ವಶಕ್ಕೆ ಪಡೆಯುವಂತೆ ಹಾಗೂ ಪ್ರತಿನಿತ್ಯ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕರು ಸಹಕಾರ ನೀಡುವಂತೆಯೂ ಮೈಸೂರು ಪೊಲೀಸ್ ಇಲಾಖೆಯಿಂದ ಮನವಿ ಮಾಡಿಕೊಳ್ಳಲಾಗಿದೆ.
ಬಾರ್ಡರ್ ಗಳಲ್ಲಿ ಹೈ ಅಲರ್ಟ್..!
ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಗೊಂಡಿರುವ ಹಿನ್ನಲೆಯಲ್ಲಿ ಮೈಸೂರಿನ ಗಡಿ ಭಾಗ ಬಾವಲಿ ಚೆಕ್ ಪೋಸ್ಟ್ ಫುಲ್ ಟೈಟ್ ಮಾಡಲಾಗಿದೆ. ಕರ್ನಾಟಕ ಹಾಗೂ ಕೇರಳ ಗಡಿಯಾಗಿರುವ ಬಾವಲಿ ಚೆಕ್ ಪೋಸ್ಟ್ ನಲ್ಲಿ ಸರ್ಕಾರದ ಸೂಚನೆ ಮೇರೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, ಕೇರಳದಿಂದ ರಾಜ್ಯಕ್ಕೆ ಬರುವವರಿಗೆ RTPCR ಕಡ್ಡಾಯ ಪರಿಶೀಲನೆ ಮತ್ತು RTPCR ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರವೇ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ. ಇದರ ನಡುವೆ ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್ ನಡೆಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಲಾಗಿದೆ.
ವೀಕೆಂಡ್ ಕರ್ಫ್ಯೂಗೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಪ್ರತಿಯೊಬ್ಬರೂ ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಜಾರಿ ಮಾಡಿದರೆ ಆಟೋ ಚಾಲಕರಿಗೆ ಹಾಗೂ ಕ್ಯಾಬ್ ಚಾಲಕರಿಗೆ ಸಂಕಷ್ಟ ಎದುರಾಗಲಿದ್ದು, ಹೀಗಾಗಿ ವೀಕೆಂಡ್ ಕರ್ಫ್ಯೂ ಕೈಬಿಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಆದರೆ ಕರ್ಫ್ಯೂ ಜಾರಿ ಮಾಡುವುದರಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಕುಸಿಯುತ್ತೆ. ಮೊದಲನೇ ಅಲೆ, ಎರಡನೇ ಅಲೆಯಲ್ಲೇ ಸಾಕಷ್ಟು ಆರ್ಥಿಕ ಹೊಡೆತ ಅನುಭವಿಸಿದ್ದು, ಇದೀಗ ಮತ್ತೆ ವೀಕೆಂಡ್ ಲಾಕ್ಡೌನ್ ಮಾಡಿದರೆ ಜೀವನ ಬೀದಿಗೆ ಬರುತ್ತೆ. ಕಳೆದ ಬಾರಿ ಲಾಕ್ ಡೌನ್ ವೇಳೆ ಸರ್ಕಾರ ಘೋಷಣೆ ಮಾಡಿದ್ದ ಧನ ಸಹಾಯ ಎಷ್ಟೋ ಜನರಿಗೆ ತಲುಪಿಲ್ಲ. ಒಂದೊಮ್ಮೆ ಸರ್ಕಾರ ಲಾಕ್ ಡೌನ್ ಮಾಡಲೇಬೇಕೆಂದರೆ ಆಟೋ ಚಾಲಕರಿಗೆ ಪ್ಯಾಕೇಜ್ ಘೋಷಣೆ ಮಾಡಿ ಬಳಿಕ ಕರ್ಫ್ಯೂ ಮಾಡಿ ಎಂದು ಒತ್ತಾಯಿಸಲಾಗ್ತಿದೆ.
Read more
[wpas_products keywords=”deal of the day sale today offer all”]