Karnataka news paper

ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕಿ ಪತ್ತೆಗೆ ಪರದಾಟ : ಖಾಕಿ ಕಣ್ತಪ್ಪಿಸಿ ಹೊರ ರಾಜ್ಯಗಳಲ್ಲಿ ಓಡಾಟ


ಹೈಲೈಟ್ಸ್‌:

  • ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕಿ ಪತ್ತೆಗೆ ಪರದಾಟ
  • ಸಹಿ ಹಾಕಲು ಪೊಲೀಸ್‌ ಠಾಣೆಗೂ ಬಂದಿಲ್ಲ
  • ಖಾಕಿ ಕಣ್ತಪ್ಪಿಸಿ ಹೊರ ರಾಜ್ಯಗಳಲ್ಲಿ ಓಡಾಟ

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ, ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹೊರರಾಜ್ಯಗಳಲ್ಲಿ ಸುತ್ತಾಡುತ್ತಿರುವುದು ತಿಳಿದು ಬಂದಿದೆ. ರಾಜ್ಯ ರಾಜಕಾರಣದಲ್ಲಿ ಬಿಟ್‌ ಕಾಯಿನ್‌ ಹಗರಣವು ಕೋಲಾಹಲ ಸೃಷ್ಟಿಸಿದೆ. ರಾಜಕೀಯ ಪಕ್ಷಗಳು ಶ್ರೀಕಿ ಹೆಸರು ಹಿಡಿದು ಕೆಸರೆರಚಾಟದಲ್ಲಿ ತೊಡಗಿದ್ದವು. ಈ ನಡುವೆ ಡ್ರಗ್ಸ್‌ ಸೇವಿಸಿದ ನಶೆಯಲ್ಲಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹಾಗೂ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿದ ಆರೋಪದಡಿ ಶ್ರೀಕಿಯನ್ನು ಜೀವನ್‌ಬಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದರು.

ಆತನ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಆದರೆ, ಶ್ರೀಕಿ ಪ್ರತಿ ವಾರ ಜೆ ಬಿ ನಗರ ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿತ್ತು. ಆದರೆ ನಾಲ್ಕು ವಾರಗಳಿಂದಲೂ ಆತ ಕಣ್ಮರೆಯಾಗಿದ್ದು, ಠಾಣೆಗೂ ಹಾಜರಾಗಿಲ್ಲ. ಜಾಮೀನು ಷರತ್ತಿನಂತೆ ಒಮ್ಮೆಯೂ ತನಿಖಾಧಿಕಾರಿ ಎದುರು ವಿಚಾರಣೆಗೂ ಬಂದಿಲ್ಲ. ಹೀಗಾಗಿ, ಆತನ ಜಾಮೀನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಬಿಟ್‌ ಕಾಯಿನ್‌ ಹಗರಣದಲ್ಲಿ ಹಲವು ಪ್ರಭಾವಿ ರಾಜಕಾರಣಿಗಳು ಹಾಗೂ ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿರುವ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಗರಣದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಶ್ರೀಕೃಷ್ಣನ ಜೀವಕ್ಕೆ ಅಪಾಯವಿರುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರು ದೂರಿದ್ದರು. ಇದೇ ಕಾರಣಕ್ಕೆ ಶ್ರೀಕಿ ಹಾಗೂ ಆತನ ಕುಟುಂಬಕ್ಕೆ ಭದ್ರತೆ ನೀಡಲು ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವನ್ನು ನಿಯೋಜಿಸಲಾಗಿತ್ತು. ಆದರೆ, ಇದುವರೆಗೂ ಇನ್‌ಸ್ಪೆಕ್ಟರ್‌ ಅವರ ಸಂಪರ್ಕಕ್ಕೂ ಶ್ರೀಕೃಷ್ಣ ಸಿಕ್ಕಿಲ್ಲಎಂದು ಮೂಲಗಳು ತಿಳಿಸಿವೆ.

Bitcoin Scam: ಅಸಾಮಾನ್ಯ ಹ್ಯಾಕರ್ ಶ್ರೀಕಿಯ ‘ಸಾಧನೆ’ ಒಂದೆರಡಲ್ಲ! ಮಹಾ ಚಾಣಾಕ್ಷನ ಇತಿಹಾಸ

ಹೊರ ರಾಜ್ಯಗಳಲ್ಲಿ ಓಡಾಟ!

ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀಕಿ ನಗರದ ಹೋಟೆಲ್‌ವೊಂದರಲ್ಲಿ ಎರಡು ದಿನ ಉಳಿದಿದ್ದ. ಬಳಿಕ ಪರಿಚಯಸ್ಥರ ಸಹಾಯದಿಂದ ಹೊಸದಿಲ್ಲಿಗೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ಕೆಲ ದಿನ ದಿಲ್ಲಿಯಲ್ಲಿದ್ದ ಆತ, ಅಲ್ಲಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿಸುತ್ತಾಡುತ್ತಿದ್ದಾನೆ. ಇದಕ್ಕೆ ಹಗರಣದಲ್ಲಿ ಪಾಲ್ಗೊಂಡಿರುವ ಕೆಲವರು ಆತನಿಗೆ ಹಣಕಾಸಿನ ವ್ಯವಸ್ಥೆ ಮಾಡಿ ರಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ತಂದೆಯನ್ನು ಕೊನೆಯ ಸಲ ಭೇಟಿಯಾಗಿದ್ದ ಶ್ರೀಕಿ!
ಶ್ರೀಕಿಯನ್ನು ಜೆ ಬಿ ನಗರದ ಪೊಲೀಸರು ಬಂಧನಕ್ಕೊಳಪಡಿಸಿದ ಬಳಿಕ ಆತನ ತಂದೆ ಮನೆಯಲ್ಲಿ ಬಿದ್ದು ಹೆಬ್ಬಾಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಜಾಮೀನು ಮಂಜೂರಾದ ಕೂಡಲೇ ಜೈಲಿನಿಂದ ಹೊರಬಂದ ಶ್ರೀಕಿ ಆಟೋದಲ್ಲಿ ಆಸ್ಪತ್ರೆಗೆ ಬಂದಿದ್ದ. ಜಾಮೀನು ನೀಡಿದವರು ಯಾರು ಎಂಬುದು ಗೊತ್ತಿಲ್ಲವೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ. ಇದಾದ ನಂತರ ಪೊಲೀಸರಿಂದ ತಪ್ಪಿಸಿಕೊಂಡು, ನಾಪತ್ತೆಯಾಗಿದ್ದಾನೆ.



Read more