Karnataka news paper

ಮೇಕೆದಾಟು ಪಾದಯಾತ್ರೆಗೆ ಭರ್ಜರಿ ಸಿದ್ಧತೆ, ಕಾವೇರಿ-ಅರ್ಕಾವತಿ ಸಂಗಮದಿಂದ ಆರಂಭ; ಇಲ್ಲಿದೆ ಸಂಪೂರ್ಣ ವಿವರ


ಹೈಲೈಟ್ಸ್‌:

  • ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆಗೆ ಭರ್ಜರಿ ಸಿದ್ದತೆ ಮಾಡಿಕೊಂಡಿದೆ ಕಾಂಗ್ರೆಸ್‌
  • ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ಇದಕ್ಕಾಗಿ ಬೃಹತ್‌ ವೇದಿಕೆ ನಿರ್ಮಾಣ
  • ಪಾದಯಾತ್ರೆ ನೇತೃತ್ವ ವಹಿಸಲಿದ್ದಾರೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್‌
  • ಈಗಾಗಲೇ ಸುಮಾರು 123.5 ಕಿಮೀ ಪಾದಯಾತ್ರೆಯ ರೂಟ್‌ಮ್ಯಾಪ್‌ ಸಿದ್ದ

ಕನಕಪುರ (ರಾಮನಗರ): ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆಗೆ ಭರ್ಜರಿ ಸಿದ್ದತೆ ಮಾಡಿಕೊಂಡಿರುವ ಕಾಂಗ್ರೆಸ್‌ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ಇದಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್‌ ಪಾದಯಾತ್ರೆ ನೇತೃತ್ವ ವಹಿಸಿದ್ದು, ಅದರ ಯಶಸ್ಸಿಗೆ ಶತಾಯಗತಾಯ ಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಸುಮಾರು 123.5 ಕಿಮೀ ಪಾದಯಾತ್ರೆಯ ರೂಟ್‌ಮ್ಯಾಪ್‌ ಸಿದ್ದಗೊಂಡಿದೆ.

ಕಾರ್ಯಕರ್ತರ ಪಡೆ ಸಜ್ಜು

ಕನಕಪುರ ಸೇರಿದಂತೆ 4 ರಿಂದ 5 ಜಿಲ್ಲೆಗಳ ಕಾರ್ಯಕರ್ತರನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳಲು ನಾಯಕರು ಸಿದ್ಧಗೊಳಿಸಿದ್ದಾರೆ. ನಿತ್ಯ 13 ರಿಂದ 16 ಕಿ.ಮೀ. ದೂರ ಪಾದಯಾತ್ರೆ ನಡೆಯಲಿದೆ. ಪ್ರತಿ 6 ರಿಂದ 8 ಕಿ.ಮೀ. ಅಂತರದಲ್ಲಿ ಊಟ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

5 ಸಾವಿರ ಮಂದಿ

ಕನಿಷ್ಠ 4 ರಿಂದ 5 ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸುವ ಯೋಜನೆ ಮೂಲಕ ಬೃಹತ್‌ ಹೋರಾಟವಾಗಿ ಬಿಂಬಸಲು ಡಿಕೆ ಶಿವಕುಮಾರ್‌ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಮೇಕೆದಾಟಿನಿಂದ ಕುಂಬಳಗೋಡುವರೆಗೆ ಸಂಸದ ಡಿಕೆ ಸುರೇಶ್‌ ಪಾದಯಾತ್ರೆ ನೇತೃತ್ವ ವಹಿಸಿದರೆ ಅಲ್ಲಿಂದ ಡಿ.ಕೆ. ಶಿವಕುಮಾರ್‌ ಬೆಂಗಳೂರುವರೆಗಿನ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಇದು ನೀರಿಗಾಗಿ ನಡಿಗೆ.. ಹಿಂದೆ ಸರಿಯು ಪ್ರಶ್ನೆಯೇ ಇಲ್ಲ: ಡಿಕೆ ಶಿವಕುಮಾರ್‌

20 ಜನರ ತಂಡ

ಬೃಹತ್‌ ಕಾರ್ಯಕರ್ತರ ದಂಡನ್ನು ನಿಯಂತ್ರಿಸುವ ಉದ್ದೇಶದಿಂದ ತಲಾ 20 ಜನರ ತಂಡ ರಚಿಸಲಾಗುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು, ತಂಡದ ಆಗುಹೋಗುಗಳು ಆತನ ಜವಾಬ್ದಾರಿ. ಆತನ ಆದೇಶದಂತೆ ಉಳಿದವರು ನಡೆದುಕೊಳ್ಳಬೇಕು ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ.

ನಿತ್ಯ 2 ಜಿಲ್ಲೆ ಕಾರ್ಯಕರ್ತರು

ಎಲ್ಲಾ ಜಿಲ್ಲೆಗಳ ಕಾರ್ಯಕರ್ತರೂ ಒಂದೇ ಬಾರಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನಿತ್ಯ ಒಂದರಿಂದ ಎರಡು ಜಿಲ್ಲೆಗಳ ಕಾರ್ಯಕರ್ತರಷ್ಟೇ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳು, ಮೈಸೂರು, ಹಾಸನ, ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳು ತೊಡಗಿಸಿಕೊಳ್ಳಲಿವೆ. ಪಾದಯಾತ್ರೆಯಲ್ಲಿ ಆಂಬ್ಯುಲೆನ್ಸ್‌, ವೈದ್ಯರ ತಂಡ, ರಾತ್ರಿ ತಂಗುವ ಸ್ಥಳದಲ್ಲಿ ತಾತ್ಕಾಲಿಕ ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.

ಸರ್ಕಾರ ಯಾವುದೇ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ; ಗೋವಿಂದ ಕಾರಜೋಳ
ಹೀಗಿರಲಿದೆ ಮುಖಂಡರ ಕಾರ್ಯಕ್ರಮ

123.5 ಕಿ.ಮೀ. ಪಾದಯಾತ್ರೆ ನಡೆಯಲಿದೆ. 11 ದಿನಗಳ ಪಾದಯಾತ್ರೆಯನ್ನು ಸಮವಾಗಿ ಹಂಚಲಾಗಿದೆ. ಸಂಗಮದಲ್ಲಿ ಆರಂಭಗೊಂಡ ಪಾದಯಾತ್ರೆ ಹೆಗ್ಗನೂರಿಗೆ ಬಂದು ವಿಶ್ರಾಂತಿ ಮತ್ತು ಊಟ, ಅಂದಿನ ರಾತ್ರಿಯನ್ನು ಡಿಕೆ ಶಿವಕುಮಾರ್‌ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಕಳೆಯಲಿದ್ದಾರೆ. 2 ನೇ ದಿನ ದೊಡ್ಡಾಲಹಳ್ಳಿಯಿಂದ ಮಾದಪ್ಪನದೊಡ್ಡಿಯಲ್ಲಿ ಮಧ್ಯಾಹ್ನದ ಊಟ ವಿಶ್ರಾಂತಿ, ನಂತರ ಕನಕಪುರದಲ್ಲಿ ರಾತ್ರಿ ವಾಸ್ತವ್ಯ.

3ನೇ ದಿನ ಕನಕಪುರದಿಂದ ರಾಮನಗರ ರಸ್ತೆಯ ಗಾಣಾಳುವಿನಲ್ಲಿ ಮಧ್ಯಾಹ್ನದ ಭೋಜನ ವಿಶ್ರಾಂತಿ, ರಾತ್ರಿ ಚಿಕ್ಕೇನಹಳ್ಳಿ ವಾಸ್ತವ್ಯ. 4ನೇ ದಿನ ಚಿಕ್ಕೇನಹಳ್ಳಿಯಿಂದ ರಾಮನಗರ ತಾಲೂಕಿಗೆ ಪ್ರವೇಶ ಕೃಷ್ಣಾಪುರದ ದೊಡ್ಡಿಯಲ್ಲಿ ಮಧ್ಯಾಹ್ನದ ಭೋಜನ ವಿಶ್ರಾಂತಿ, ರಾಮನಗರದಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿದೆ.

ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ! ಸಿದ್ದರಾಮಯ್ಯ
5ನೇ ದಿನ ರಾಮನಗರದಿಂದ ಮಾಯಗಾನಹಳ್ಳಿ ಮಧ್ಯಾಹ್ನದ ವಿಶ್ರಾಂತಿ, ರಾತ್ರಿಗೆ ಬಿಡದಿಯಲ್ಲಿ ವಾಸ್ತವ್ಯ. 6ನೇ ದಿನ ಬಿಡದಿಯಿಂದ ಮಂಚನಾಯಕನಹಳ್ಳಿಯ ರಾಜ್‌ಕುಮಾರ್‌ ಫಾರಂ ಬಳಿ ಮಧ್ಯಾಹ್ನದ ಭೋಜನ, ವಿಶ್ರಾಂತಿ, ರಾತ್ರಿ ಕೆಂಗೇರಿಯ ಪೋಲಿಸ್‌ ಠಾಣೆ ಬಳಿ ರಾತ್ರಿ ವಿಶ್ರಾಂತಿ. 7ನೇ ದಿನ ಕೆಂಗೇರಿಯಿಂದ ನಾಯಂಡಹಳ್ಳಿ ಜಂಕ್ಷನ್‌, ರಾತ್ರಿ ಸಾರಕ್ಕಿ ಸಿಗ್ನಲ್‌ ಬಳಿ ವಿಶ್ರಾಂತಿ.

8ನೇ ದಿನ ಸಾರಕ್ಕಿಯಿಂದ ಅಗರ ಮಧ್ಯಾಹ್ನದ ಭೋಜನ ವಿಶ್ರಾಂತಿ, ಮಾರತ್ತಳ್ಳಿ ಜಂಕ್ಷನ್‌ ರಾತ್ರಿ ವಾಸ್ತವ್ಯ ಕಳೆದು, 9ನೇ ದಿನ ಮಾರತ್ತಹಳ್ಳಿಯಿಂದ ಕೆ.ಆರ್‌. ಪುರಂ ಜಂಕ್ಷನ್‌, ರಾತ್ರಿ ಲಿಂಗರಾಜಪುರ ಜಂಕ್ಷನ್‌ ವಿಶ್ರಾಂತಿ, 10ನೇ ದಿನ ಹೆಣ್ಣೂರು ಪಾರ್ಕಿಂಗ್‌ನಿಂದ ಮೇಕ್ರಿ ವೃತ್ತ, ರಾತ್ರಿಗೆ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನ. 11ನೇ ದಿನ ಕಾಂಗ್ರೆಸ್‌ ಭವನದಿಂದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆದು ಪಾದಯಾತ್ರೆ ಅಂತ್ಯಗೊಳ್ಳಲಿದೆ.



Read more

[wpas_products keywords=”deal of the day sale today offer all”]