Karnataka news paper

ಕೊರೊನಾ 3ನೇ ಅಲೆ ಆರಂಭದಲ್ಲೇ ಮೈಸೂರಿಗೆ ಆಘಾತ..! ಪ್ರವಾಸೋದ್ಯಮ ಕುಸಿತ..


ಹೈಲೈಟ್ಸ್‌:

  • ಕಳೆದ ವಾರ ಮೈಸೂರಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು
  • ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಜನರ ದಂಡೇ ಹರಿದು ಬಂದಿತ್ತು
  • ಇದೀಗ ಒಂದೇ ವಾರದ ಅವಧಿಯಲ್ಲಿ ಎಲ್ಲವೂ ಉಲ್ಟಾ ಆಗಿದೆ

ಮೈಸೂರು: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಮತ್ತೆ ರಣ ಕೇಕೆ ಶುರುಮಾಡಿದೆ . ಮೂರನೇ ಅಲೆ ವ್ಯಾಪಕವಾಗಿ ಹರಡೋಕೆ ಶುರುವಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಸರ್ಕಾರ ಸಾಕಷ್ಟು ಬಿಗಿ ನಿಯಮಗಳನ್ನ ಜಾರಿಗೊಳಿಸಿದೆ. ಶುಕ್ರವಾರದಿಂದ ವೀಕೆಂಡ್ ಕರ್ಫ್ಯೂ ಕೂಡ ಆರಂಭವಾಗಲಿದೆ. ಇದೆಲ್ಲಕ್ಕೂ ಮುನ್ನವೇ ಮೈಸೂರಿನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಓಮಿಕ್ರಾನ್ ಹಾಗೂ ಕೊರೊನಾ ಭೀತಿಗೆ ಬೆಚ್ಚಿದ ಪ್ರವಾಸಿಗರು ಮೈಸೂರಿಗೆ ಬರೋದನ್ನ ನಿಲ್ಲಿಸಿದ್ದು, ಕಳೆದೆರೆಡು ದಿನಗಳಿಂದ ಮೈಸೂರಿನ ಪ್ರವಾಸೋದ್ಯಮ ನೆಲ ಕಚ್ಚಿದೆ.

ಅರಮನೆ ಖಾಲಿ ಖಾಲಿ..! ಝೂ ಕೇಳೊರೇ ಇಲ್ಲ..!

ಮೈಸೂರು ಅಂದಾಕ್ಷಣ ಅಂಬಾ ವಿಲಾಸ ಅರಮನೆ ಎಲ್ಲರ ನೆಚ್ಚಿನ ಫೇವರಿಟ್ ಜಾಗ. ಇಲ್ಲಿಗೆ ಬರೋ ಬಹುತೇಕ ಪ್ರವಾಸಿಗರು ಅರಮನೆಗೆ ಭೇಟಿ ಕೊಟ್ಟೇ ಕೊಡ್ತಾರೆ. ಕಳೆದ ವಾರ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸಂಭ್ರಮದಲ್ಲಿದ್ದ ಜನರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ರು . ಫ್ಲವರ್ ಶೋ ಕೂಡ ಜನರ ಮನ ಗೆದ್ದಿತ್ತು. ಆದ್ರೆ ಹೊಸ ವರ್ಷ ಆರಂಭವಾದಾಗಿನಿಂದ ಕೊರೊನಾ ತನ್ನ ಅಟ್ಟಹಾಸ ಶುರು ಮಾಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಡಿಸೆಂಬರ್ ಕೊನೆ ವಾರದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಅರಮನೆ, ಈಗ ಬಿಕೋ ಅಂತಿದೆ. ಇನ್ನು ಜಯ ಚಾಮರಾಜೇಂದ್ರ ಮೃಗಾಲಯಕ್ಕೆ ಸಾಕಷ್ಟು ಜನರು ಭೇಟಿ ಕೊಡುತ್ತಿದ್ದರು. ಗೊರಿಲ್ಲಾ ಮನೆ ಹಾಗೂ ಪ್ರಾಣಿ ವೀಕ್ಷಣೆಗೆ ಬರುತ್ತಿದ್ದ ಜನರೂ ಈಗ ಕಡಿಮೆಯಾಗಿದ್ದಾರೆ. ಮಂಗಳವಾರ ಕೇವಲ 1,800 ಮಂದಿ ಝೂಗೆ ಭೇಟಿ ಕೊಟ್ಟಿದ್ದು, ಕೊರೊನಾ ಕರಿಛಾಯೆ ಸರಿಯಾಗಿಯೇ ಆವರಿಸಿದೆ.

ಕೊರೊನಾ 3ನೇ ಅಲೆಗೆ ಹಲವು ರಾಜ್ಯದ ಶಾಲೆ, ಕಾಲೇಜು ಲಾಕ್‌., ಕರ್ನಾಟಕದಲ್ಲಿಯೂ ಆಗುತ್ತಾ ಲಾಕ್‌ಡೌನ್‌?
ಸಾವಿರಾರು ಜನರು ಕಂಗಾಲು..!

ಪ್ರವಾಸೋದ್ಯಮವನ್ನೇ ನಂಬಿ ಮೈಸೂರಿನ ಒಂದು ವರ್ಗ ಬದುಕುತ್ತಿದೆ. ಕೊರೊನಾ ಒಂದನೇ ಮತ್ತು ಎರಡನೇ ಅಲೆಯಲ್ಲಿ ಈ ವರ್ಗ ಸಾಕಷ್ಟು ತೊಂದರೆ ಅನುಭವಿಸಿತ್ತು. ಕಳೆದ 4 ತಿಂಗಳಿಂದ ವ್ಯಾಪಾರಸ್ಥರು ಚೇತರಿಕೆ ಕಂಡಿದ್ರು. ಇದೀಗ ಕೊರೊನಾ ಮೂರನೇ ಅಲೆ ಸರಿಯಾಗಿಯೇ ಶಾಕ್ ಕೊಟ್ಟಿದ್ದು, ಮುಂದೇನು ಗತಿ ಎಂಬ ಚಿಂತೆ ಅನೇಕ ಜನರನ್ನ ಕಾಡುತ್ತಿದೆ. ಗೈಡ್‌ಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ವಿಶೇಷವಾಗಿ ಹೋಟೆಲ್ ಉದ್ಯಮಕ್ಕೆ ಈ ಬಾರಿ ದೊಡ್ಡ ಮಟ್ಟದ ಪೆಟ್ಟು ಬೀಳೋದು ಗ್ಯಾರಂಟಿ ಅಂತಾನೇ ವಿಶ್ಲೇಷಿಸಲಾಗುತ್ತಿದೆ .

ಹತ್ತೇ ದಿನದಲ್ಲಿ ಉತ್ಸಾಹ ಮಾಯ..!

ಕಳೆದ ವಾರವಷ್ಟೇ ಮೈಸೂರಲ್ಲಿ ಪ್ರವಾಸಿಗರು ತುಂಬಿದ್ರು. ಹೊರ ರಾಜ್ಯ , ಹೊರ ಜಿಲ್ಲೆಗಳಿಂದ ಜನರ ದಂಡೇ ಹರಿದು ಬಂದಿತ್ತು. ಆದ್ರೆ, ಒಂದೇ ವಾರದ ಅವಧಿಯಲ್ಲಿ ಎಲ್ಲವೂ ಉಲ್ಟಾ ಆಗಿದ್ದು, ಮೈಸೂರು ಬಣಗುಡುತ್ತಿದೆ. ಕೋವಿಡ್ ಪರಾಕ್ರಮ ಶುರು ಆಗ್ತಿದ್ದಂತೆಯೇ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಹೊಸ ವರ್ಷದ ದಿನ ಚಾಮುಂಡಿ ಬೆಟ್ಟದಲ್ಲಿದ್ದ ಜನರನ್ನು ನೋಡಿ ಅದೆಷ್ಟೋ ಮಂದಿ ಬೆಚ್ಚಿ ಬಿದ್ದಿದ್ರು. ಈಗ ಎಲ್ಲವೂ ಸೈಲೆಂಟ್ ಆಗಿದೆ. ಒಟ್ನಲ್ಲಿ ಕೊರೊನಾ 3ನೇ ಅಲೆ ಆರಂಭದಲ್ಲೇ ಶಾಕ್ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡಬೇಕು.
ತಜ್ಞರು ಸಲಹೆ ಕೊಟ್ರೆ ರಾಜ್ಯದಲ್ಲಿ ಲಾಕ್‌ಡೌನ್: ಸಚಿವ ಎಸ್. ಟಿ. ಸೋಮಶೇಖರ್ ಎಚ್ಚರಿಕೆ



Read more

[wpas_products keywords=”deal of the day sale today offer all”]