Karnataka news paper

ವಾಹನ ತಪಾಸಣೆ ವೇಳೆ ಅಪಘಾತ: ಬೆಂಗಳೂರಿನ ಯುವಕ ಸಾವು, ಪೊಲೀಸರ ವಿರುದ್ಧ ಪೋಷಕರ ಆಕ್ರೋಶ


ಹೈಲೈಟ್ಸ್‌:

  • ವಾಹನ ತಪಾಸಣೆ ವೇಳೆ ಅಪಘಾತ ಪ್ರಕರಣ
  • ಬೈಕ್‌ ಸವಾರ ಬೆಂಗಳೂರಿನ ಯುವಕ ನಿಧನ
  • ಹೆಲ್ಮೆಟ್‌ ಧರಿಸದ ಕಾರಣ ಮೆದುಳಿಗೆ ಪೆಟ್ಟು

ಬೆಂಗಳೂರು : ವಿಜಯನಗರದ ಸಂಚಾರ ಠಾಣೆ ವ್ಯಾಪ್ತಿಯ ಆರ್‌ಪಿಸಿ ಲೇಔಟ್‌ನ ಸವೀರ್ಸ್ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್‌ ಎಂಬಾತ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾನೆ.

ನ್ಯೂ ಬಿನ್ನಿಪೇಟೆ ನಿವಾಸಿ ಶರವಣ ಎಂಬುವರ ಪುತ್ರ ಕೌಶಿಕ್‌ ಮೃತಪಟ್ಟಿರುವ ಯುವಕ. ಆರ್‌ಪಿಸಿ ಲೇಔಟ್‌ನ ಸವೀರ್‍ಸ್‌ ರಸ್ತೆಯಲ್ಲಿಡಿ.9ರಂದು ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಚೇತನ್‌ ಬೈಕ್‌ ಚಲಾಯಿಸಿಕೊಂಡು ಬಂದಿದ್ದ. ಹಿಂಬದಿಯಲ್ಲಿ ಕೌಶಿಕ್‌ ಕುಳಿತಿದ್ದರು. ಪೊಲೀಸರನ್ನು ನೋಡಿ ಹೆದರಿದ್ದ ಚೇತನ್‌, ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ವಾಹನ ಚಲಾಯಿಸಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ರಾಧಾಕೃಷ್ಣ ಅವರಿಗೆ ಬೈಕ್‌ ಗುದ್ದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್‌ ಉರುಳಿದೆ. ಹೆಲ್ಮೆಟ್‌ ಧರಿಸದ ಕಾರಣ ಕೌಶಿಕ್‌ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಚೇತನ್‌ ಬೈಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಗೊಂಡು ಪ್ರಜ್ಞಾಹೀನನಾಗಿದ್ದ ಕೌಶಿಕ್‌ನನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಚಿಕಿತ್ಸೆಗೆ ಸ್ಪಂದಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಪುಸ್ತಕ ತರಲು ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿ ಸ್ನೇಹಿತ ಚೇತನ್‌ ಬೈಕ್‌ನಲ್ಲಿ ಕೌಶಿಕ್‌ ಹೊರಹೋಗಿದ್ದ.

ಇಬ್ಬರೂ ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸಿಕೊಂಡು ಬರುತ್ತಿದ್ದುದನ್ನು ಗಮನಿಸಿದ ಸಂಚಾರ ಪೊಲೀಸರು, ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೆದರಿದ ಚೇತನ್‌, ಬೈಕ್‌ನ ವೇಗವನ್ನು ಹೆಚ್ಚಿಸಿದ್ದಾನೆ. ಈ ವೇಳೆ ಪೊಲೀಸರು ಹಿಮ್ಮೆಟ್ಟಿದಾಗ ಇಬ್ಬರೂ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದಿದ್ದಾರೆ. ಈ ವೇಳೆಗೆ ಕೌಶಿಕ್‌ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪ್ಯಾಂಟ್‌, ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದವನ ಬಂಧನ

”ಪುತ್ರನ ಸಾವಿಗೆ ವಿಜಯನಗರ ಸಂಚಾರ ಠಾಣೆಯ ಪೊಲೀಸರೇ ಕಾರಣ. ಇಂಥ ಸ್ಥಿತಿ ಬೇರಾರ‍ಯರಿಗೂ ಬರುವುದು ಬೇಡ. ಇನ್ನಾದರೂ ಸಂಚಾರ ಪೊಲೀಸರು ವಾಹನಗಳನ್ನು ಹಿಮ್ಮೆಟ್ಟಿ ಹಿಡಿಯುವುದನ್ನು ನಿಲ್ಲಿಸಬೇಕು. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹಾಗೂ ಸಂಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು, ಇಂತಹ ಅವಘಡಗಳಿಗೆ ಆಸ್ಪದ ನೀಡದಂತೆ ಪೊಲೀಸರಿಗೆ ತಿಳಿ ಹೇಳಬೇಕು,” ಎಂದು ಕೌಶಿಕ್‌ ಪೋಷಕರು ಮನವಿ ಮಾಡಿದ್ದಾರೆ.

ಅಟ್ಟಾಡಿಸಿಕೊಂಡು ಹಿಡಿಯಲು ಯತ್ನಿಸಿರುವುದೇ ಸಾವಿಗೆ ಕಾರಣ

ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸಿಕೊಂಡು ಬಂದ ಯುವಕರನ್ನು ವಿಜಯನಗರ ಸಂಚಾರ ಪೊಲೀಸರು ಅಡ್ಡಗಟ್ಟಿ ಅಟ್ಟಾಡಿಸಿಕೊಂಡು ಹಿಡಿಯಲು ಯತ್ನಿಸಿರುವುದೇ ಕೌಶಿಕ್‌ ಪ್ರಾಣ ಕಳೆದುಕೊಳ್ಳಲು ಕಾರಣವಾಗಿದೆ ಸಾರ್ವಜನಿಕರು ಆರೋಪಿಸಿದ್ದಾರೆ. ನಗರದಲ್ಲಿ ಸಂಚಾರ ಪೊಲೀಸರು ಮಾನವೀಯತೆ ಮರೆತು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ.

ನಿಯಮಾನುಸಾರ ವಾಹನಗಳ ತಪಾಸಣೆ ನಡೆಸುತ್ತಿಲ್ಲ. ಸಂಚಾರ ನಿಯಮ ಉಲ್ಲಂಘಿಘಿಸಿದ ಸವಾರರನ್ನು ಪತ್ತೆ ಮಾಡಿ, ದಂಡ ವಿಧಿಸುವುದು ಕಷ್ಟವೇನೂ ಅಲ್ಲ. ಅದಕ್ಕೆಂದೇ ಅವರಿಗೆ ಕ್ಯಾಮೆರಾ ನೀಡಲಾಗಿದೆ. ಇದೆಲ್ಲಬಿಟ್ಟು ರಸ್ತೆಗಳಲ್ಲಿವಾಹನಗಳನ್ನು ಅಡ್ಡಗಟ್ಟಿ ಕೀ ಕಿತ್ತುಕೊಳ್ಳುವುದು, ಹಿಂಬಾಲಿಸಿಕೊಂಡು ಹೋಗಿ ಹಿಡಿಯುವುದು ಸರಿಯಲ್ಲ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಜನರ ಜೀವ ರಕ್ಷರಾಗಬೇಕೆ ವಿನಃ ಬಲಿ ಪಡೆಯುವ ಭಕ್ಷಕರಾಗಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಣ್ಣುಗಳ ದಾನಕ್ಕೆ ಪುನೀತ್‌ ಪ್ರೇರಣ!
”ದಿ. ಪುನೀತ್‌ ರಾಜ್‌ಕುಮಾರ್‌ ಅವರು ಕಣ್ಣು ದಾನ ಮಾಡಿರುವುದು ನಮಗೆ ಪ್ರೇರಣೆಯಾಗಿದೆ. ಪುತ್ರನ ಜೀವ ಮರಳಿ ಪಡೆಯಲಾಗುವುದಿಲ್ಲ. ಹಾಗಾಗಿ, ಅವನ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕು ನೀಡಲಿ ಎಂಬ ಉದ್ದೇಶದಿಂದ ನೇತ್ರದಾನ ಮಾಡಲಾಗಿದೆ,” ಎಂದು ಮೃತ ಕೌಶಿಕ್‌ ತಂದೆ ಶರವಣ ತಿಳಿಸಿದ್ದಾರೆ.



Read more