ಹೈಲೈಟ್ಸ್:
- ನನ್ನ ಬುಟ್ಟಿಯಲ್ಲಿ ಹಾವು ಇದೆ ಎಂದಷ್ಟೇ ಹೇಳಿದ್ದೇನೆ
- ಯಾವ ಹಾವು ನನ್ನ ಬಳಿ ಇದೆ ಎಂದು ನಾನು ಹೇಳಿಲ್ಲ
- ಯೋಜನೆಯ ವಿಳಂಬಕ್ಕೆ ಕಾರಣವಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ: ಸಚಿವ ಗೋವಿಂದ ಕಾರಜೋಳ
ನನ್ನ ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿದ್ದೇನೆಯೇ ಹೊರತು, ಯಾವ ಹಾವು ಎಂದು ಹೇಳಿಲ್ಲ. ಯೋಜನೆಯ ವಿಳಂಬಕ್ಕೆ ಕಾರಣವಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದಷ್ಟೇ ನಾನು ಹೇಳಿದ್ದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ವಿಕಾಸಸೌಧ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾರಜೋಳ, ಅಧಿಕಾರದಲ್ಲಿದ್ದಾಗ ಆಲಸ್ಯತನ, ವಿರೋಧ ಪಕ್ಷದಲ್ಲಿದ್ದಾಗ ಆಂದೋಲನ ಮಾಡುವುದು ಕಾಂಗ್ರೆಸ್ನವರ ಜಾಯಮಾನ ಎಂದು ಟೀಕಿಸಿದರು. ತಮ್ಮ ಬಳಿ ಇರುವ ಸ್ಪೋಟಕ ಮಾಹಿತಿಯನ್ನು ಕಾಂಗ್ರೆಸ್ನವರ ಪಾದಯಾತ್ರೆಯ ಮುನ್ನವೇ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿಂದ ಮೇಕೆದಾಟು ಯೋಜನೆಗೆ ಅಡೆತಡೆ ಉಂಟಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಹೇಳಿದ್ದಾರೆ. ಆದ್ರೆ, ಡಿಎಂಕೆ ಜೊತೆಗೂಡಿ ಸರ್ಕಾರ ರಚಿಸಿರುವ ತಮಿಳುನಾಡು ಕಾಂಗ್ರೆಸಿಗರಿಗೆ ಸಿದ್ಧರಾಮಯ್ಯನವರು ಮೊದಲು ಬುದ್ದಿ ಹೇಳಲಿ ಎಂದು ಕಾರಜೋಳ ತಾಕೀತು ಮಾಡಿದರು.
40% ಕಮೀಷನ್ ವಿಚಾರ: ರಾಜ್ಯದಲ್ಲಿ 42,000 ನೊಂದಾಯಿತ ಗುತ್ತಿಗೆದಾರರಿದ್ದು, ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಸದಸ್ಯತ್ವ ಕೇವಲ 800 ಮಾತ್ರ. ಹೀಗಾಗಿ, 40% ಕಮೀಷನ್, 20% ಟ್ಯಾಕ್ಸ್ ಕೊಟ್ಟು ಕೇವಲ 40% ನಲ್ಲಿ ಕೆಲಸ ಮಾಡಿದ ಗುತ್ತಿಗೆದಾರ ಯಾರಿರಬಹುದು? ಎಂದು ಕಾರಜೋಳ ವ್ಯಂಗ್ಯವಾಡಿದರು. ಈಗ 40% ಆಗಿದೆ ಎಂದು ಹೇಳಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಹಿಂದೆಯೂ ಕಮೀಷನ್ ದಂಧೆ ಇತ್ತು ಎಂದರೆ ಎಷ್ಟು ಇತ್ತು ಎಂದು ಜನತೆಗೆ ಹೇಳಲಿ ಎಂದು ಚುಚ್ಚಿದರು.
ಇನ್ನು, ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದ್ದು, 18,000 ಕೋಟಿ ರೂಪಾಯಿ ವೆಚ್ಚದ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ನಿಗಮದ ಒಟ್ಟಾರೆ ನೀರಾವರಿ ಸಾಮರ್ಥ್ಯದ ಗುರಿ 17,14,337 ಹೆಕ್ಟೇರ್ ಆಗಿದ್ದು, ಈ ಪೈಕಿ ನವೆಂಬರ್ 2021 ರ ಅಂತ್ಯದ ವೇಳೆಗೆ 14,66,251 ಹೆಕ್ಟೇರ್ ಸಾಮರ್ಥ್ಯ ಸೃಷ್ಟಿಸಲಾಗಿದೆ. ಇನ್ನೂ 2,45,086 ಹೆಕ್ಟೇರ್ ಗುರಿ ಸಾಧಿಸಬೇಕಿದೆ. ಪ್ರಸ್ತುತ ಸಾಲಿನಲ್ಲಿ 45,337 ಹೆಕ್ಟೇರ್ ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು. ಮಂಗಳವಾರ ಇಡೀ ದಿನ ನೀರಾವರಿ ನಿಗಮದ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದ್ದು, ಯೋಜನಾವಾರು ಪ್ರಗತಿಯ ವಿವರಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ 18,153 ಕೋಟಿ ರೂಪಾಯಿಗಳ ಯೋಜನೆಗಳು ಚಾಲ್ತಿಯಲ್ಲಿದ್ದು, ಕರ್ನಾಟಕ ನೀರಾವರಿ ನಿಗಮಕ್ಕೆ 5,809 ಕೋಟಿ ರೂಪಾಯಿಗಳ ಮುಂಗಡ ಅಂದಾಜು ಮಂಜೂರಾಗಿದೆ. ಈ ಪೈಕಿ ಸೆಪ್ಟೆಂಬರ್ ಅಂತ್ಯದ ವೇಳೆಗೆ 3,200 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ ಎಂದು ಸಚಿವರು ವಿವರಗಳನ್ನು ನೀಡಿದರು.
ನೀರಾವರಿ ನಿಗಮದ ಅಥಣಿ ವಿಭಾಗದಲ್ಲಿ 28 ಕೋಟಿ ರೂಪಾಯಿ ಕೊಟ್ಟಿ ಬಿಲ್ಲಿನ ಪಾವತಿ ಬೆಳಕಿಗೆ ಬಂದಿದ್ದು, 20 ಜನ ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ ಮತ್ತು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಅವರ ಆಸ್ತಿ ಪರಭಾರೆಯ ಆಗದಂತೆ ನಿಯಮಾನುಸಾರ ಋಣಭಾರ ಸೃಷ್ಟಿಸಲು ಜಿಲ್ಲಾಧಿಕಾರಿಗಳನ್ನು ಮತ್ತು ಉಪ ನೋಂದಣಾಧಿಕಾರಿಗಳನ್ನು ಕೋರಲಾಗಿದೆ ಎಂದು ಸಚಿವರು ವಿವರಿಸಿದರು.
ಇಂತಹ ಪ್ರಕರಣಗಳನ್ನು ಜಾಗೃತ ದಳದ ತನಿಖೆಗೆ ಒಪ್ಪಿಸಲಾಗಿದೆ. ಬೇರೆ ಯಾವುದಾದರೂ ಪ್ರಕರಣಗಳು ಗಮನಕ್ಕೆ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಸಚಿವರು ತಿಳಿಸಿದರು.

ಗೋವಿಂದ ಕಾರಜೋಳ
Read more
[wpas_products keywords=”deal of the day sale today offer all”]