Karnataka news paper

ಕಣಿವೆ ರಾಜ್ಯದಲ್ಲಿ ಉಗ್ರರ ಬೇಟೆ..! ಲಷ್ಕರ್ ಉಗ್ರ ನಾಯಕ ಸೇರಿದಂತೆ ಇಬ್ಬರ ಹತ್ಯೆ..!


ಹೈಲೈಟ್ಸ್‌:

  • ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ನಾಯಕ ಸಲೀಮ್ ಪರ್ರೆ ಹತ್ಯೆ
  • ಆತನ ಜೊತೆಗಿದ್ದ ಮತ್ತೊಬ್ಬ ಉಗ್ರ ಹಫೀಜ್ ಅಲಿಯಾ ಹಮ್ಜಾ ಕೂಡಾ ಮಟಾಷ್
  • ಕಣಿವೆ ರಾಜ್ಯದಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು

ಜಮ್ಮು ಕಾಶ್ಮೀರ: ಶ್ರೀನಗರ ಪೊಲೀಸರು ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.

ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ನಾಯಕ ಸಲೀಮ್ ಪರ್ರೆ ಎಂಬಾತನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹತ್ಯೆಗೈದಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ಉಗ್ರ ಹಫೀಜ್ ಅಲಿಯಾ ಹಮ್ಜಾ ಕೂಡಾ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಜಮ್ಮು ಕಾಶ್ಮೀರ ಪೊಲೀಸರು ಈ ಸಂಬಂಧ ಮಾಹಿತಿ ನೀಡಿದ್ದು, ಪಾಕ್ ಮೂಲದ ಉಗ್ರ ಹಮ್ಜಾ ಕಣಿವೆ ರಾಜ್ಯದಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಬಂಡೀಪೋರದಲ್ಲಿ ಉಗ್ರರು ನಡೆಸಿದ್ದ ಪೊಲೀಸರ ಮೇಲಿನ ದಾಳಿ ವೇಳೆ ಇಬ್ಬರು ಪೊಲೀಸರು ಹತರಾಗಿದ್ದರು. ಈ ಕೃತ್ಯದ ಹಿಂದೆ ಸಲೀಂ ಪರ್ರೆ ಹಾಗೂ ಹಮ್ಜಾ ಕೈವಾಡವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆತ ಬಳಿಕ ಶ್ರೀನಗರದ ಹರ್ವಾನಾ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದ.

ಕಾಶ್ಮೀರ ನಾಯಕರಿಗೆ ಪೊಲೀಸರಿಂದ ಹೊಸ ವರ್ಷದ ‘ಸ್ವಾಗತ’: ರಾಜಕೀಯ ಮುಖಂಡರ ಬಂಧನ
ಸೋಮವಾರ ಮಧ್ಯಾಹ್ನ ಶ್ರೀನಗರದ ಶಾಲೀಮಾರ್‌ನಲ್ಲಿ ಲಷ್ಕರ್ ಎ ತೊಯ್ಬಾ ಉಗ್ರ ಸಲೀಂ ಪರ್ರೆ ಹಾಗೂ ಮತ್ತೊಬ್ಬ ವಿದೇಶಿ ಉಗ್ರ ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ವೇಳೆ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಸಲೀಂ ಪರ್ರೆಯನ್ನು ಹತ್ಯೆಗೈಯ್ಯಲಾಯ್ತು. ಆದ್ರೆ, ಈ ವೇಳೆ ಸಲೀಂ ಜೊತೆಗಿದ್ದ ವಿದೇಶಿ ಉಗ್ರ ಪರಾರಿಯಾಗಿದ್ದ. ಬಳಿಕ ಸಮೀಪದಲ್ಲೇ ಮತ್ತೊಂದು ಸ್ಥಳದಲ್ಲಿ ನಡೆದ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಉಗ್ರ ಹಮ್ಜಾನನ್ನೂ ಸೇನೆ ಹತ್ಯೆಗೈದಿದೆ.

ಆರಂಭದಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ ವಿದೇಶಿ ಉಗ್ರನನ್ನೂ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದೇ ಹೇಳಲಾಗಿತ್ತು. ಆದ್ರೆ, ಈ ಕುರಿತಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದು, ಆರಂಭದಲ್ಲಿ ಲಷ್ಕರ್ ಉಗ್ರ ಸಲೀಂ ಮಾತ್ರ ಹತನಾಗಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ವಿದೇಶಿ ಉಗ್ರ ಪರಾರಿಯಾಗಿದ್ದ. ಆತನ ಪತ್ತೆಗೆ ಕಾರ್ಯಾಚರಣೆ ಮುಂದುವರೆಯಿತು, ಬಳಿಕ ಆತನನ್ನೂ ಹೊಡೆದುರುಳಿಸಲಾಯ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಗೆ ನೋಡಿದ್ರೆ 2021ರಲ್ಲಿ ಇಡೀ ವರ್ಷ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 100 ಆಪರೇಷನ್‌ಗಳನ್ನು ಕೈಗೆತ್ತಿಕೊಂಡು ಸರಿಸುಮಾರು 200 ಉಗ್ರರನ್ನು ಹೊಡೆದುರುಳಿಸಿದೆ.

‘ಡೆಡ್ ಬಾಡಿ ತೆಗೆದುಕೊಂಡು ಹೋಗಿ’: ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಚನೆ!
ಜಮ್ಮು ಕಾಶ್ಮರದ ಯುವಕರು ಉಗ್ರ ಸಂಘಟನೆಗಳತ್ತ ಆಕರ್ಷಿತರಾಗದಂತೆ ತಡೆಯುವ ನಿಟ್ಟಿನಲ್ಲಿಯೂ ಹಲವು ಕಾರ್ಯಾಚರಣೆಗಳು ನಡೆದಿವೆ. ಒಂದೆಡೆ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದ್ದು, ಕಣಿವೆ ರಾಜ್ಯದ ಯುವಕರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಕೊಡಿಸುವ ನಿಟ್ಟಿನಲ್ಲೂ ಸರ್ಕಾರ ಮುಂದಾಗಿದೆ.

ಇದರ ಬೆನ್ನಲ್ಲೇ 2021ರಲ್ಲಿ ಕಣಿವೆ ರಾಜ್ಯದಲ್ಲಿ ಸಾರ್ವಜನಿಕರ ಮೇಲೂ ಉಗ್ರರ ದಾಳಿ ನಡೆದಿದ್ದವು. ಬಹುತೇಕ ವಲಸೆ ಕಾರ್ಮಿಕರು, ಉದ್ಯಮಿಗಳೇ ಉಗ್ರರ ಟಾರ್ಗೆಟ್ ಆಗಿದ್ದರು. ಆದ್ರೆ, ಸೇನೆಯು ಭಯೋತ್ಪಾದಕರ ಕೈ ಮೇಲಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಉಗ್ರರ ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಾಲಯಕ್ಕೆ ವರ್ಷಕ್ಕೆ 80 ಲಕ್ಷ ಭಕ್ತರ ದರ್ಶನ!



Read more