ಹೈಲೈಟ್ಸ್:
- 2021-22ರ ಆರ್ಥಿಕ ವರ್ಷದಲ್ಲಿ 2.1 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ
- ಇದೀಗ ಮತ್ತೆ 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ
- ಸರ್ಕಾರದ ಎದುರಿಗೆ 22 ಸಾರ್ವಜನಿಕ ವಲಯದ ಉದ್ದಿಮೆಗಳಿವೆ
ಸಾರ್ವಜನಿಕ ವಲಯದಲ್ಲಿ ಕಳೆದ 19 ವರ್ಷಗಳಿಂದ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಗೆ ಮಾರುವ ಮೂಲಕ, ಭಾರತ ಸರ್ಕಾರವು ಖಾಸಗೀಕರಣದತ್ತ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ. ಇದೀಗ ಸರ್ಕಾರದ ಎದುರಿಗೆ 22 ಸಾರ್ವಜನಿಕ ವಲಯದ ಉದ್ದಿಮೆಗಳಿವೆ. ಈ ಪೈಕಿ 17 ಉದ್ದಿಮೆಗಳ ಖಾಸಗೀಕರಣಕ್ಕೆ ಸರ್ಕಾರ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಈ ಪೈಕಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಹಾಗೂ ಬಿಇಎಂಎಲ್ ಸಂಸ್ಥೆಗಳ ಖಾಸಗೀಕರಣದ ಪ್ರಕ್ರಿಯೆ ಆರಂಭಾಗಿದೆ.
ಇನ್ನುಳಿದಂತೆ ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ಲೈನ್ ಅಡಿಯಲ್ಲಿ ದೇಶದ ಪ್ರಮುಖ ಮೂಲ ಸೌಕರ್ಯಗಳಾದ ರಸ್ತೆ, ಬಂದರು, ಏರ್ಪೋರ್ಟ್, ರೈಲ್ವೆ, ಗಡಿ ಹಾಗೂ ಟೆಲಿಕಾಂ ವಲಯವನ್ನು ದೀರ್ಘಕಾಲ ಖಾಸಗಿಯವರಿಗೆ ಬಿಟ್ಟುಕೊಡಲು ಸರ್ಕಾರ ಮುಂದಾಗಿದೆ.
ಸರ್ಕಾರದ ಈ ಪ್ರಕ್ರಿಯೆಯಿಂದ ಖಾಸಗಿ ವಲಯಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಜಾಗತಿಕ ಮಟ್ಟದಲ್ಲಿ ಹೇಳೋದಾದ್ರೆ, ವಿದೇಶಿ ನೇರ ಬಂಡವಾಳ ಹರಿದು ಬರಲು ಹಾಗೂ ದೇಶದ ಖಾಸಗಿ ಸಂಸ್ಥೆಗಳ ಜೊತೆಗೆ ವಿಲೀನ ಅಥವಾ ಸ್ವತ್ತುಗಳ ಸ್ವಾಧೀನಕ್ಕೆ ಈ ಕ್ರಮವು ಸಹಕಾರಿ ಆಗಲಿವೆ. ಇನ್ನು ದೇಶದ ಮೂಲಸೌಕರ್ಯಗಳ ಖಾಸಗೀಕರಣದಿಂದಾಗಿ ಕಾರ್ಪೊರೇಟ್ ಹೂಡಿಕೆದಾರರನ್ನು ಆಕರ್ಷಿಸಬಹುದಾಗಿದೆ.
ಈ ಕ್ರಮಗಳನ್ನ ಅನುಸರಿಸುವುದರಿಂದ ಸರ್ಕಾರ ಸುಲಭವಾಗಿ ಆದಾಯ ಪಡೆಯಬಹುದಾಗಿದೆ. ಯಾವುದೇ ಸಮಯ ವಿಳಂಬ ಇಲ್ಲದೆ ಹಾಗೂ ಸಮಸ್ಯೆಗಳು ಇಲ್ಲದೆ ಆದಾಯದ ಹರಿವು ಏರ್ಪಡಲಿದೆ ಎನ್ನುತ್ತಾರೆ, ರಿಸರ್ಜೆಂಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಪ್ರಕಾಶ್ ಗಡಿಯಾ.
ಈ ಸಂಸ್ಥೆಯು ಸರ್ಕಾರಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ಹೂಡಿಕೆಯನ್ನು ಮಾರಾಟ ಮಾಡುವಲ್ಲಿ ಸರ್ಕಾರಕ್ಕೆ ನೆರವಾಗಿತ್ತು.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್‘ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್ಸ್ಕ್ರೈಬ್ ಆಗಿ.