Karnataka news paper

ಪೊಲೀಸರ ಸೋಗಿನಲ್ಲಿ ಬೆಂಗಳೂರಿನ ಇಂಜಿನಿಯರ್‌ ಮನೆಯಲ್ಲಿ ದರೋಡೆ : ಕಾರಿನಲ್ಲಿ ಸುತ್ತಾಡಿಸಿ ಬೆದರಿಕೆ


ಹೈಲೈಟ್ಸ್‌:

  • ಪೊಲೀಸರ ಸೋಗಿನಲ್ಲಿ ಬೆಂಗಳೂರಿನ ಇಂಜಿನಿಯರ್‌ ಮನೆಯಲ್ಲಿ ಕಳವು
  • 19 ಲಕ್ಷ ರೂ., 500 ಗ್ರಾಂ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
  • ಅಪ್ಪ-ಮಗನನ್ನು ಕಾರಿನಲ್ಲಿ ಸುತ್ತಾಡಿಸಿ ಜೀವಬೆದರಿಕೆ ಹಾಕಿ ವಾಪಸ್‌

ಬೆಂಗಳೂರು : ಪೊಲೀಸರ ಸೋಗಿನಲ್ಲಿ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು 19 ಲಕ್ಷ ರೂ. ನಗದು, 500 ಗ್ರಾಂ ಚಿನ್ನಾಭರಣ ದೋಚಿರುವುದಲ್ಲದೆ, ಕುಟುಂಬದ ಸದಸ್ಯರನ್ನು ಅಪಹರಿಸಿ ಕಾರಿನಲ್ಲಿ ಹಲವು ಕಡೆ ಸುತ್ತಾಡಿಸಿ, ನಂತರ ಜೀವ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಮಹಾಲಕ್ಷ್ಮಿಪುರದ ಎರಡನೇ ಹಂತದಲ್ಲಿನ ಆದೀತ್‌ ಹೋಟೆಲ್‌ ಹಿಂಭಾಗದಲ್ಲಿ ವಾಸವಿರುವ ಸಿವಿಲ್‌ ಇಂಜಿನಿಯರ್‌ ಸಾಮ್ಯಾನಾಯ್‌್ಕ ಮನೆಯಲ್ಲಿ ದರೋಡೆ ನಡೆದಿದೆ. ಸಾಮ್ಯಾನಾಯ್‌್ಕ ನೀಡಿರುವ ದೂರಿನ ಮೇರೆಗೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ವಿವರ!
ಸಾಮ್ಯಾನಾಯ್‌್ಕ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದು, ಈ ಮೊದಲು ಭಾರತ್‌ ಬಿಲ್ಡರ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದರು. ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿನಲ್ಲಿ ನಾಲ್ಕೈದು ಮಂದಿ ಅಪರಿಚಿತರು ಮನೆಗೆ ಬಂದು ತಾವು ತಿಪಟೂರು ಪೊಲೀಸ್‌ ಠಾಣೆಯ ಕ್ರೈಂ ವಿಭಾಗದ ಪೊಲೀಸರು ಎಂದು ಮನೆ ಮಾಲೀಕರನ್ನು ಪರಿಚಯಿಸಿಕೊಂಡಿದ್ದರು.

ಕೆಲ ಸಮಯದ ಬಳಿಕ ವ್ಯಕ್ತಿಯೊಬ್ಬನ ಫೋಟೊವನ್ನು ತೋರಿಸಿ ಇವನು ಕಳ್ಳನಾಗಿದ್ದು, ಇವನು ಕದ್ದಿರುವ ಹಣ ಮತ್ತು ಒಡವೆಗಳನ್ನು ನಿಮಗೆ ಕೊಟ್ಟಿರುವುದಾಗಿ ಹೇಳಿದ್ದು, ಅದನ್ನು ಕೊಡಿ ಎಂದು ಹೇಳಿದ್ದಾರೆ. ನಂತರ ಗನ್‌ ಮತ್ತು ಚಾಕು ತೋರಿಸಿ ಮನೆಯವರನ್ನು ಬೆದರಿಸಿದ್ದಾರೆ. ಕುಟುಂಬ ಸದಸ್ಯರ ಬಳಿ ಇದ್ದ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಸಾಮ್ಯಾನಾಯ್‌್ಕ ಅವರ ಪುತ್ರ ಮನೋಹರ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ.

ದರೋಡೆಕೋರರು ಸುಮಾರು ಎರಡು ಗಂಟೆ ಕಾಲ ಮನೆಯ ಎಲ್ಲಾ ಭಾಗಗಳನ್ನು ಹುಡುಕಾಡಿ ಬೆಡ್‌ರೂಂನಲ್ಲಿ ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ 19 ಲಕ್ಷ ರೂ. ನಗದು ಹಾಗೂ ಬೀರುವಿನಲ್ಲಿದ್ದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 500 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾರೆ. ನಂತರ ಪೊಲೀಸ್‌ ಠಾಣೆಗೆ ಬನ್ನಿ ಎಂದು ಅಪ್ಪ ಮತ್ತು ಮಗನನ್ನು ಸಾಮ್ಯಾನಾಯ್‌್ಕ ಅವರ ಕಾರಿನಲ್ಲಿ ಕರೆದುಕೊಂಡು ಗೊರಗುಂಟೆ ಪಾಳ್ಯ, ಬಿಇಎಲ್‌ ವೃತ್ತ ಮಾರ್ಗವಾಗಿ ಎಂ.ಎಸ್‌.ಪಾಳ್ಯದ ಕಡೆಗೆ ಹೋಗಿ, ಹಲವು ಕಡೆ ಸುತ್ತಾಡಿಸಿ ಕೊನೆಗೆ ಬೆಳಗಿನ ಜಾವ ನಾಲ್ಕು ಗಂಟೆಗೆ ಕಾರು ನಿಲ್ಲಿಸಿ, 20 ಲಕ್ಷ ರೂ. ನೀಡಿದರೆ ನಿಮ್ಮನ್ನು ಜೀವಸಹಿತ ಬಿಡುತ್ತೇವೆ ಎಂದು ಹೇಳಿದ್ದಾರೆ.

ಅಲ್ಲಿಂದ ಗಂಗಮ್ಮ ಸರ್ಕಲ್‌ ಬಳಿ ಬಂದ ದರೋಡೆಕೋರರು ಅಲ್ಲಿ ಇಳಿದಿದ್ದಾರೆ. ನಾವು ಕರೆದಾಗ ಠಾಣೆಗೆ ಬರಬೇಕು ಎಂದು ಎಚ್ಚರಿಕೆ ನೀಡಿ ಆಟೋದಲ್ಲಿ ಹೋಗಿದ್ದಾರೆ. ಸಾಮ್ಯಾನಾಯ್‌್ಕ ತಮ್ಮ ಕಾರಿನಲ್ಲಿ ಸಂಜೆ 5 ರ ವೇಳೆಗೆ ಮನೆಗೆ ಬಂದಿದ್ದಾರೆ. ನಂತರ ಸಾಮ್ಯಾನಾಯ್‌್ಕ, ತಮ್ಮ ಪತ್ನಿಯ ಅಣ್ಣನ ಮಗ ರೋಹನ್‌ ಕೆಲಸ ಮಾಡುವ ಆರ್‌.ಜಿ.ಹೋಟೆಲ್‌ ಬಳಿ ಹೋಗಿ ಆತನನ್ನು ಕರೆದುಕೊಂಡು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಕ್ಕಪಕ್ಕದ ಮನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.



Read more