ಹೈಲೈಟ್ಸ್:
- ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ
- 600 ಆಕ್ಸಿಜನ್ ಕಾನ್ಸಂಟ್ರೇಟರ್, 26 ವೆಂಟಿಲೇಟರ್ ಸುಸ್ಥಿತಿಗೆ ಚಿತ್ತ
- ಬೆಂಗಳೂರಿನಲ್ಲಿ ಸೋಂಕು ಹೆಚ್ಚಳ, ರಾಜ್ಯದಲ್ಲಿ ಆತಂಕ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬೆಂ. ಗ್ರಾ. ಜಿಲ್ಲೆಯಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 4 ತಾಲೂಕುಗಳ ಆಸ್ಪತ್ರೆಗಳಲ್ಲಿರುವ 600 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿದಂತೆ 26 ವೆಂಟಿಲೇಟರ್ಗಳನ್ನು ಸುಸ್ಥಿತಿಯಲ್ಲಿಡಲು ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಒಂದಂಕಿಯಲ್ಲಿದ್ದರೂ, ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿತ್ಯ ಪ್ರಕರಣಗಳ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಜತೆಗೆ, ಬೆಂಗಳೂರಿನೊಂದಿಗೆ ನಿತ್ಯದ ನಂಟು ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲು ಸೋಂಕು ಹೆಚ್ಚಾಗುವ ಭೀತಿಯಿದ್ದು, ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಆರೋಗ್ಯ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ.
2ನೇ ಅಲೆಯಲ್ಲಿ ತೀವ್ರ ಪ್ರಮಾಣದಲ್ಲಿ ಸಾವು ಎದುರಿಸಿದ ಬೆಂ.ಗ್ರಾ.ಜಿಲ್ಲೆಯಲ್ಲಿ ಪ್ರಸ್ತುತ ಸೋಂಕನ್ನು ಕಟ್ಟಿಹಾಕಲು ಮುನ್ನೆಚ್ಚರಿಕೆ ಕ್ರಮಗಳ ಮೊರೆ ಹೋಗಲಾಗಿದೆ. ಸೋಂಕು ಹರಡದಿರಲು ಜಿಲ್ಲೆಯಾದ್ಯಂತ ಸಭೆ, ಸಮಾರಂಭಗಳನ್ನು ನಿಷೇಧಿಸಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಷಷ್ಟಿಗೆ ನಡೆಯಬೇಕಿದ್ದ ಬ್ರಹ್ಮರಥೋತ್ಸವವನ್ನು ರದ್ದು ಮಾಡಲಾಗಿದೆ. ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿಸಲು ಆರೋಗ್ಯ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸುತ್ತಿದ್ದು, 1ನೇ ಡೋಸ್ ಪಡೆದರವರಿಗೆ ಕರೆ ಮೂಲಕ ಮಾಹಿತಿ ನೀಡಿ 2ನೇ ಡೋಸ್ ಪಡೆಯುವಂತೆ ತಿಳಿಸಲಾಗುತ್ತಿದೆ.
ಮೇಕ್ಶಿಫ್ಟ್ ಬಲ: ಜಿಲ್ಲೆಯಲ್ಲಿ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಈ ಹಿಂದೆಯೇ ಅಪೌಷ್ಟಿಕ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 250ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ಒದಗಿಸಿದ್ದು, ಪೋಷಕರಿಗೆ ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸಲಾಗಿದೆ.
ಜತೆಗೆ, 15ರಿಂದ 17 ವರ್ಷದ ಒಟ್ಟು 48,865 ಮಕ್ಕಳಿಗೆ ಜ.3ರಿಂದ ಲಸಿಕೆ ವ್ಯವಸ್ಥೆ ಒದಗಿಸಲಾಗಿದೆ. ಇದರೊಂದಿಗೆ ಓಮಿಕ್ರಾನ್ ನಿರಿಕ್ಷೆ ಮೀರಿ ತನ್ನ ವ್ಯಾಪ್ತಿ ವಿಸ್ತರಿಸಿದರೆ ಚಿಕಿತ್ಸೆಗೆ ಈಗಾಗಲೇ ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಕನೆಕ್ಟಿವಿಟಿ ವ್ಯವಸ್ಥೆಯುಳ್ಳ ಕಟ್ಟಡಗಳಿವೆ. ಜತೆಗೆ, 4 ಕಡೆ ಸಾರ್ವಜನಿಕ ಆಸ್ಪತ್ರೆಯ ವಾರ್ಡ್ಗಳು, ದೊಡ್ಡಬಳ್ಳಾಪುರದಲ್ಲಿ ಮೇಕ್ಶಿಫ್ಟ್ ಆಸ್ಪತ್ರೆಗಳಿದ್ದು ಕೊರೊನಾ ಚಿಕಿತ್ಸೆಗೆ ಎಲ್ಲವೂ ಸಿದ್ಧವಾಗಿದೆ. ಕಳೆದ ಕೊರೊನಾ ಚಿಕಿತ್ಸೆಗೆಂದು ತೆಗೆದುಕೊಳ್ಳಲಾಗಿದ್ದ ಗುತ್ತಿಗೆ ವೈದ್ಯರನ್ನು ಮುಂದುವರಿಸಲಾಗಿದ್ದು, 3ನೇ ಅಲೆ ಆರಂಭವಾದರೆ ಸಿಬ್ಬಂದಿ ಕೊರತೆಯೂ ಇರುವುದಿಲ್ಲ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಪ್ರಮುಖಾಂಶಗಳು
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.30, ಡಿ.31, ಜ.1ರಂದು ತಲಾ 9 ಪ್ರಕರಣಗಳು ವರದಿಯಾಗಿವೆ.
- ಉಳಿದಂತೆ ಜಿಲ್ಲೆಯಲ್ಲಿ ಡಿ. 29ರಂದು 3, ಡಿ.30ರಂದು 4, ಡಿ. 31ರಂದು 5 ಪ್ರಕರಣಗಳು ಪತ್ತೆಯಾಗಿವೆ.
- ಈವರೆಗೆ ಜಿಲ್ಲೆಯಲ್ಲಿ 62,158 ಪ್ರಕರಣಗಳು ವರದಿಯಾಗಿದ್ದು, 61,229 ಮಂದಿ ಗುಣಮುಖರಾಗಿದ್ದಾರೆ.
- ಈವರೆಗೆ 892 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ 5 ಮಂದಿ ಸಕ್ರಿಯ ಚಿಕಿತ್ಸೆಯಲ್ಲಿದ್ದಾರೆ.
- 4 ತಾಲೂಕುಗಳಲ್ಲಿ ಒಟ್ಟು 63 ಮಂದಿ ಮನೆಗಳಲ್ಲಿ ಕ್ವಾರಂಟೈನ್ನಲ್ಲಿದ್ದು, 7ಮಂದಿ ಕ್ವಾರಂಟೈನ್ ಸೆಂಟರ್ನಲ್ಲಿದ್ದಾರೆ.
ಲಸಿಕೆ ಪಡೆದವರ ವಿವರ
1ನೇ ಡೋಸ್ ; 7,73,084
2ನೇ ಡೋಸ್ ; 6,85,479
ಜಿಲ್ಲೆಯಲ್ಲಿ 3 ಅಲೆ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, 600 ಆಕ್ಸಿಜನ್ ಕಾನ್ಸಂಟ್ರೇಟರ್, 26 ವೆಂಟಿಲೇಟರ್ಗಳನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಜತೆಗೆ, ಜ.3ರಿಂದ ಮಕ್ಕಳಿಗೆ ಲಸಿಕೆಗೆ ಅಗತ್ಯ ಕ್ರಮ ವಹಿಸಲಾಗಿದೆ.
– ಡಾ.ತಿಪ್ಪೇಸ್ವಾಮಿ | ಡಿಎಚ್ಒ, ಬೆಂ.ಗ್ರಾ.