Karnataka news paper

ಎನ್‌ಜಿಒಗಳಿಗೆ ಆಘಾತ ನೀಡಿದ ಕೇಂದ್ರ ಸರ್ಕಾರ: 12 ಸಾವಿರಕ್ಕೂ ಅಧಿಕ ಸಂಸ್ಥೆಗಳ ವಿದೇಶಿ ದೇಣಿಗೆಗೆ ತಡೆ


ಹೈಲೈಟ್ಸ್‌:

  • 12,000ಕ್ಕೂ ಅಧಿಕ ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ಅವಧಿ ಅಂತ್ಯ
  • ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸದ ಸಾವಿರಾರು ಎನ್‌ಜಿಒ, ಸಂಸ್ಥೆಗಳು
  • ಬಹುತೇಕ ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ಅವಧಿ ಶುಕ್ರವಾರ ಅಂತ್ಯ
  • ಮದರ್ ತೆರೆಸಾ ಮಿಷನರೀಸ್ ಫಾರ್ ಚಾರಿಟಿ ಸಂಸ್ಥೆಯ ಖಾತೆಗಳು ನಿಷ್ಕ್ರಿಯ

ಹೊಸದಿಲ್ಲಿ: ದೇಶದ 12,000ಕ್ಕೂ ಅಧಿಕ ಎನ್‌ಜಿಒ ಮತ್ತು ಸಂಸ್ಥೆಗಳ ವಿದೇಶದಿಂದ ದೇಣಿಗೆ ಪಡೆಯಲು ಅಗತ್ಯವಿರುವ ಎಫ್‌ಸಿಆರ್‌ಎ ಪರವಾನಗಿಗಳ ಅವಧಿ ಶುಕ್ರವಾರ ರಾತ್ರಿ ಮುಗಿದು ಹೋಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಬೆಳಿಗ್ಗೆ ತಿಳಿಸಿದೆ. ಮದರ್ ತೆರೆಸಾ ಮಿಷನರೀಸ್ ಫಾರ್ ಚಾರಿಟಿ ಸಂಸ್ಥೆಯ ಅಂತಹ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ಮರುದಿನ ಅದು ಈ ಮಾಹಿತಿ ನೀಡಿದೆ.

ಅನೇಕ ಎನ್‌ಜಿಒ (NGOs) ಮತ್ತು ಸಂಸ್ಥೆಗಳು ಪರವಾನಗಿಗಳ ನವೀಕರಣಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಶುಕ್ರವಾರದ ಕೊನೆಯ ಗಡುವಿನ ದಿನಾಂಕದ ಒಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಅವುಗಳಿಗೆ ಸಚಿವಾಲಯ ಜ್ಞಾಪನಾ ಪತ್ರಗಳನ್ನು ಕಳುಹಿಸಿತ್ತು. ಆದರೆ ಬಹುತೇಕ ಸಂಸ್ಥೆಗಳು ಅರ್ಜಿ ಸಲ್ಲಿಸಿಲ್ಲ. ಹೀಗಿರುವಾಗ ಅವುಗಳಿಗೆ ಅನುಮತಿ ನೀಡಲು ಹೇಗೆ ಸಾಧ್ಯ? ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ವಿದೇಶಿ ದೇಣಿಗೆ ಪಡೆಯಲು ಎನ್‌ಜಿಒಗಳಿಗೆ ಎಸ್‌ಬಿಐ ಖಾತೆ ಕಡ್ಡಾಯ
ಆಕ್ಸ್‌ಫಾಮ್ ಇಂಡಿಯಾ ಟ್ರಸ್ಟ್‌, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಲೆಪ್ರೊಸಿ ಮಿಷನ್ ಸೇರಿದಂತೆ 12 ಸಾವಿರಕ್ಕೂ ಅಧಿಕ ಎನ್‌ಜಿಒಗಳ ಪರವಾನಗಿಗಳು ಕಳೆದ ಕೆಲವು ತಿಂಗಳಲ್ಲಿ ಅವಧಿ ಮುಗಿದಿದ್ದು, ಅವುಗಳ FCRA ಪರವಾನಗಿಗಳು ಶುಕ್ರವಾರಕ್ಕೆ ಅಂತ್ಯಗೊಂಡಿವೆ.

ಈ ಮೇಲಿನ ಸಂಸ್ಥೆಗಳಲ್ಲದೆ, ಟ್ಯುಬರ್‌ಕ್ಯುಲೋಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್‌ ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ ಸೇರಿದಂತೆ ಬೃಹತ್ ಸಂಖ್ಯೆಯ ಎನ್‌ಜಿಒಗಳು ಈ ಪಟ್ಟಿಯಲ್ಲಿವೆ.

ಭಾರತದಲ್ಲಿ 16,829 ಎನ್‌ಜಿಒಗಳು ಮಾತ್ರ ಈಗಲೂ ಎಫ್‌ಸಿಆರ್‌ಎ ಪರವಾನಗಿ ಹೊಂದಿವೆ. ಈ ಪರವಾನಗಿಗಳು ಶುಕ್ರವಾರ ನವೀಕರಣಗೊಂಡಿದ್ದು, 2022ರ ಮಾರ್ಚ್ 31ರವರೆಗೆ ಮಾನ್ಯತೆ ಪಡೆದಿವೆ ಅಥವಾ ಅವುಗಳ ನವೀಕರಣ ಅರ್ಜಿಗಳು ನಿರ್ಧಾರವಾಗುವವರೆಗೂ ಮುಂದುವರಿಯಲಿವೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮನವಿ ತಿರಸ್ಕರಿಸಿದ ಆರ್‌ಬಿಐ: ನಿಯಮ ಸಡಿಲಿಕೆ ಆಗದು!
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿ 22,762 ಎನ್‌ಜಿಒಗಳು ನೋಂದಣಿಯಾಗಿವೆ. ಅವು ವಿದೇಶಿ ದೇಣಿಗೆಯನ್ನು ಪಡೆಯಬೇಕೆಂದರೆ ಪರವಾನಗಿಯನ್ನು ಹೊಂದಿರಲೇಬೇಕು. ದೇಶಾದ್ಯಂತ ಬಡವರು, ರೋಗಿಗಳು ಮತ್ತು ನಿರ್ಗತಿಕರಿಗೆ ಅನಾಥಾಲಯ ಮತ್ತು ಆಶ್ರಮಗಳನ್ನು ನಿರ್ವಹಿಸುತ್ತಿರುವ ಮಿಷನರೀಸ್ ಆಫ್ ಚಾರಿಟಿಯ 250ಕ್ಕೂ ಅಧಿಕ ಖಾತೆಗಳಿಗೆ ವಿದೇಶಿ ಅನುದಾನ ಸಿಗದಂತೆ ಎಫ್‌ಸಿಆರ್‌ಎ ಪರವಾನಗಿಯನ್ನು ನವೀಕರಿಸದೆ ಇರಲು ‘ಪ್ರತಿಕೂಲ ಮಾಹಿತಿಗಳು’ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮಿಷನರೀಸ್ ಆಫ್ ಚಾರಿಟಿ ನಡೆಸುತ್ತಿರುವ ಮಕ್ಕಳ ಆಶ್ರಮವು ಬಾಲಕಿಯರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಗುಜರಾತ್‌ನಲ್ಲಿ ಆಶ್ರಮದ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ತನ್ನ ನಿರ್ಧಾರವನ್ನು ಮರು ಪರಾಮರ್ಶೆ ಮಾಡುವಂತೆ ಯಾವುದೇ ಕೋರಿಕೆ ಬಂದಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

‘ಈ ವಿಚಾರ ಬಗೆಹರಿಯುವವರೆಗೂ ಯಾವುದೇ ವಿದೇಶಿ ದೇಣಿಗೆ ಖಾತೆಗಳ ಕಾರ್ಯಾಚರಣೆ ನಡೆಸಬಾರದು ಎಂದು ನಮ್ಮ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮದರ್ ತೆರೆಸಾ ಚಾರಿಟಿ, ತನ್ನ ನವೀಕರಣ ಅರ್ಜಿ ತಿರಸ್ಕೃತವಾಗಿರುವುದನ್ನು ಖಚಿತಪಡಿಸಿದೆ.

ಚಾರಿಟೇಬಲ್ ಗ್ರೂಪ್‌ನ ಕೋಲ್ಕತಾ ಕೇಂದ್ರ ಕಚೇರಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರ ಬಳಿಕ ವಿವಾದ ಸೃಷ್ಟಿಯಾಗಿತ್ತು. ಕ್ರಿಸ್‌ಮಸ್‌ ದಿನದಂದೇ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದರ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಸರ್ಕಾರವನ್ನು ಟೀಕಿಸಿದ್ದರು.



Read more…