Karnataka news paper

ಆಲಮಟ್ಟಿ ಜಲಾಶಯಕ್ಕೆ ನಿರಂತರ ಒಳ ಹರಿವು: ಡ್ಯಾಂ ಭರ್ತಿಗೆ 4 ಟಿಎಂಸಿ ಬಾಕಿ..


ಹೈಲೈಟ್ಸ್‌:

  • ಜಲಾಶಯದ ಮಟ್ಟಕ್ಕೆ ಗಮನಿಸಿದಾಗ ಕಳೆದ ವರ್ಷಕ್ಕಿಂತಲೂ ಉತ್ತಮವಾಗಿದೆ
  • ಏಪ್ರಿಲ್‌ ಅಂತ್ಯದವರೆಗೂ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿದರೂ ತೊಂದರೆ ಇಲ್ಲ
  • ಕೆಲ ದಿನಗಳ ಕಾಲ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇದೆ

ಮಹೇಶ ಅಡಾಳಿ
ಆಲಮಟ್ಟಿ (ವಿಜಯಪುರ):
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ನಿರಂತರ ಒಳ ಹರಿವು ಕಂಡು ಬಂದಿದೆ. ಜಲಾಶಯ ಭರ್ತಿಗೆ ಕೇವಲ 4 ಟಿಎಂಸಿ ಬಾಕಿ ಇದ್ದು ರೈತರಲ್ಲಿ ಹರ್ಷ ಮೂಡಿಸಿದೆ.

ಆಲಮಟ್ಟಿ ಜಲಾಶಯಕ್ಕೆ ಪ್ರತಿ ಬಾರಿ ನವೆಂಬರ್‌ವರೆಗೆ ಒಳ ಹರಿವು ಕಂಡು ಬರುತ್ತಿತ್ತು. ಆದರೆ ಈ ವರ್ಷ ಅಕ್ಟೋಬರ್ 22 ರಿಂದ ಒಳ ಹರಿವು ಸ್ಥಗಿತಗೊಂಡಿತ್ತು. ಅವಧಿಗೂ ಮುನ್ನವೇ ಜಲಾಶಯಕ್ಕೆ ಒಳ ಹರಿವು ಸ್ಥಗಿತಗೊಂಡಿದ್ದರಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯುವುದು ಅನುಮಾನ ಮೂಡಿಸಿತ್ತು. ಜತೆಗೆ ಕುಡಿವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆ ಇತ್ತು.

ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶ, ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಮತ್ತೆ ಒಳ ಹರಿವು ಕಂಡು ಬಂದಿದ್ದು, ಹಿಂಗಾರು ಹಂಗಾಮಿನ ಬೆಳೆಗಳಿಗೆ ಹಾಗೂ ಕುಡಿವ ನೀರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನಲಾಗುತ್ತಿದೆ.

ಕಳೆದ ವರ್ಷಕ್ಕಿಂತಲೂ ಉತ್ತಮ

ಕಳೆದ ವರ್ಷ ನವೆಂಬರ್‌ 30ರವರೆಗೂ ಜಲಾಶಯಕ್ಕೆ ನೀರು ಹರಿದು ಬಂದಿತ್ತು. ಹೀಗಾಗಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆ ಜಾಲಗಳಿಗೆ ಡಿಸೆಂಬರ್ 1 ರಿಂದ ಏಪ್ರಿಲ್ 4 ರವರೆಗೆ ನೀರು ಹರಿಸಲಾಗಿತ್ತು. ಜತೆಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಕಂಡು ಬಾರದ ಹಾಗೆ ಅಧಿಕಾರಿಗಳು ನೀರು ನಿರ್ವಹಣೆ ಮಾಡಿದ್ದರು.

ಸದ್ಯ ಜಲಾಶಯದ ಮಟ್ಟಕ್ಕೆ ಗಮನಿಸಿದಾಗ ಕಳೆದ ವರ್ಷಕ್ಕಿಂತಲೂ ಉತ್ತಮವಾಗಿದ್ದು, ಏಪ್ರಿಲ್‌ ಅಂತ್ಯದವರೆಗೂ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿದರೂ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎನ್ನಲಾಗುತ್ತಿದೆ. ನವೆಂಬರ್ 20ರಿಂದ ಆರಂಭವಾದ ಒಳ ಹರಿವು ನಿರಂತವಾಗಿ ಕಂಡು ಬಂದಿದ್ದು, ಇನ್ನೂ ಕೆಲ ದಿನಗಳ ಕಾಲ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇದೆ.

47 ಸಾವಿರ ಕ್ಯೂಸೆಕ್‌..!

ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಡಿಸೆಂಬರ್ 4 ರಂದು 47,651 ಕ್ಯುಸೆಕ್‌, 5 ರಂದು 28,797 ಕ್ಯುಸೆಕ್‌ವರೆಗೂ ನೀರು ಹರಿದು ಬಂದಿತ್ತು. ಶನಿವಾರ ಬೆಳಗ್ಗೆ 9 ಸಾವಿರ ಕ್ಯುಸೆಕ್‌ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿತ್ತು. ಹೀಗಾಗಿ ಜಲಾಶಯಕ್ಕೆ ಹೊರ ಹರಿವಿನ ಪ್ರಮಾಣಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಕೆಬಿಜೆನ್ನೆಲ್‌ ಅಧಿಕಾರಿಗಳು.

ಆಲಮಟ್ಟಿ ಡ್ಯಾಂ ಎತ್ತರಿಸುವರೇ ಕಾರಜೋಳ..? ಕೃಷ್ಣೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ..?
ಜಲಾಶಯದ ಮಟ್ಟ

ಗರಿಷ್ಠ 519.60 ಮೀಟರ್‌ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಬೆಳಗ್ಗೆ 519.33 ಮೀಟರ್‌ ಎತ್ತರದಲ್ಲಿ 118.390 ಟಿಎಂಸಿ ನೀರು ಸಂಗ್ರಹವಾಗಿತ್ತು. 9,137 ಕ್ಯುಸೆಕ್‌ ಒಳ ಹರಿವು ಇದ್ದರೆ ಆಲಮಟ್ಟಿ ಎಡದಂಡೆ ಕಾಲುವೆ 309 ಕ್ಯುಸೆಕ್‌, ಆಲಮಟ್ಟಿ ಬಲದಂಡೆ ಕಾಲುವೆ 131, ಮುಳವಾಡ ಏತ ನೀರಾವರಿ 254, ಸೊನ್ನ ರೊಳ್ಳಿ ತೆಗ್ಗಿ 39 ಹಾಗೂ ಕುಡಿವ ನೀರು, ಹಿನ್ನೀರು ಬಳಕೆಗೆ 580 ಕ್ಯುಸೆಕ್‌ ಸೇರಿ ಒಟ್ಟು 1313 ಕ್ಯುಸೆಕ್‌ ಹೊರ ಹರಿವು ಇತ್ತು.

‘ಮಾರ್ಚ್ 17 ರವರೆಗೆ ಮಾತ್ರ ನೀರು ಹರಿಸಿದರೆ ರೈತರಿಗೆ ತೊಂದರೆಯಾಗುತ್ತಿತ್ತು. ಆದರೆ ಜಲಾಶಯದ ನೀರಿನ ಮಟ್ಟ ಏರಿಕೆ ಕಂಡು ಬಂದಿದ್ದು ರೈತರಿಗೆ ಸಂತಸವಾಗಿದ್ದು, ಏಪ್ರಿಲ್‌ ಅಂತ್ಯದವರೆಗೂ ನೀರು ಹರಿಸಬಹುದಾಗಿದೆ’ ಎಂದು ಕಂದಗನೂರ ರೈತ ಶಂಕರಗೌಡ ಶಿವಣಗಿ ಅಭಿಪ್ರಾಯಪಟ್ಟಿದ್ದಾರೆ.

ಆಲಮಟ್ಟಿಯಲ್ಲಿ ಪುನರ್ವಸತಿ ಅಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ
‘ಸಕಾಲಕ್ಕೆ ಮಳೆಯಾಗಿದ್ದರಿಂದ ಒಳ ಹರಿವು ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ನೀರಿನ ಪ್ರಮಾಣ ಹೆಚ್ಚಿದೆ. ನೀರಾವರಿ ಹಾಗೂ ಕುಡಿವ ನೀರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಉಂಟಾಗುವುದಿಲ್ಲ’ ಎಂದು ಆಲಮಟ್ಟಿ ಮುಖ್ಯ ಅಭಿಯಂತರ ಎಚ್‌. ಸುರೇಶ ಮಾಹಿತಿ ನೀಡಿದ್ದಾರೆ.

‘ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ನವೆಂಬರ್ 20ರಿಂದ ಡಿಸೆಂಬರ್ 11ರವರೆಗೆ ಆಲಮಟ್ಟಿ ಜಲಾಶಯಕ್ಕೆ ಒಟ್ಟು 18.522 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ ಜಲಾಶಯದಲ್ಲಿ ಡಿಸೆಂಬರ್ 11ಕ್ಕೆ 16.446 ಟಿಎಂಸಿ ಹೆಚ್ಚುವರಿ ಸಂಗ್ರಹವಾಗಿದೆ ಎಂದು ಕೆಬಿಜೆನ್ನೆಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆಬಿಜೆಎನ್‌ಎಲ್‌ ಕಚೇರಿ ಆಲಮಟ್ಟಿಗೆ ಸ್ಥಳಾಂತರ: ಸಂತ್ರಸ್ತರಲ್ಲಿ ಸಂತಸದ ಜೊತೆಗೆ ಅನುಮಾನ..!



Read more