Karnataka news paper

ಆಸ್ತಿ ನೋಂದಣಿ: ಮಾರ್ಚ್‌ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ


ಬೆಂಗಳೂರು: ಎಲ್ಲ ವಿಧದ ಸ್ಥಿರಾಸ್ತಿಗಳ (ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲಾಟ್‌) ಮಾರಾಟ ಮತ್ತು ಖರೀದಿ ಮಾಡುವವರಿಗೆ ಜ. 1ರಿಂದ ಮಾರ್ಚ್‌ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್‌. ಅಶೋಕ, ‘ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಸಂಕಷ್ಟದಲ್ಲಿರುವವರಿಗೆ ಅನುಕೂಲ ಮಾಡಿಕೊಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ‘ ಎಂದರು.

‘ಆಯಾ ಪ್ರದೇಶದ ಮಾರ್ಗಸೂಚಿ ದರದ ಪ್ರಕಾರ ಈ ರಿಯಾಯಿತಿ ಅನ್ವಯ ಆಗಲಿದೆ. ಎಲ್ಲ ರೀತಿಯ ಆಸ್ತಿಗಳ ನೋಂದಣಿಗೆ ಈ ರಿಯಾಯಿತಿ ಅನ್ವಯ ಆಗಲಿದೆ’ ಎಂದರು.

ಕಾಂಗ್ರೆಸ್‌ ಗಿಮಿಕ್‌: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, ‘ಕಾಂಗ್ರೆಸ್ ಸರ್ಕಾರ ಆರು ವರ್ಷ ಆಡಳಿತ ಮಾಡಿದೆ. ಆಗ ಮೇಕೆದಾಟು ಯೋಜನೆಗೆ ಎಷ್ಟು ಹಣ ಮೀಸಲಿಟ್ಟಿದ್ದರು? ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಈಗ ಮಾಡಲು ಕೆಲಸ ಇಲ್ಲ. ಹೀಗಾಗಿ, ಗಿಮಿಕ್ ಮಾಡಲು ಹೊರಟಿದ್ದಾರೆ. ಇದು ಜನರಿಗೆ ಅನುಕೂಲ ಆಗುವುದಿಲ್ಲ. ಅವರ ಪಕ್ಷಕ್ಕೆ ಅನುಕೂಲ ಆಗಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಅಷ್ಟೇ. ಇಷ್ಟು ದಿನ ಏನು ಕಡಲೆಕಾಯಿ ತಿನ್ನುತ್ತಿದ್ರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.



Read more from source