Karnataka news paper

ಹೊಸ ವರ್ಷದ ಮೊದಲ ದಿನವೇ 10 ಕೋಟಿ ರೈತರ ಖಾತೆಗೆ 20,900 ಕೋಟಿ ರೂ. ಬಿಡುಗಡೆ ಮಾಡಿದ ಮೋದಿ


ಹೈಲೈಟ್ಸ್‌:

  • ಹೊಸ ವರ್ಷದ ಮೊದಲ ದಿನವೇ 10.09 ಕೋಟಿ ರೈತರ ಖಾತೆಗೆ ಹಣ
  • 20,900 ಕೋಟಿ ರೂ. ಹಣ ವರ್ಗಾವಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
  • ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 10ನೇ ಕಂತು ಪಾವತಿ
  • ಶನಿವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಹಣ ವರ್ಗಾವಣೆ

ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ 10.09 ಕೋಟಿ ರೈತರ ಖಾತೆಗೆ 20,900 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 10ನೇ ಕಂತನ್ನು ಕೇಂದ್ರ ಸರಕಾರ ರೈತರ ಖಾತೆಗೆ ಪಾವತಿ ಮಾಡಿದೆ.

ಶನಿವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ವರ್ಗಾವಣೆ ಮಾಡಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ (ಪಿಎಂ – ಕಿಸಾನ್‌) ಪ್ರತಿ ವರ್ಷ ಅರ್ಹ ರೈತರ ಖಾತೆಗೆ 6,000 ರೂ. ನಗದು ಪಾವತಿ ಮಾಡಲಾಗುತ್ತದೆ. ಮೂರು ಕಂತುಗಳಲ್ಲಿ ತಲಾ 2,000 ರೂ.ನಂತೆ ಹಣ ಪಾವತಿ ಮಾಡಲಾಗುತ್ತದೆ. ನೇರವಾಗಿ ರೈತರ ಖಾತೆಗೆ ಹಣ ಪಾವತಿ ಮಾಡುವುದು ಈ ಯೋಜನೆಯ ವಿಶೇಷ.

ಕಿಸಾನ್‌ ಸಮ್ಮಾನ್‌: ರಾಜ್ಯ ಸರಕಾರದ 3 ಕಂತು ಬಾಕಿ, ರೈತರಿಗೆ ಪಾವತಿಯಾಗಬೇಕಿದೆ 2,860 ಕೋಟಿ ರೂ.!
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ 351 ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳಿಗೆ ಈಕ್ವಿಟಿ ಅನುದಾನವಾಗಿ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಇದರಿಂದ 1.24 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ಈ ವರ್ಚುವಲ್‌ ಕಾರ್ಯಕ್ರಮದಲ್ಲಿ 9 ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ರಾಜ್ಯಗಳ ಸಚಿವರು, ಕೃಷಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪಿಎಂ ಕಿಸಾನ್‌ 10ನೇ ಕಂತಿನ ಹಣ ಶೀಘ್ರ ಬಿಡುಗಡೆ, ಆಧಾರ್‌ ಲಿಂಕ್‌ ಮಾಡಲು ಹೀಗೆ ಮಾಡಿ
ಈ ಸಂದರ್ಭದಲ್ಲಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, 2022ರ ಹೊಸ ವರ್ಷದ ಮೊದಲ ದಿನದಂದು ಸುಮಾರು 10.09 ಕೋಟಿ ಫಲಾನುಭವಿಗಳಿಗೆ ಸುಮಾರು 20,900 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ ಪಿಎಂ-ಕಿಸಾನ್‌ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ 2021ರ ಆಗಸ್ಟ್‌ನಲ್ಲಿ ಪಿಎಂ-ಕಿಸಾನ್‌ ಯೋಜನೆಯಡಿ 9ನೇ ಕಂತನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಸುಮಾರು ನಾಲ್ಕು ತಿಂಗಳ ನಂತರ 10ನೇ ಕಂತನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಕಂತಿನ ಬಿಡುಗಡೆಯೊಂದಿಗೆ ಯೋಜನೆಯಡಿ ಬಿಡುಗಡೆ ಮಾಡಲಾದ ಒಟ್ಟು ಮೊತ್ತವು ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ. 2019ರ ಫೆಬ್ರವರಿಯಲ್ಲಿ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಯೋಜನೆಯನ್ನು ಘೋಷಿಸಲಾಗಿತ್ತು.



Read more