Karnataka news paper

ಅಭಯಾರಣ್ಯವಾಸಿಗಳ ಸ್ಥಳಾಂತರಕ್ಕೂ ಪರಿಹಾರ; ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿರುವ ಅರಣ್ಯ ಇಲಾಖೆ!


ಗುರುದತ್ತ ಭಟ್‌ ಬೆಳಗಾವಿ
ಬೆಳಗಾವಿ: ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನಿವಾಸಿಗಳು ಸ್ವಪ್ರೇರಣೆಯಿಂದ ಸ್ಥಳಾಂತರಗೊಳ್ಳಲು ಇರುವ 15 ಲಕ್ಷ ರೂ.ಗಳ ಪರಿಹಾರದ ಯೋಜನೆಯನ್ನು ಇತರ ಅಭಯಾರಣ್ಯಗಳ ನಿವಾಸಿಗಳ ಸ್ಥಳಾಂತರಕ್ಕೂ ವಿಸ್ತರಿಸಬೇಕು ಎಂಬ ಪ್ರಸ್ತಾವವೀಗ ಸರಕಾರದ ಮುಂದಿದ್ದು, ಕಾರ್ಯರೂಪಕ್ಕೆ ಬಂದರೆ ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ಫೆ.2008 ರ ಮಾರ್ಗಸೂಚಿ ಅನ್ವಯ, ಹುಲಿ ಸಂರಕ್ಷಿತ ಕೋರ್‌, ಕ್ರಿಟಿಕಲ್‌ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕುಟುಂಬಗಳು ಸ್ವಯಂ ಪ್ರೇರಿತರಾಗಿ ಪುನರ್ವಸತಿಗೊಳ್ಳಲು ಬಯಸಿದರೆ ಮೊದಲು 10 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. 2021ರ ಏಪ್ರಿಲ್‌ನಲ್ಲಿ ಆದೇಶ ಪರಿಷ್ಕರಿಸಿ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಆದರೆ ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವ ವನ್ಯಪ್ರಭೇದಗಳನ್ನು ಹೊಂದಿರುವ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳು ಇನ್ನೂ ಹಲವಾರಿವೆ. ಈ ಪ್ರದೇಶಗಳಲ್ಲಿಯೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ನಿಯಮಗಳು ಅಡ್ಡಿಯಾಗುತ್ತಿವೆ. ಇಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಮೂಲ ಸೌಕರ್ಯಗಳ ಕೊರತೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಪುನರ್ವಸತಿಗೊಳ್ಳಲು ಸಿದ್ಧರಿದ್ದಾರೆ. ಸೂಕ್ತ ಪುನರ್ವಸತಿ ಪ್ಯಾಕೇಜ್‌ ಕೊರತೆಯಿಂದ ಇಂತಹ ಪ್ರದೇಶಗಳಲ್ಲಿಪುನರ್ವಸತಿ ಯೋಜನೆ ಯಾವುದೇ ಪ್ರಗತಿ ಕಾಣುತ್ತಿಲ್ಲ.
ದುಬಾರೆಯಲ್ಲಿ ದೋಣಿಗಳೇ ಸಿಗದೆ ಪ್ರವಾಸಿಗರ ಗೋಳು: ಆನೆ ಶಿಬಿರಕ್ಕೆ ಹೋಗಲು ಹರಸಾಹಸ..!
ಈ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತ ಹೆಚ್ಚಳ ಯೋಜನೆಯನ್ನು ಎಲ್ಲ ಅರಣ್ಯ ಪ್ರದೇಶಗಳ ನಿವಾಸಿಗಳಿಗೂ ವಿಸ್ತರಿಸುವಂತೆ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ರಾಜ್ಯ ಅರಣ್ಯ ಸಚಿವ ಉಮೇಶ್‌ ಕತ್ತಿ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಮನವಿ ಮಾಡಿದ್ದರು. ಬಳಿಕ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ (ಪಿಸಿಸಿಎಫ್‌ ವೈಲ್ಡ್‌ ಲೈಫ್‌ ) ವಿಜಯಕುಮಾರ್‌ ಗೋಗಿ ಅವರು ಈ ಕುರಿತು ವಿಸ್ತೃತ ವರದಿಯೊಂದಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಸ್ಥಳಾಂತರಕ್ಕೆ ಸಿದ್ಧ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ವ್ಯಾಪ್ತಿಯಲ್ಲಿ ಹದಿಮೂರು ಗ್ರಾಮಗಳಿವೆ. ಇಲ್ಲಿನ ತಳೇವಾಡಿ ಸೇರಿದಂತೆ ಕೆಲ ಗ್ರಾಮಗಳ ಜನ ಸೂಕ್ತ ಪುನರ್ವಸತಿ ಪ್ಯಾಕೇಜ್‌ ನೀಡಿ ತಮ್ಮನ್ನು ಅಭಯಾರಣ್ಯದ ಹೊರಗೆ ಸ್ಥಳಾಂತರಿಸುವಂತೆ ಎಂಟು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ವ್ಯಾಪ್ತಿಯ ಅಭಯಾರಣ್ಯದ ಕೆಲ ಗ್ರಾಮಸ್ಥರೂ ಸೂಕ್ತ ಪುನರ್‌ವಸತಿಗಾಗಿ ಅರಣ್ಯ ಇಲಾಖೆಯ ಕಚೇರಿಗಳನ್ನು ಎಡತಾಕುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಪರಿಹಾರ ಹೆಚ್ಚಳ ಮಾಡಿದ ಮಾದರಿಯನ್ನೇ ಇತರ ಅರಣ್ಯ ಪ್ರದೇಶಗಳ ಜನರ ಪುನರ್‌ವಸತಿಗೂ ಅನುಸರಿಸಿದರೆ ನನೆಗುದಿಗೆ ಬಿದ್ದಿರುವ ಯೋಜನೆ ಚುರುಕು ಪಡೆಯುವ ಆಶಯ ವ್ಯಕ್ತವಾಗಿದೆ.
ಮಲೆನಾಡಲ್ಲಿ ಭೂ ವಿವಾದದ ಬಿಕ್ಕಟ್ಟು; ಅಧಿಸೂಚಿತ ಅರಣ್ಯದಲ್ಲಿ ಭೂ ಮಂಜೂರು, ಪತ್ತೆಗೆ ಮುಂದಾದ ಅರಣ್ಯ ಇಲಾಖೆ!
ಅನುದಾನವಿದೆ
‘ಕಾಂಪಾ’ (ಕಾಂಪನ್ಸೇಟರಿ ಅಫಾರೆಸ್ಟೇಶನ್‌ ಫಂಡ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಪ್ಲ್ಯಾನಿಂಗ್‌ ಅಥಾರಿಟಿ) ಎನ್‌.ಪಿ.ವಿ. ನಿಧಿಯನ್ನು ಸಂರಕ್ಷಿತ ಅರಣ್ಯ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ಜನರ ಪುನರ್ವಸತಿಗೆ ವಿನಿಯೋಗಿಸಲು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ 2010ರ ಮಾರ್ಚ್ 18ರಂದು ಮಾರ್ಗಸೂಚಿ ಹೊರಡಿಸಿದೆ. ಹಾಗಾಗಿ ಈ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಪುನರ್ವಸತಿ ಯೋಜನೆಗೆ ಬಳಸಬಹುದು ಎಂಬುದು ಪರಿಸರವಾದಿಗಳ ಅಭಿಪ್ರಾಯ.

ಹುಲಿ ಸಂರಕ್ಷಿತ ಪ್ರದೇಶಗಳ ನಿವಾಸಿಗಳ ಪುನರ್ವಸತಿಗೆ ಪರಿಹಾರ ಧನ ಹೆಚ್ಚಿಸಿದ ಮಾದರಿಯಲ್ಲೇ ತಮಗೂ ಪರಿಹಾರ ಹೆಚ್ಚಳ ಮಾಡುವಂತೆ ಹಲವಾರು ಅಭಯಾರಣ್ಯಗಳು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ನಿವಾಸಿಗಳಿಂದ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ.
ಸಂಜಯ್‌ ಮೋಹನ್‌, ಅರಣ್ಯ ಇಲಾಖೆ ಮುಖ್ಯಸ್ಥ



Read more