Karnataka news paper

ದಲೈ ಲಾಮಾರನ್ನು ಟಿಬೆಟ್‌ನಿಂದ ಭಾರತಕ್ಕೆ ಕರೆತಂದಿದ್ದ ಭಾರತದ ಕೊನೆಯ ಯೋಧ ನಿಧನ


ಹೈಲೈಟ್ಸ್‌:

  • 1959ರ ಮಾರ್ಚ್ 31ರಂದು ಟಿಬೆಟ್‌ನಿಂದ ಭಾರತಕ್ಕೆ ಬಂದಿದ್ದ ದಲೈಲಾಮಾ
  • ತರಬೇತಿ ಮುಗಿಯುತ್ತಿದ್ದಂತೆಯೇ ಸಾಹಸಕ್ಕೆ ನಿಯೋಜನೆಗೊಂಡಿದ್ದ ನರೇನ್ ದಾಸ್
  • ದಲೈಲಾಮಾ ಅವರನ್ನು 13 ದಿನಗಳ ಚಾರಣದ ಬಳಿಕ ಭಾರತಕ್ಕೆ ಕರೆತಂದಿದ್ದ ಯೋಧರು
  • ದಲೈಲಾಮಾಗೆ ಬೆಂಗಾವಲಾಗಿದ್ದ ಆರು ಸೈನಿಕರಲ್ಲಿ ಉಳಿದಿದ್ದ ಏಕೈಕ ಯೋಧ ದಾಸ್

ಧರ್ಮಶಾಲಾ: ಟಿಬೆಟ್‌ನ ಬೌದ್ಧ ಧರ್ಮ ಗುರು ದಲೈ ಲಾಮಾ ಅವರು 1959ರಲ್ಲಿ ಟಿಬೆಟ್‌ನಿಂದ ಪರಾರಿಯಾಗಲು ಬೆಂಗಾವಲಾಗಿ ಸಹಾಯ ಮಾಡಿದ್ದ ಸಣ್ಣ ಸೇನಾ ತುಕಡಿಯ ಸದಸ್ಯರಾಗಿದ್ದ ನರೇನ್ ಚಂದ್ರ ದಾಸ್ ನಿಧನರಾಗಿದ್ದಾರೆ. 85 ವರ್ಷದ ದಾಸ್ ಅವರು, ದಲೈ ಲಾಮಾ ಅವರನ್ನು ಚೀನಾ ಆಕ್ರಮಣದಿಂದ ರಕ್ಷಿಸಿ ಭಾರತಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬಂದ ಸೇನಾ ತಂಡದಲ್ಲಿದ್ದರು. ಈ ತಂಡದಲ್ಲಿ ಬದುಕುಳಿದಿದ್ದ ಕೊನೆಯ ಸದಸ್ಯರಾಗಿದ್ದ ಅವರ ನಿಧನರೊಂದಿಗೆ, ಆ ರೋಚಕ ಘಟನೆಯ ಎಲ್ಲ ಸಾಕ್ಷಿಗಳೂ ಕಣ್ಮರೆಯಾದಂತಾಗಿದೆ.

ಚೀನಾದ ಪಡೆಗಳಿಂದ ಬಂಧನಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗ ಯುವ ಸನ್ಯಾಸಿ ದಲೈ ಲಾಮಾ ಅವರು ಭಾರತದ ಸೈನಿಕರ ಜತೆಗೆ ತಾವೂ ಸೈನಿಕನ ವೇಷ ಧರಿಸಿ ಹಿಮಾಲಯದ ಪ್ರದೇಶದಲ್ಲಿ 13 ದಿನ ಚಾರಣ ಮಾಡಿ ಭಾರತಕ್ಕೆ ಬಂದಿದ್ದರು.

ಧಾರ್ಮಿಕ ಸಹಿಷ್ಣುತೆಗೆ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದ ದಲೈ ಲಾಮಾ!

ನರೇನ್ ಚಂದ್ರ ದಾಸ್ ಅವರು ಅಸ್ಸಾಂನಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾಗಿದ್ದಾರೆ. ದಲೈ ಲಾಮಾ ಅವರನ್ನು ಕಾಪಾಡಿಕೊಂಡು ಭಾರತಕ್ಕೆ ಕರೆತರುವ ಮಹಾನ್ ಸಾಹಸದಲ್ಲಿ ಭಾಗಿಯಾಗುವಾಗ ಅವರಿಗೆ 22 ವರ್ಷ. ಅವರು ಆಗಷ್ಟೇ ಅಸ್ಸಾಂ ರೈಫಲ್ಸ್‌ನಲ್ಲಿನ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದರು. 1959ರ ಮಾರ್ಚ್ 31ರಂದು ಇತರೆ ಆರು ಮಂದಿ ಸೈನಿಕರ ಜತೆಗೆ ಅವರು ಲಾಮಾ ಅವರನ್ನು ಅರುಣಾಚಲ ಪ್ರದೇಶದ ಲುಮ್ಲಾಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದರು.

ದಲೈ ಲಾಮಾ ಅವರು ಕುದುರೆ ಮೇಲೆ ಕುಳಿತಿದ್ದರೆ, ಸೈನಿಕರು ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ಹೇಗೆ ನಡೆದುಬಂದಿದ್ದರು ಎಂಬುದನ್ನು ಸಂದರ್ಶನವೊಂದರಲ್ಲಿ ದಾಸ್ ವಿವರಿಸಿದ್ದರು. ಲಾಮಾ ಅವರ ಸುರಕ್ಷತೆಗಾಗಿ ನಿಯೋಜಿಸಿದ್ದರಿಂದ ಅವರೊಂದಿಗೆ ಮಾತನಾಡಲು ಕೂಡ ತಮ್ಮ ಗುಂಪಿಗೆ ಅನುಮತಿ ಇರಲಿಲ್ಲ ಎಂದು ನೆನಪಿಸಿಕೊಂಡಿದ್ದರು.
ದಲೈಲಾಮಾ ಜನ್ಮದಿನ ಆಚರಣೆ: ಭಾರತದ ಗಡಿಯೊಳಗೆ ನುಗ್ಗಿ ಉದ್ದಟತನ ಪ್ರದರ್ಶಿಸಿದ ಚೀನೀ ಪಡೆ!
86 ವರ್ಷದ ದಲೈ ಲಾಮಾ ಅವರು ಅಂದಿನಿಂದಲೂ ಭಾರತದಲ್ಲಿಯೇ ನೆಲೆಸಿದ್ದಾರೆ. ಲಾಮಾ ಹಾಗೂ ದಾಸ್ ಇಬ್ಬರೂ ಸುಮಾರು 60 ವರ್ಷಗಳಲ್ಲಿಯೇ ಮೊದಲ ಬಾರಿಗೆ 2017ರಲ್ಲಿ ಭೇಟಿಯಾಗಿದ್ದರು. ‘ನಿಮ್ಮ ಮುಖವನ್ನು ನೋಡಿ, ನನಗೂ ಬಹಳ ವಯಸ್ಸಾಗಿದೆ ಎನ್ನುವುದು ನನಗೆ ಈಗ ಅರ್ಥವಾಗುತ್ತಿದೆ’ ಎಂದು ದಾಸ್ ಅವರಿಗೆ ದಲೈ ಲಾಮಾ ಹೇಳಿದ್ದರು.

ಮರು ವರ್ಷ ದಾಸ್ ಅವರನ್ನು ಧರ್ಮಶಾಲಾಕ್ಕೆ ಆಹ್ವಾನಿಸಿದ್ದರು. ‘ನಾನು ನನ್ನ ಕುಟುಂಬದ ಜತೆಗೆ ಅಲ್ಲಿಗೆ ತೆರಳಿದ್ದೆ. ಅವರು ನನ್ನನ್ನು ಅಲ್ಲಿ ಅಪ್ಪಿಕೊಂಡಿದ್ದರು. ನನಗೆ ಸ್ಮರಣಿಕೆಯೊಂದನ್ನು ಕೂಡ ನೀಡಿದ್ದರು. ಆ ಭೇಟಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ದಾಸ್ ತಿಳಿಸಿದ್ದರು.



Read more