Karnataka news paper

ಬರೋಡ ಕದನ ಗೆದ್ದು ನಾಕ್‌ಔಟ್ಸ್‌ಗೆ ಹತ್ತಿರವಾದ ಕರ್ನಾಟಕ ತಂಡ!


ಹೈಲೈಟ್ಸ್‌:

  • 2021-22ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿ.
  • ಅಪಾಯಕಾರಿ ಬರೋಡ ವಿರುದ್ಧ ಜಯ ದಾಖಲಿಸಿದ ಕರ್ನಾಟಕ ತಂಡ.
  • ‘ಬಿ’ ಗುಂಪಿನ ಹಣಾಹಣಿಯಲ್ಲಿ ಮೂರನೇ ಜಯ ದಕ್ಕಿಸಿಕೊಂಡ ಮನೀಶ್ ಪಡೆ.

ತಿರುವನಂತಪುರ: ಎಚ್ಚರಿಕೆಯ ಆಟವಾಡಿದ ಕರ್ನಾಟಕ ತಂಡ ಅಪಾಯಕಾರಿ ಬರೋಡ ವಿರುದ್ಧ ವಿ ಜಯದೇವನ್‌ ನಿಯಮದನ್ವಯ 6 ವಿಕೆಟ್‌ಗಳ ಜಯ ದಾಖಲಿಸುವ ಮೂಲಕ, ಪ್ರಸಕ್ತ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನಾಕ್‌ಔಟ್ಸ್‌ ರೇಸ್‌ನಲ್ಲಿ ಜೀವಂತವಾಗಿ ಉಳಿದೆ.

ಇಲ್ಲಿನ ಗ್ರೀನ್‌ ಫೀಲ್ಡ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಮನೀಶ್ ಪಾಂಡೆ ಸಾರಥ್ಯದ ಕರ್ನಾಟಕ ತಂಡ, ಎದುರಾಳಿ ತಂಡವನ್ನು 176 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಮಾಡುವಲ್ಲಿ ಯಶಸ್ವಿಯಾಯಿತು.

ಕರ್ನಾಟಕ ತಂಡದ ಮಾಂತ್ರಿಕ ಸ್ಪಿನ್ನರ್‌ ಕೆಸಿ ಕಾರಿಯಪ್ಪ (28ಕ್ಕೆ 3) ಮತ್ತು ಯುವ ವೇಗದ ಬೌಲರ್‌ ವಾಸುಕಿ ಕೌಶಿಕ್‌ (38ಕ್ಕೆ 3) ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸುವ ಮೂಲಕ ಬಂಗಾಳ ತಂಡದ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಅವರಿಗೆ ಉತ್ತಮ ಸಾಥ್‌ ಕೊಟ್ಟ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ದುಬೇ (31ಕ್ಕೆ 2) ಎರಡು ವಿಕೆಟ್‌ ಕಿತ್ತರೆ, ಚುರುಕಿನ ಕ್ಷೇತ್ರರಕ್ಷಣೆ ಫಲವಾಗಿ ಕರ್ನಾಟಕ 2 ರನ್‌ಔಟ್‌ಗಳನ್ನು ಮಾಡಿತು.

ಬಲಿಷ್ಠ ಮುಂಬೈಗೆ ಸೋಲಿನ ಆಘಾತ ನೀಡಿದ ಕರ್ನಾಟಕ!

ಗುರಿ ಬೆನ್ನತ್ತಿದ ಕರ್ನಾಟಕ ತಂಡ ಮೋಡ ಮುಚ್ಚಿದ ವಾತಾವರಣದ ಅಡಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿತು. ಆರಂಭಿಕ ಬ್ಯಾಟ್ಸ್‌ಮನ್‌ ಆರ್‌ ಸಮರ್ಥ್ (61 ಎಸೆತಗಳಲ್ಲಿ 35 ರನ್‌) ಭದ್ರ ಅಡಿಪಾಯ ಹಾಕಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಕೆವಿ ಸಿದ್ಧಾರ್ಥ್ 78 ಎಸೆತಗಳಲ್ಲಿ ಅಜೇಯ 46 ರನ್‌ಗಳನ್ನು ಗಳಿಸಿದರು. ಅವರೊಟ್ಟಿಗೆ 5ನೇ ವಿಕೆಟ್‌ಗೆ ಜೊತೆಯಾದ ವಿಕೆಟ್‌ಕೀಪರ್‌ ಬಿಆರ್‌ ಶರತ್‌ (ಅಜೇಯ 21 ರನ್‌) ತಂಡವನ್ನು ಜಯದತ್ತ ಕೊಂಡೊಯ್ದಿದ್ದರು.

38.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 150 ರನ್‌ಗಳನ್ನು ಗಳಿಸಿದ್ದ ಕರ್ನಾಟಕ ತಂಡಕ್ಕೆ 11.2 ಓವರ್‌ಗಳಲ್ಲಿ ಕೈಲಿದ್ದ 6 ವಿಕೆಟ್‌ಗಳಿಂದ ಕೇವಲ 27 ರನ್‌ಗಳನ್ನು ಮಾತ್ರವೇ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ಭಾರಿ ಮಳೆ ಸುರಿದು ಆಟ ಮುಂದುವರಿಸಲು ಸಾಧ್ಯವಾಗದೇ ಇದ್ದ ಕಾರಣಕ್ಕೆ ವಿ ಜಯದೇವನ್‌ ಅವರ ನಿಯಮ ಬಳಕೆ ಮಾಡಿ ಕರ್ನಾಟಕ ತಂಡಕ್ಕೆ 6 ವಿಕೆಟ್‌ಗಳ ಜಯ ಘೋಷಿಸಲಾಯಿತು. ಇದು ಟೂರ್ನಿಯಲ್ಲಿ ಕರ್ನಾಟಕ್ಕೆ ಸಿಕ್ಕ 3ನೇ ಗೆಲುವಾಗಿದೆ.

‘ಸುಚಿತ್‌ ಮಿಂಚು’, ಪಾಂಡಿಚೆರಿ ತಂಡವನ್ನು 236 ರನ್‌ಗಳಿಂದ ಬಗ್ಗುಬಡಿದ ಕರ್ನಾಟಕ!

ನಾಕ್‌ಔಟ್ಸ್‌ ರೇಸ್‌ನಲ್ಲಿ ಕರ್ನಾಟಕ ತಂಡ
ಟೂರ್ನಿಯಲ್ಲಿ ‘ಬಿ’ ಗುಂಪಿನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಪಾಂಡಿಚೆರಿ ಎದುರು ಭರ್ಜರಿ ಜಯ ದಾಖಲಿಸಿ, 2ನೇ ಪಂದ್ಯದಲ್ಲಿ ತಮಿಳುನಾಡು ಎದುರು 8 ವಿಕೆಟ್‌ಗಳ ಸೋಲಿನ ಆಘಾತ ಅನುಭವಿಸಿತ್ತು. ಇದೀಗ ಹಾಲಿ ಚಾಂಪಿಯನ್ಸ್‌ ಮುಂಬೈ ಮತ್ತು ಬಲಿಷ್ಠ ಬರೋಡ ಎದುರು ಬ್ಯಾಕ್‌ ಟು ಬ್ಯಾಕ್‌ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಪ್ರಿ ಕ್ವಾರ್ಟರ್‌ಫೈನಲ್ಸ್‌ ಅರ್ಹತೆಯನ್ನು ಎದುರು ನೋಡುತ್ತಿದೆ.

ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ಕರ್ನಾಟಕ ತಂಡ ಅಪಾಯಕಾರಿ ಬಂಗಾಳ ಎದುರು ಪೈಪೋಟಿ ನಡೆಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ನಾಕ್‌ಔಟ್ಸ್‌ ಟಿಕೆಟ್‌ ಖಾತ್ರಿಯಾಗಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ಫೈನಲ್ಸ್‌ ತಲುಪಿದರೆ, 2ನೇ ಸ್ಥಾನ ಪಡೆಯುವ ತಂಡ ಪ್ರಿ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಸ್ಪರ್ಧಿಸಬೇಕಿದೆ.

122ಕ್ಕೆ ಕರ್ನಾಟಕ ಆಲ್‌ಔಟ್‌, ತಮಿಳುನಾಡು ವಿರುದ್ಧ ಹೀನಾಯ ಸೋಲು!

ಸಂಕ್ಷಿಪ್ತ ಸ್ಕೋರ್‌
ಬರೋಡ: 48.3 ಓವರ್‌ಗಳಲ್ಲಿ 176 ರನ್‌ಗಳಿಗೆ ಆಲ್‌ಔಟ್‌ (ಕೇದಾರ್‌ ದೇವಧರ್‌ 31, ಆದಿತ್ಯ ವಾಘಮೋಡೆ 27, ಕೃಣಾಲ್‌ ಪಾಂಡ್ಯ 24, ಭಾನು ಪನಿಯಾ 40, ವಾಸುಕಿ ಕೌಶಿಕ್‌ 38ಕ್ಕೆ 3, ಕೆಸಿ ಕಾರಿಯಪ್ಪ 28ಕ್ಕೆ 3, ಪ್ರವೀಣ್‌ ದುಬೇ 31ಕ್ಕೆ 2).
ಕರ್ನಾಟಕ: 38.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 150 ರನ್‌ (ಆರ್‌ ಸಮರ್ಥ್ 35, ಕೆವಿ ಸಿದ್ಧಾರ್ಥ್‌ 46*, ಮನೀಶ್ ಪಾಂಡೆ 19, ಬಿಆರ್‌ ಶರತ್‌ 21*; ಕೃಣಾಲ್‌ ಪಾಂಡ್ಯ 27ಕ್ಕೆ 1, ಕಾರ್ತಿಕ್‌ ಕಾಕ್ಡೆ 11ಕ್ಕೆ 1).



Read more