ಹೈಲೈಟ್ಸ್:
- ಕೇಂದ್ರ ಸರಕಾರವೇ ಕೃಷಿ ಕಾಯ್ದೆಯನ್ನು ವಾಪಸ್ಸು ಪಡೆದದೆ
- ರಾಜ್ಯ ಸರಕಾರ ಹಿಂಪಡೆಯಲು ಏಕೆ ಮೀನ ಮೇಷ ಏಣಿಸುತ್ತಿದೆ?
- ಸರಕಾರಕ್ಕೆ ನಾಡಿನ ರೈತರು ತಕ್ಕ ಪಾಠ ಕಲಿಸಲಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್
ಭಾನುವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರಕಾರ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ಆದರೆ ರಾಜ್ಯದಲ್ಲಿ ಅಂಗೀಕಾರಗೊಳಿಸಲಾಗಿರುವ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ರೈತರು ಒತ್ತಾಯ ಮಾಡಿದರೆ ಕಾನೂನು ಸಚಿವ ಮಾಧು ಸ್ವಾಮಿ ಅವರು ಕೇಂದ್ರ ಸರಕಾರ ವಾಪಸ್ಸು ಪಡೆದ ಮೇಲೆ ರಾಜ್ಯ ಸರಕಾರ ಪಡೆಯವುದಾಗಿ ಕಾನೂನಿನ ಪಾಠ ಹೇಳುತ್ತಿದ್ದಾರೆ. ಕೂಡಲೇ ರಾಜ್ಯದಲ್ಲಿ ಕೃಷಿ ಕಾಯ್ದೆ ಹಿಂಪಡೆಯಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಕೇಂದ್ರ ಸರಕಾರವೇ ಕೃಷಿ ಕಾಯ್ದೆಯನ್ನು ವಾಪಸ್ಸು ಪಡೆದಿರುವಾಗ ರಾಜ್ಯ ಸರಕಾರ ಹಿಂಪಡೆಯಲು ಏಕೆ ಮೀನ ಮೇಷ ಏಣಿಸುತ್ತಿದೆ? ದೇಶದ ಹಾಗೂ ನಾಡಿನ ರೈತರ ರಕ್ಷಣೆ ಕಾಪಾಡಬೇಕಿದ್ದ ಸರಕಾರಕ್ಕೆ ನಾಡಿನ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಪ್ರತಿಭಟನೆ ನಡೆಸಲು ನಮಗೆ ಪೊಲೀಸರು ಅವಕಾಶ ನೀಡದಿದ್ದರೂ ಕೂಡಾ ನಮ್ಮ ಹೋರಾಟ ನಿಲ್ಲಲ್ಲ. ಪೊಲೀಸರು ಅವರ ಕೆಲಸ ಅವರು ಮಾಡಲಿ. ಬಂಧನ ಮಾಡಿದರೂ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಸರಕಾರ ಗೌರವದಿಂದ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. ಈ ಮೂಲಕ ಸೋಮವಾರದಿಂದ ಮುಂದಿನ ಹತ್ತು ದಿನಗಳವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ರೈತ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದರು. ರೈತ ಸಂಘ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾಕಷ್ಟು ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕೈ ಜೋಡಿಸಲಿದ್ದು, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳವ ಸನ್ನಿವೇಶಗಳಿಗೆ ಈ ಅಧಿವೇಶನ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.