Karnataka news paper

ಧನುರ್ಮಾಸದ ವಿಶೇಷ ದೈವಾರಾಧನೆ: ಕರುನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಭಕ್ತ ಸಾಗರ..!


ಹೈಲೈಟ್ಸ್‌:

  • ರಾಜ್ಯದ ಪುಣ್ಯ ಕ್ಷೇತ್ರಗಳೆಲ್ಲಾ ತುಂಬಿ ತುಳುಕುತ್ತಿವೆ
  • ಕೋವಿಡ್‌-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ದೇಗುಲದ ಆಡಳಿತ ಮಂಡಳಿ ಹರಸಾಹಸ
  • ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೇವರ ದರ್ಶನಕ್ಕೆ ಕಾದಿದ್ದ ಭಕ್ತರು

ಬೆಂಗಳೂರು: ಮಾಸಗಳಲ್ಲಿಯೇ ಶ್ರೇಷ್ಠ ಮಾಸ ಧನುರ್ಮಾಸ.. ದೇವತಾರಾಧನೆಗೆ ಹೆಸರುವಾಸಿಯಾದ ಈ ಮಾಸದಲ್ಲಿ ದೇವರ ದರ್ಶನ ಪಡೆದರೆ ದೊರೆಯುವ ಫಲಗಳು ಹೆಚ್ಚು ಎಂಬ ಕಾರಣಕ್ಕೆ ದೇವಸ್ಥಾನಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ರಾಜ್ಯದ ಬಹುತೇಕ ಪುಣ್ಯ ಕ್ಷೇತ್ರಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.

ವರ್ಷಾಂತ್ಯದ ರಜೆಯ ಸಂದರ್ಭದಲ್ಲಿಯಂತೂ ಪುಣ್ಯ ಕ್ಷೇತ್ರಗಳೆಲ್ಲಾ ತುಂಬಿ ತುಳುಕುತ್ತಿದ್ದವು. ಕೋವಿಡ್‌-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ದೇಗುಲದ ಆಡಳಿತ ಮಂಡಳಿಗಳು ಹರಸಾಹಸ ಪಡಬೇಕಾಯಿತು. ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೇವರ ದರ್ಶನಕ್ಕೆ, ಸೇವೆ ಮಾಡಿಸಲು ಕಾಯುತ್ತಿದ್ದ ಭಕ್ತರೆಲ್ಲರೂ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.

ಪ್ರಸಿದ್ಧ ಕ್ಷೇತ್ರಗಳಲ್ಲಿ ರಾತ್ರಿ ವೇಳೆ ವಸತಿ ಸಿಗದೇ ದೇವಳದ ಮಂಟಪ, ಸಭಾಂಗಣ, ಬಸ್‌ ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳ ಪ್ಯಾಸೇಜ್‌, ಫುಟ್‌ಪಾತ್‌ ಹೀಗೆ ಸಿಕ್ಕ ಸಿಕ್ಕ ಜಾಗದಲ್ಲಿ ನಿದ್ರಿಸಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಧನುರ್ಮಾಸ 2020: ಶಂಖವನ್ನು ಪೂಜಿಸಿದರೆ ಸಂಪತ್ತು ನಿಶ್ಚಿತ..! ಶಂಖದ ಪ್ರಯೋಜನ ಗೊತ್ತೇ..?
ಎಲ್ಲೆಲ್ಲಿ ಜನಜಂಗುಳಿ: ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಭೇಟಿ ನೀಡುತ್ತಿದ್ದಾರೆ. ವಿಪರೀತ ಬಿಸಿಲು ಮತ್ತು ಸೆಕೆ ವಾತಾವರಣದಲ್ಲೂ ಭಕ್ತಾದಿಗಳು ರಥ ಬೀದಿಯಿಂದಲೇ ಸಾಲು ನಿಂತು ದೇವರ ದರುಶನ ಪಡೆಯುತ್ತಿದ್ದು, ಭಕ್ತರು ಮಹಾಪೂಜೆ, ಶೇಷ ಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಮತ್ತಿತರ ಸೇವೆಗಳನ್ನು ಪೂರೈಸಿ ಭೋಜನ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಪ್ರತಿ ದಿನ ಕನಿಷ್ಠ 5 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶ್ರೀ ಮಂಜುನಾಥನ ದರ್ಶನಕ್ಕೆ ಉದ್ದುದ್ದ ಕ್ಯೂ ಸಾಮಾನ್ಯವಾಗಿದೆ. ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದೆ.

ಧನುರ್ಮಾಸದಲ್ಲಿ ಪಠಿಸಬೇಕಾದ ವಿಷ್ಣು, ಕೃಷ್ಣ ಮತ್ತು ಸೂರ್ಯ ಮಂತ್ರಗಳಿವು..! ನಿತ್ಯವೂ ಪಠಿಸಿ..
ಶ್ರೀ ಕ್ಷೇತ್ರ ಶೃಂಗೇರಿಗೂ ಭಕ್ತರ ದಂಡು ಹರಿದು ಬರುತ್ತಿದೆ. ಶೃಂಗೇರಿಯ ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನದ ಸಾಲು ಹಾಗೂ ಶ್ರೀಮಠದ ಎದುರು ಭಕ್ತಾದಿಗಳ ಸಾಲು ಕಂಡು ಬಂದಿದೆ. ಪಟ್ಟಣದ ವಸತಿ ಗೃಹಗಳು, ಹೋಂ ಸ್ಟೇಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಹೊಂಸ್ಟೇಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಶ್ರೀಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಸಾವಿರಾರು ಜನರು ಊಟಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ 2 ಲಸಿಕೆ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಜಗದ್ಗುರುಗಳು ವಾಸ್ತವ್ಯ ಇರುವ ಗುರುಭವನಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಗುರುದರ್ಶನ ಬೆಳಗ್ಗೆ 11ರಿಂದ ಮಧ್ಯಾಹ್ನದವರೆಗೆ ಮಾತ್ರ ಇದೆ. ಶ್ರೀಮಠದ ಎದುರಿನ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಕ್ಕಳ ಅಕ್ಷರಾಭ್ಯಾಸವೂ ನಡೆಯುತ್ತಿದ್ದು, ನೂರಾರು ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಕ್ಷೇತ್ರಗಳಾದ ಬಾದಾಮಿಯ ಬನಶಂಕರಿ ದೇಗುಲ, ಬೆಳಗಾವಿ ಜಿಲ್ಲೆ ಸವದತ್ತಿಯ ಎಲ್ಲಮ್ಮ ದೇಗುಲ ಭಕ್ತರಿಂದ ತುಂಬಿ ಹೋಗಿವೆ. ಹಂಪೆಯ ವೀರೂಪಾಕ್ಷನ ದರ್ಶನಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವಸತಿ ಗೃಹ, ಹೋಟೆಲ್‌, ರೆಸಾರ್ಟ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ.

ಭಗವಾನ್‌ ವಿಷ್ಣು ಮತ್ತು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಲು ಧನುರ್ಮಾಸದಲ್ಲಿ ಹೀಗೆ ಮಾಡಿ..!



Read more