ಹೈಲೈಟ್ಸ್:
- ಶುಕ್ರವಾರ ಕರ್ನಾಟಕ ಬಂದ್ ಇಲ್ಲ
- ತಮ್ಮ ನಿರ್ಧಾರ ಬದಲಿಸಿದ ಕನ್ನಡಪರ ಸಂಘಟನೆಗಳು
- ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಆಗ್ರಹಿಸಿ ಬಂದ್ಗೆ ಕರೆ ನೀಡಲಾಗಿತ್ತು
ವಾಟಾಳ್ ನಾಗರಾಜ್ ಅವರು ಸಿಎಂ ಭೇಟಿ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಎಂಇಎಸ್ ಬ್ಯಾನ್ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಸಿಎಂ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಅನ್ನು ವಾಪಸ್ ಪಡೆಯಲಾಗುತ್ತಿದೆ. ಆದರೆ, ಎಂಇಎಸ್ ಬ್ಯಾನ್ ಮಾಡಲೇಬೇಕೆಂದು ಒತ್ತಾಯಿಸಿದ್ದು, ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಬಂದ್ನಿಂದ ಹಿಂದೆ ಸರಿದಿದ್ದೇವೆ. ಎಂಇಎಸ್ ಬ್ಯಾನ್ ಮಾಡಲು ಯಾವುದೇ ಗಡುವು ನೀಡಲಾಗಿಲ್ಲ. ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಬಂದ್ ಆಚರಿಸುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.
ನನ್ನ ಮನವಿಯನ್ನು ಮನ್ನಿಸಿ ಹೋರಾಟಗಾರರು ಬಂದ್ ಅನ್ನು ವಾಪಸ್ ಪಡೆದಿದ್ದಾರೆ. ಬಂದ್ ವಾಪಸ್ ಪಡೆದ ಹೋರಾಟಗಾರರಿಗೆ ಧನ್ಯವಾದಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿರುವುದು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಬಸವೇಶ್ವರರ ಭಾವಚಿತ್ರಕ್ಕೆ ಸಗಣಿ ಬಳಿದಿರುವುದನ್ನು ಖಂಡಿಸಿ ಬಂದ್ ಕರೆ ನೀಡಲಾಗಿತ್ತು.
ಆದರೆ, ಜನರು ಸಂಕಷ್ಟದಲ್ಲಿರುವುದರಿಂದ ಕರ್ನಾಟಕ ಬಂದ್ ಕೈಬಿಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಕನ್ನಡಪರ ಸಂಘಟನೆಗಳಿಗೆ ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಬಂದ್ ಅನ್ನು ವಾಪಸ್ ಪಡೆದಿವೆ.