Karnataka news paper

ವಿವಾಹ ವಯಸ್ಸಿನ ಮಿತಿ ಏರಿಕೆ: ಹೆಣ್ಣುಮಕ್ಕಳ ಮದುವೆಗೆ ಕುಟುಂಬಗಳ ಅವಸರ


ಹೈಲೈಟ್ಸ್‌:

  • ಹೆಣ್ಣುಮಕ್ಕಳ ಮದುವೆ ವಯಸ್ಸಿನ ಕನಿಷ್ಠ ಮಿತಿ 18 ರಿಂದ 21ಕ್ಕೆ ಏರಿಕೆ
  • ಹೈದರಾಬಾದ್‌ನ ಮಸೀದಿಗಳಲ್ಲಿ ಮದುವೆ ಕಾರ್ಯ ಮುಗಿಸಲು ಆತುರ
  • ಕೈಯಲ್ಲಿ ಹಣವಿಲ್ಲದೆ ಇದ್ದರೂ ತಡವಾಗಿ ಬಳವಳಿ ನೀಡುವ ಭರವಸೆ
  • ಎರಡು ವರ್ಷಗಳ ಬಳಿಕ ಮಾಡಬೇಕಿದ್ದ ಮದುವೆಗಳಿಗೂ ತರಾತುರಿ

ಹೈದರಾಬಾದ್: ಹೆಣ್ಣುಮಕ್ಕಳ ಮದುವೆ ವಯಸ್ಸಿನ ಕನಿಷ್ಠ ಮಿತಿಯನ್ನು 18 ರಿಂದ 21 ವರ್ಷಗಳಿಗೆ ಏರಿಸುವ ಬಾಲ್ಯ ವಿವಾಹ (ತಿದ್ದುಪಡಿ) ನಿಷೇಧ ಮಸೂದೆ, 2021, ಕಾನೂನಾಗಿ ರೂಪುಗೊಂಡು ಅಧಿಕೃತವಾಗಿ ಜಾರಿಗೊಳ್ಳುವ ಭಯದಿಂದ ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಮದುವೆಗೆ ತರಾತುರಿ ನಡೆಸುತ್ತಿವೆ. ಹೈದರಾಬಾದ್ ಹಳೆ ನಗರದ ಮಸೀದಿಗಳು ಸಾಲು ಸಾಲು ಮದುವೆ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿವೆ.

18 ರಿಂದ 20 ವರ್ಷ ವಯಸ್ಸಿನ ಹೆಣ್ಣುಮಕ್ಕಳ ಮದುವೆಗಳನ್ನು ಅವಸರದಲ್ಲಿ ಮಾಡಲು ಮುಂದಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು 2022- 23ರಲ್ಲಿ ಮದುವೆಯಾಗಬೇಕಿದ್ದವರು. ಆದರೆ ಒಂದು ವೇಳೆ ಕಾಯ್ದೆಯ ಜಾರಿಯಾದರೆ ಇನ್ನೂ ಎರಡು ಮೂರು ವರ್ಷ ಕಾಯಬೇಕಾಗುತ್ತದೆ. ಹೀಗಾಗಿ ಕುಟುಂಬಗಳು ಮದುವೆ ಕಾರ್ಯ ಮುಗಿಸಿಬಿಡಲು ಆತುರ ತೋರಿಸುತ್ತಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
18 ವರ್ಷಕ್ಕೆ ಪ್ರಧಾನಿಯನ್ನೇ ಆಯ್ಕೆ ಮಾಡಬಹುದಾದರೆ, ಸಂಗಾತಿ ಆಯ್ಕೆ ಏಕೆ ಸಾಧ್ಯವಿಲ್ಲ: ಓವೈಸಿ ಪ್ರಶ್ನೆ
ಈ ಮಸೂದೆಯು ದೇಶದ ಎಲ್ಲ ಸಮುದಾಯಗಳಿಗೂ ಅನ್ವಯವಾಗುತ್ತದೆ. ಮಹಿಳೆಯರ ಮದುವೆಯ ವಯಸ್ಸಿನ ಕನಿಷ್ಠ ಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ ಕೇಂದ್ರ ಸರ್ಕಾರದ ನಡೆ ಸಾಕಷ್ಟು ಪರ- ವಿರೋಧದ ಚರ್ಚೆಗಳಿಗೆ ಗ್ರಾಸವಾಗಿದೆ.

‘ನನಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಒಬ್ಬಾಕೆ ವಿಶೇಷಚೇತನಳು. ಈ ಮೂವರಲ್ಲಿ ಒಬ್ಬರಿಗಾದರೂ ಮದುವೆಯಾಗಬೇಕೆಂದರೆ ನಾನು ಇನ್ನೂ ಎರಡು ವರ್ಷ ಹೇಗೆ ಕಾಯುವುದು?’ ಎಂದು ಸ್ಥಳೀಯ ಮಸೀದಿಯಲ್ಲಿ ಮದುವೆಯಾದ 19 ವರ್ಷದ ಯುವತಿಯೊಬ್ಬಳ ತಾಯಿ ಸಮರುನ್ನೀಸಾ ಪ್ರಶ್ನಿಸಿದರು.

‘ಆಕೆಯ ತಂದೆ ಇತ್ತೀಚೆಗಷ್ಟೇ ಕೆಲಸ ಹುಡುಕಿಕೊಂಡು ಶ್ರೀಲಂಕಾಕ್ಕೆ ತೆರಳಿದ್ದಾರೆ. ಅವಳಿಗೆ 2022ರ ಮಧ್ಯಭಾಗದಲ್ಲಿ ಮದುವೆ ಮಾಡಬೇಕು ಎಂದು ಯೋಚಿಸಿದ್ದೆವು. ಮದುವೆಗಾಗಿ ಒಂದಷ್ಟು ಹಣ ಸಂಗ್ರಹಿಸಿ ಅವರು ಮರಳುತ್ತಾರೆ ಎಂದು ಭರವಸೆ ಹೊಂದಿದ್ದೆವು. ಆದರೆ ಮಸೂದೆಯ ಬಗ್ಗೆ ನಮಗೆ ಗೊತ್ತಾಯಿತು. ಹೀಗಾಗಿ ಹಣವಿಲ್ಲದೆಯೂ ಹೇಗೋ ಅವಳ ಮದುವೆ ಮಾಡಿ ಮುಗಿಸಬೇಕೆಂದು ನಿರ್ಧರಿಸಿದೆವು’ ಎಂದು ವಿವರಿಸಿದರು.
ಮಹಿಳೆಯರ ವಿವಾಹ ವಯಸ್ಸು ಹೆಚ್ಚಿಸುವ ಮಸೂದೆಗೆ ಲೋಕಸಭೆಯಲ್ಲಿ ಕೋಲಾಹಲ
ಇದೇ ರೀತಿ ಹತ್ತಾರು ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಮದುವೆಯನ್ನು ಯೋಜಿಸಿದ್ದ ದಿನಾಂಕಕ್ಕೂ ಮೊದಲೇ ಮುಗಿಸಲು ಮುಂದಾಗಿವೆ. ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟವಿದ್ದರೂ, ಮದುವೆ ಕಾರ್ಯ ಮುಗಿಸದಿದ್ದರೆ ಇನ್ನೂ ಸಂಕಷ್ಟ ಬರಲಿದೆ ಎಂಬ ಭಯದಿಂದ ಸರಳ ಸಮಾರಂಭಗಳನ್ನು ಆಯೋಜಿಸುತ್ತಿದ್ದಾರೆ.

‘ನಮ್ಮಲ್ಲಿ ಹೆಣ್ಣುಮಕ್ಕಳ ಜತೆಗೆ ಆಕೆಯ ಅತ್ತೆ ಮಾವನ ಮನೆಗೆ ಪೀಠೋಪಕರಣಗಳು, ಒಡವೆ, ಬಟ್ಟೆ ಮತ್ತು ನಗದು ಹಣವನ್ನು ಕಳುಹಿಸುವುದು ಕಡ್ಡಾಯ. ಆದರೆ ಈಗ ಕುಟುಂಬಕ್ಕೆ ಒಂದು ಹೊತ್ತಿನ ಊಟ ಹೊಂದಿಸುವುದೂ ಕಷ್ಟವಿದೆ’ ಎಂದು 2020ರ ಲಾಕ್‌ಡೌನ್ ಬಳಿಕ ಚಾಲಕನ ಕೆಲಸ ಕಳೆದುಕೊಂಡ ರೆಹಮತ್ ಅಲಿ ಹೇಳಿದರು. ‘ಹೀಗಾಗಿ ನಾವು ಡಿ. 26ರಂದೇ ನಿಕಾ ಮುಗಿಸಿದ್ದೇವೆ. ವಿದಾಯಿ (ವರದಕ್ಷಿಣೆ) ಸಲ್ಲಿಸಲು ನಾಲ್ಕರಿಂದ ಐದು ತಿಂಗಳು ಕಾಲಾವಕಾಶ ಕೋರಿದ್ದೇವೆ’ ಎಂದು ಐವರು ಹೆಣ್ಣುಮಕ್ಕಳ ತಂದೆ 50 ವರ್ಷದ ಅಲಿ ತಿಳಿಸಿದರು.
ವಧು ವಯಸ್ಸು ಏರಿಕೆಗೆ ಆಕ್ಷೇಪ: ಮದುವೆಗೆ 21 ಅಲ್ಲ, 18ರಿಂದ 16ಕ್ಕೆ ಇಳಿಸಲು ಆದಿವಾಸಿಗಳ ಆಗ್ರಹ!
ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ‘ಶಾದಿ ಮುಬಾರಕ್’ ಯೋಜನೆಯಡಿ ಅನೇಕರು ಮದುವೆ ಕಾರ್ಯ ಮುಗಿಸಿದ್ದಾರೆ. ನಿಕಾ ಮಾಡಲು ಬಯಸುವ ಪೋಷಕರು ಕೂಡಲೇ ಯೋಜನೆಗೆ ಅರ್ಜಿ ಸಲ್ಲಿಸಿ, ಕೆಲವು ತಿಂಗಳಲ್ಲಿ ಹಣ ಪಡೆದುಕೊಳ್ಳಬಹುದು. ಒಮ್ಮೆ ಆ ಪ್ರಕ್ರಿಯೆ ಆದ ಬಳಿಕ ವಿದಾಯಿ ನಡೆಸಬಹುದು ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದ್ದಾರೆ. ಚಂದ್ರಯಾನಗುಟ್ಟ ಪ್ರದೇಶದಲ್ಲಿಯೇ ಮುಂದಿನ ಕೆಲವೇ ದಿನಗಳಲ್ಲಿ 40ಕ್ಕೂ ಹೆಚ್ಚು ಮದುವೆಗಳು ನಕ್ಕಿಯಾಗಿವೆ.



Read more