Karnataka news paper

ಕಾಂಗ್ರೆಸ್ ಪಾದಯಾತ್ರೆಯಿಂದ ಮೇಕೆದಾಟು ಬಿಕ್ಕಟ್ಟು ಮತ್ತಷ್ಟು ಜಟಿಲ: ಎಚ್‌. ಡಿ. ಕುಮಾರಸ್ವಾಮಿ


ಹೈಲೈಟ್ಸ್‌:

  • ಒಂದು ಸಣ್ಣ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಅನುಮತಿ ವಿಳಂಬವಾಗಿದೆ
  • ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಅನುಮತಿ ಸಿಗುತ್ತಾ..?
  • ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

ಬಿಡದಿ (ರಾಮನಗರ):ಮೇಕೆದಾಟು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಕಾಂಗ್ರೆಸ್ ಪಾದಯಾತ್ರೆ ಕೇವಲ ಮತಕ್ಕಾಗಿ ಮಾಡುತ್ತಿರುವ ಯಾತ್ರೆ ಅಷ್ಟೇ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಪಾದಯಾತ್ರೆಗೆ ಕರೆದಿದ್ದಾರೆ. ಆ ಯಾತ್ರೆಯಲ್ಲಿ ಭಾಗವಹಿಸಿ ಏನು ಮಾಡೋದು ಹೇಳಿ ಎಂದು ಅವರು ಪ್ರಶ್ನಿಸಿದರು.

ಕೇವಲ ಒಂದು ತಾಂತ್ರಿಕ ಸಮಸ್ಯೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾತನಾಡಬೇಕು. ಅದು ಬಿಟ್ಟು ಪಾದಯಾತ್ರೆ ಮಾಡಿ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಗೌಡರ ಪಾದಯಾತ್ರೆ ಬೇರೆ: ದೇವೇಗೌಡರು ಹಲವು ಬಾರಿ ಪಾದಯಾತ್ರೆ ಮಾಡಿದ್ದಾರೆ. ನಾನು ಕೂಡ ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಿದ್ದೆ. ಆ ಪಾದಯಾತ್ರೆಗಳಿಗೂ ಇದಕ್ಕೂ ವ್ಯತ್ಯಾಸ ಇದೆ ಎಂದರು ಕುಮಾರಸ್ವಾಮಿ.

ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು. ಗೋಲಿಬಾರ್‌ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ಅದರ ವಿರುದ್ಧ ಅವರು ಪಾದಯಾತ್ರೆ ಮಾಡಿದ್ದರು. ಗೋಲಿಬಾರ್‌ಗೆ ಬಲಿಯಾಗಿದ್ದ ರೈತನ ವಿಚಾರವಾಗಿ ಕುಣಿಗಲ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದರು. ದೊಡ್ಡಳ್ಳಿ ಗೋಲಿಬಾರ್‌ನಲ್ಲಿ ಕಾಂಗ್ರೆಸ್ ಸರಕಾರ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು. ಆಗ 9 ದಿನ ಉಪವಾಸ ಮಾಡಿದ್ದರು ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಮಾಹಿತಿ ನೀಡಿದರು

ಕಾವೇರಿ ತಾಯಿ ಎದುರು ನಾಟಕ ಆಡಿದವರನ್ನು ಮಣ್ಣಿನ ಮಕ್ಕಳು ಎನ್ನಬೇಕೇ..? ಡಿಕೆಶಿಗೆ ಎಚ್ಡಿಕೆ ಚಾಟಿ
ಈ ಪಾದಯಾತ್ರೆ ಜನತೆಯ ಒಳಿತಿಗೆ ಅನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಆದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಾದಯಾತ್ರೆ ಮಾಡ್ತಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.

ಮೇಕೆದಾಟು ಡಿಪಿಆರ್ ನಾನು ಮಾಡಿ ಕಳುಹಿಸಿದ್ದೆ ಅಂತ ಸಿದ್ದರಾಮಯ್ಯ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಮಾಡಿ ಕೇಂದ್ರ ಜಲ ಆಯೋಗಕ್ಕೆ ಕಳಿಸಲಾಯಿತು. ವಿಧಾನಸಭೆಯಲ್ಲಿ ಜಲಸಂಪನ್ಮೂಲ ಮಂತ್ರಿಗಳೇ ಪ್ರಶ್ನೋತ್ತರ ವೇಳೆ ಈ ಬಗ್ಗೆ ಉತ್ತರ ನೀಡಿದ್ದಾರೆ ಎಂದು ಎಚ್ಡಿಕೆ ತಿಳಿಸಿದರು.

ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ಡಿಪಿಆರ್ ಮಾಡಬೇಕಿತ್ತು. ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡಿದ್ದವರು ಯಾರು? ಅವರಿಗೆ ಅಡ್ಡಿ ಮಾಡಿದವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಅವಶ್ಯಕತೆ ಇಲ್ಲ, ಟೆಕ್ನಿಕಲ್ ಸಮಸ್ಯೆ ಇದೆಯಷ್ಟೇ. ಇನ್ನು ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಖಜಾನೆಯಲ್ಲಿ ಹಣ ಇಲ್ಲ ಎನ್ನುವ ಸಮಸ್ಯೆ. ಹೀಗಾಗಿ ಅವರು ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಯೋಜನೆಗೆ ಅನುಮತಿ ಸಿಕ್ಕಿದರೆ ಕೆಲಸ ಮಾಡಲು ದುಡ್ಡೆಲ್ಲಿ ತರೋದು ಅನ್ನುವ ಆತಂಕದಲ್ಲಿ ಸರಕಾರ ಇದೆ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

ಕಾಂಗ್ರೆಸ್ ಪಕ್ಷದ್ದು ಮೇಕೆದಾಟು ಯಾತ್ರೆಯಲ್ಲ, ಮತಯಾತ್ರೆ: ಕುಮಾರಸ್ವಾಮಿ
ಪಾದಯಾತ್ರೆ ಮಾಡುವುದರಿಂದ ಇವರಿಗೆ ಅನುಮತಿ ಸಿಗುತ್ತಾ ಎಂದು ಪ್ರಶ್ನಿಸಿದ ಎಚ್ಡಿಕೆ, ಇವರ ಪಾದಯಾತ್ರೆಯಿಂದಾಗಿ ಸಮಸ್ಯೆ ಇನ್ನೂ ಜಟಿಲವಾಗಿ ಕೇಂದ್ರ ಸರ್ಕಾರ ಅನುಮತಿ ನೀಡುವುದು ವಿಳಂಬ ಆಗಬಹುದು ಅಥವಾ ಬಿಕ್ಕಟ್ಟು ಇನ್ನು ಹೆಚ್ಚಬಹುದು. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಧಾನಸಭೆಯಲ್ಲಿ ಬೊಮ್ಮಾಯಿ ಅವರು ಮುಂದಿನ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಸಿಗಲಿದೆ ಎಂದಿದ್ದರು. ಈಗ ಇವರ ಪಾದಯಾತ್ರೆಯಿಂದ ಸಿಗುವ ಅನುಮತಿಯೂ ಮತ್ತೆ ಮುಂದೆ ಹೋಗಲಿದೆ ಎಂದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಪಂಚೆ ಕಥೆ ಹೇಳಿದ್ದು ಅವರೇ ಹೊರತು ನಾವಲ್ಲ. ನಾನು ಆ ಬಗ್ಗೆ ಮಾತನಾಡಲಿಲ್ಲ. ಹಾಸನದಲ್ಲಿ ಅವರು ಬಾಯಿಗೆ ಬಂದಂತೆ ಮಾತನಾಡಿದ್ದರು. ಪಂಚೆ ಹಾಕಿದವರೆಲ್ಲ ರೈತರಾ? ನಾವು ಪಂಚೆ ಹಾಕಿಲ್ವ ಎಂದು ಕೇಳಿದ್ದರು. ದೇವೇಗೌಡರು ಪಂಚೆ ಕಟ್ಟುವುದಕ್ಕೂ ನಾವು ಕಟ್ಟುವುದಕ್ಕು ವ್ಯತ್ಯಾಸ ಇದೆ. ಇವರ ಪಂಚೆಗೂ, ದೇವೇಗೌಡರ ಪಂಚೆಗೂ ವ್ಯತ್ಯಾಸ ಇದೆ ಎಂದು ಎಚ್‌. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಮಗೆ ಹೆಸರು ಬರಬಾರದು ಅಂತಾ ಕಾಂಗ್ರೆಸ್‌ ಪಾದಯಾತ್ರೆ : ವಸತಿ ಸಚಿವ ವಿ ಸೋಮಣ್ಣ



Read more