Karnataka news paper

ದಾವಣಗೆರೆಯಲ್ಲಿ ಟ್ರಾಫಿಕ್‌ ದಂಡ ವಸೂಲಿ ಪುನಾರಂಭ: ಕಾಲೇಜು ವಿದ್ಯಾರ್ಥಿಗಳಿಗೆ ಶಾಕ್..!


ಹೈಲೈಟ್ಸ್‌:

  • ಹೆಲ್ಮೆಟ್‌ ಇಲ್ಲದ, ತ್ರಿಬಲ್‌ ರೈಡಿಂಗ್‌ಗೆ ದಂಡ
  • ಕಾಲೇಜು ವಿದ್ಯಾರ್ಥಿಗಳ ನಿರ್ಲಕ್ಷ್ಯ ಚಾಲನೆಗೆ ಬ್ರೇಕ್‌
  • ಬೈಕು, ಕಾರು, ಗೂಡ್ಸ್‌ ಆಟೋ ಸೇರಿದಂತೆ ಎಲ್ಲಾ ವಾಹನಗಳ ತಪಾಸಣೆ

ದಾವಣಗೆರೆ: ರಸ್ತೆ ಬದಿಯಲ್ಲಿ ನಿಂತು ಬೈಕು, ಕಾರು, ಗೂಡ್ಸ್‌ ಆಟೋ ಸೇರಿ ಎಲ್ಲಾ ವಾಹನಗಳನ್ನು ನಿಲ್ಲಿಸಿ, ದಾಖಲೆ ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಹಲವು ತಿಂಗಳುಗಳಿಂದ ನಿಲ್ಲಿಸಿದ್ದ ದಾವಣಗೆರೆ ನಗರದ ಸಂಚಾರ ಪೊಲೀಸರು, ಮತ್ತೆ ಕೈಯಲ್ಲಿ ಬಿಲ್‌ ಬುಕ್‌ ಹಿಡಿದು, ದಂಡ ವಸೂಲಿ ಆರಂಭಿಸಿದ್ದಾರೆ.

ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊಲೀಸರು ನಡು ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವಂತಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಪೊಲೀಸರು ಕೆಲವೆಡೆ ದಂಡ ವಸೂಲಿ ಮಾಡಲು ಮುಂದಾದಾಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ‘ಗೃಹ ಸಚಿವರೇ ಬೇಡ ಅಂದ ಮೇಲೆ ನಿಮ್ಮದೇನ್ರೀ ಕಿರಿಕಿರಿ’ ಎಂದು ಪೊಲೀಸರ ಮೇಲೆ ಹರಿಹಾಯ್ದ ಘಟನೆಗಳೂ ಕೂಡ ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಸೇರಿ ರಾಜ್ಯಾದ್ಯಂತ ಟ್ರಾಫಿಕ್‌ ದಂಡ ವಸೂಲಿ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿತ್ತು.

ನಿರಾಳರಾಗಿದ್ದ ಜನ: ಗೃಹ ಸಚಿವರ ಹೇಳಿಕೆ ನಂತರ ಸಂಚಾರ ಪೊಲೀಸರು ರಸ್ತೆಗಿಳಿದು ವಾಹನಗಳನ್ನು ಹಿಡಿದು ದಂಡ ವಿಧಿಸುವುದನ್ನು ನಿಲ್ಲಿಸಿದ್ದರಿಂದ ಸಾರ್ವಜನಿಕರು, ಅದರಲ್ಲೂ ಬೈಕ್‌ ಸವಾರರು ನಿರಾಳರಾಗಿದ್ದರು. ಪೊಲೀಸರು ಮಾಮೂಲಾಗಿ ನಿಲ್ಲುವ ರಸ್ತೆ ಅಥವಾ ಸ್ಥಳ ಬಂದ ಕೂಡಲೇ ವಾಹನದ ವೇಗ ಕಡಿಮೆ ಮಾಡಿ, ಇಣುಕು ನೋಡುತ್ತಿದ್ದವರು, ಯಾವ ಚಿಂತೆಯೂ ಇಲ್ಲದಂತೆ ಸಂಚರಿಸುತ್ತಿದ್ದರು. ಈ ನಡುವೆ ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲ ಪುಂಡರು ಹೆಲ್ಮೆಟ್‌ ಧರಿಸದೆ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಹೆಚ್ಚಾಗಿತ್ತು.

ಮತ್ತೆ ದಂಡ ವಸೂಲಿ: ಈ ಹಿಂದೆ ಪತ್ರಿಕಾ ಪ್ರಕಟಣೆ ನೀಡಿದ್ದ ಪೊಲೀಸ್‌ ಇಲಾಖೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಕುರಿತು 20 ದಿನಗಳ ಅಭಿಯಾನ ನಡೆಸಿ, ಅಭಿಯಾನ ಮುಗಿದ ಬಳಿಕ ಡಿಸೆಂಬರ್‌ ಮೊದಲ ವಾರದಲ್ಲಿ ನಿಯಮ ಉಲ್ಲಂಘನೆ ವಿರುದ್ಧ ದಂಡ ಪ್ರಯೋಗ ಆರಂಭಿಸುವುದಾಗಿ ತಿಳಿಸಿತ್ತು. ಅದರಂತೆ ಎರಡು ದಿನಗಳಿಂದ ದಾವಣಗೆರೆ ನಗರದಲ್ಲಿ ದಂಡ ವಸೂಲಿ ಆರಂಭವಾಗಿದೆ.

ಚನ್ನಗಿರಿ ಹೈಸ್ಕೂಲ್‌ ಟೀಚರ್ ತಲೆ ಮೇಲೆ ಕಸದ ಬುಟ್ಟಿ..! ವಿದ್ಯಾರ್ಥಿಗಳ ಪುಂಡಾಟಿಕೆಗೆ ಸಾರ್ವಜನಿಕರ ಆಕ್ರೋಶ
ಪಾಲಿಕೆ ಕಚೇರಿ ಎದುರಿನ ವೃತ್ತದಲ್ಲಿ ಶನಿವಾರ ದಂಡ ವಸೂಲಿ ಮಾಡುತ್ತಿದ್ದ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಈ ಕುರಿತು ‘ವಿಕ’ಗೆ ಪ್ರತಿಕ್ರಿಯಿಸಿ, ವಿನಾ ಕಾರಣ ಎಲ್ಲಾ ವಾಹನಗಳನ್ನು ತಡೆಯುತ್ತಿಲ್ಲ. ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸುವವರು, ತ್ರಿಬಲ್‌ ರೈಡಿಂಗ್‌ ಮಾಡುವವರನ್ನು ಮಾತ್ರ ತಡೆದು ದಂಡ ಹಾಕುತ್ತಿದ್ದೇವೆ ಎಂದರು.

‘ಪೊಲೀಸರು ದಂಡ ವಿಧಿಸುವುದನ್ನು ನಿಲ್ಲಿಸಿದ ಬಳಿಕ ಪುಂಡರು, ಕಾಲೇಜು ವಿದ್ಯಾರ್ಥಿಗಳ ನಿರ್ಲಕ್ಷ್ಯ ಚಾಲನೆ ಮಿತಿ ಮೀರಿತ್ತು. ಜನ ವಸತಿ ಪ್ರದೇಶಗಳಲ್ಲಿ ಅತಿ ವೇಗವಾಗಿ ಬೈಕ್‌ ಓಡಿಸುತ್ತಿದ್ದರು. ದಂಡ ವಸೂಲಿ ಪುನಾರಂಭದಿಂದ ಇದಕ್ಕೆ ಕೊಂಚ ಬ್ರೇಕ್‌ ಬೀಳಲಿದೆ’ ಎಂದು ಕೆಟಿಜೆ ನಗರ ನಿವಾಸಿ ರಾಮಚಂದ್ರ ರಾವ್‌ ಹೇಳಿದ್ದಾರೆ.
ದಾವಣಗೆರೆಯಲ್ಲಿ ಗುರುಗಳ ತಲೆಗೆ ಕಸದ ಬುಟ್ಟಿ ಹಾಕಿ ವಿಕೃತಿ; ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು!



Read more