Karnataka news paper

ಕಾಶ್ಮೀರಿ ಪಂಡಿತರ ಕುರಿತು ಎನ್ ಸಿಯಿಂದ 3 ಪ್ರಮುಖ ನಿರ್ಣಯ ಅಂಗೀಕಾರ, ಓಮರ್ ಅಬ್ದುಲ್ಲಾ ಹೇಳಿದ್ದಿಷ್ಟು…


Source : Online Desk

ಶ್ರೀನಗರ: ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ನ ಅಲ್ಪಸಂಖ್ಯಾತ ಘಟಕ ಡಿ.11 ರಂದು ಕಾಶ್ಮೀರಿ ಪಂಡಿತರ ಕುರಿತಾಗಿ ಮೂರು ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಿದೆ. 

ನಿರ್ಣಯ ಅಂಗೀಕರಿಸಿದ ಬಳಿಕ ಮಾತನಾಡಿರುವ ಪಕ್ಷದ ಮುಖಂಡ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ, “ಕೆಲವು ಶಕ್ತಿಗಳು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಂ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸಿದವು. ಪಂಡಿತರನ್ನು ಕಾಶ್ಮೀರ ತೊರೆಯುವಂತೆ ಒತ್ತಾಯಿಸಿದ್ದು ಸ್ವಾರ್ಥಿಗಳೇ ಹೊರತು ಮುಸ್ಲಿಮರಲ್ಲ. ಪಂಡಿತರನ್ನು ಕಣಿವೆಯಿಂದ ಹೊರಹಾಕಿದ ನಂತರ ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಎಂದಿಗೂ ತಮ್ಮ ಕೆಟ್ಟ ಯೋಜನೆಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಕಾಶ್ಮೀರಿ ಪಂಡಿತರಿಗೆ ಆಶ್ರಯ ನೀಡಿದ್ದಕ್ಕಾಗಿ ನಾನು ಜಮ್ಮುವಿನ ಜನರನ್ನು ಅಭಿನಂದಿಸುತ್ತೇನೆ ಎಂದರು.

ಬಿಜೆಪಿ ಕಾಶ್ಮೀರಿ ಪಂಡಿತರನ್ನು “ಮತ ಬ್ಯಾಂಕ್” ಆಗಿ ಬಳಸುತ್ತಿದೆಯೇ ವಿನಃ ಅವರ ಅನುಕೂಲತೆಗಾಗಿ ಏನನ್ನೂ ಮಾಡಿಲ್ಲ ಎಂದು  ಫರೂಕ್ ಅಬ್ದುಲ್ಲಾ ಬಿಜೆಪಿಯ ಮೇಲೆ ಕಿಡಿಕಾರಿದ್ದಾರೆ.

ರಾಜಕೀಯ ಪಕ್ಷದ ಅಲ್ಪಸಂಖ್ಯಾತ ಘಟಕವು ಕಾಶ್ಮೀರಿ ಪಂಡಿತರಿಗೆ ರಾಜಕೀಯ ಮೀಸಲಾತಿ, ಕಾಶ್ಮೀರಿ ಹಿಂದೂ ದೇವಾಲಯದ ಸಂರಕ್ಷಣಾ ಮಸೂದೆಯ ಅಂಗೀಕಾರ ಮತ್ತು ಕಾಶ್ಮೀರಿ ಪಂಡಿತರ ಮರಳುವಿಕೆ ಮತ್ತು ಪುನರ್ವಸತಿಗಾಗಿ ಸಮಗ್ರ ಪ್ಯಾಕೇಜ್ ಎಂಬ ಮೂರು ನಿರ್ಣಯಗಳನ್ನು ಅಂಗೀಕರಿಸಿದೆ.

“ನಾವೆಲ್ಲರೂ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸಬೇಕು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಅಂತರವನ್ನು ಕಡಿಮೆ ಮಾಡಲು ಮತ್ತು ದ್ವೇಷವನ್ನು ಪ್ರೀತಿಯಿಂದ ಬದಲಾಯಿಸಲು ಪ್ರಯತ್ನಿಸಬೇಕು. ನಮ್ಮನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು” ಎಂದು ಫಾರೂಖ್ ಅಬ್ದುಲ್ಲಾ ಕರೆ ನೀಡಿದ್ದಾರೆ.



Read more