Karnataka news paper

ಹೇಮಂತ್ ಹೆಗಡೆಯ ‘ಮದ್ವೆ ಪ್ರಸಂಗ’ಕ್ಕೆ ಶುಭ ಹಾರೈಸಿದ ಟಿ.ಎನ್. ಸೀತಾರಾಮ್‌


ಹೈಲೈಟ್ಸ್‌:

  • ಹೊಸ ಸಿನಿಮಾ ಘೋಷಣೆ ಮಾಡಿದ ನಟ/ನಿರ್ದೇಶಕ ಹೇಮಂತ್ ಹೆಗಡೆ
  • ಮಲೆನಾಡಿನ ಕಥೆಯುಳ್ಳ ‘ನಮ್ ನಾಣಿ ಮದ್ವೆ ಪ್ರಸಂಗ’ ಸಿನಿಮಾ
  • ಹೇಮಂತ್‌ ಹೆಗಡೆ ಪ್ರಯತ್ನಕ್ಕೆ ಶುಭ ಹಾರೈಸಿದ ನಿರ್ದೇಶಕ ಟಿ.ಎನ್. ಸೀತಾರಾಮ್

ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹೀರೋ ಆಗಿ, ನಿರ್ದೇಶಕರಾಗಿ ಹೆಸರು ಮಾಡಿದವರು ಹೇಮಂತ್ ಹೆಗಡೆ. ಬಹಳ ದಿನಗಳ ನಂತರ ಅವರೀಗ ಪುನಃ ಸಿನಿಮಾರಂಗಕ್ಕೆ ಮರಳಿದ್ದಾರೆ. ಈ ಬಾರಿ ಮತ್ತೊಂದ್ ಕಾಮಿಡಿ ಸಿನಿಮಾದ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ‘ನಮ್ ನಾಣಿ ಮದ್ವೆ ಪ್ರಸಂಗ‘ ಅಂತ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಈ ಸಿನಿಮಾಕ್ಕೆ ಚಾಲನೆ ನೀಡಿ ಹಾರೈಸಿದ್ದಾರೆ. ಜೊತೆಗೆ ಸಚಿವರಾದ ಎಸ್ ಟಿ. ಸೋಮಶೇಖರ್ ಕೂಡ ಹೇಮಂತ್ ಹೆಗಡೆ ಮತ್ತು ತಂಡಕ್ಕೆ ಆಲ್‌ ದಿ ಬೆಸ್ಟ್ ಹೇಳಿದ್ದಾರೆ. ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಹೇಮಂತ್ ಹೆಗಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಹೇಮಂತ್‌ಗೆ ಟಿಎನ್ನೆಸ್‌ ಹಾರೈಕೆ
‘ನನ್ನ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯಲ್ಲಿ ಹೇಮಂತ್ ಹೆಗಡೆ ಅವರಿಂದ ಒಂದು ಪಾತ್ರ ಮಾಡಿಸಿದ್ದೆ. ಆನಂತರ ಅವರ ಆ ಪಾತ್ರ ಬಹಳ ಜನಪ್ರಿಯವಾಯಿತು. ‘ಮತದಾನ’ ಸಿನಿಮಾ ಮಾಡುವಾಗ ನನಗೆ ಸೌಮ್ಯ ಮುಖದ ಹೀರೋ ಬೇಕಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಹೇಮಂತ್ ಅವರನ್ನು. ಮಾಯಾಮೃಗದಲ್ಲಿ ಹೇಮಂತ್ ಪಾತ್ರ ಮದುವೆಗಾಗಿ ಬಹಳ ಕಷ್ಟಪಡುತ್ತದೆ. ಮತದಾನದಲ್ಲಿ ಮದುವೆಯೇ ಆಗುವುದು. ಇದರಲ್ಲೂ ಮದುವೆಗಾಗಿ ಕಷ್ಟಪಡುವ ಪಾತ್ರ ಇದೆ. ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ. ಜನರನ್ನು ನಗಿಸುವುದಕ್ಕೆ ಹೇಮಂತ್ ಪ್ರಯತ್ನ ಮಾಡುತ್ತಾರೆ. ನಗು ಮತ್ತು ವಿಷಾದದ ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ, ಚಿತ್ರ ಯಶಸ್ವಿಯಾಗಲಿ’ ಎಂದು ಟಿ.ಎನ್. ಸೀತಾರಾಮ್ ಹಾರೈಸಿದರು.

ಇದು ಮಲೆನಾಡಿನ ಕಥೆ
‘ಎರಡು ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ಮಲೆನಾಡು ಹುಡುಗನೊಬ್ಬನ ಕಥೆ ಇದು. ಮಲೆನಾಡು ಭಾಗದಲ್ಲಿ ಕೃಷಿ ಮಾಡುವ ಹುಡುಗರಿಗೆ ಮದುವೆ ಆಗಲು ಹುಡುಗಿ ಸಿಗುತ್ತಿಲ್ಲ. ಇಂಥದ್ದೊಂದು ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ನನ್ನ ಸಂಬಂಧಿಯೊಬ್ಬರು ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದರು. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ ಎಂಬ ನಂಬಿಕೆ ನನಗಿದೆ. ಜನ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ’ ಎಂದು ತಮ್ಮ ಸಿನಿಮಾದ ಕಥೆ ಬಗ್ಗೆ ಹೇಳಿದರು ನಿರ್ದೇಶಕ ಹೇಮಂತ್ ಹೆಗಡೆ.

ಟಿ.ಎನ್.ಸೀತಾರಾಮ್ ನಿರ್ದೇಶನದ ಹೊಸ ಧಾರಾವಾಹಿಗೆ ಹೆಸರು ಬೇಕಾಗಿದೆ! ಸೂಚಿಸಬಲ್ಲಿರಾ?

ಪ್ರಮುಖ ಪಾತ್ರದಲ್ಲಿ ರಾಜೇಶ್ ನಟರಂಗ
‘ನನಗೆ ಕಥೆ ಗೊತ್ತಿಲ್ಲ. ಹೇಮಂತ್ ಫೋನ್ ಮಾಡಿ ‘ಒಂದು ಪಾತ್ರ ಮಾಡಬೇಕು’ ಎಂದ. ನಮ್ಮಿಬ್ಬರದ್ದು ಹಳೆಯ ಪರಿಚಯ. ನಾವಿಬ್ಬರು 30 ವರ್ಷಗಳಿಂದ ಸ್ನೇಹಿತರು. ಬೇರೆಬೇರೆ ಹಂತಗಳಲ್ಲಿ, ವೇದಿಕೆಗಳಲ್ಲಿ ಕೆಲಸ ಮಾಡಿದ್ದೇವೆ. ಅವನ ನಿರ್ದೇಶನದಲ್ಲಿ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿದಾಗ, ತಕ್ಷಣ ಒಪ್ಪಿದೆ. ಅವನ ಮೇಲೆ ನಂಬಿಕೆ ಇದೆ’ ಎಂದು ರಾಜೇಶ್ ನಟರಂಗ ಹೇಳಿದರು. ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್ ಮತ್ತು ಶ್ರುತಿ ನಂದೀಶ್ ನಟಿಸುತ್ತಿದ್ದಾರೆ. ರಾಜೇಶ್‌ ನಟರಂಗ, ಶರತ್ ಲೋಹಿತಾಶ್ವ, ನಾರಾಯಣಸ್ವಾಮಿ ಮತ್ತು ರಿತೇಶ್ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜನವರಿ 15ರ ನಂತರ ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ.

ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಟಿ.ಎನ್.ಸೀತಾರಾಮ್



Read more