ಹೈಲೈಟ್ಸ್:
- ಕಾರ್ಯಕರ್ತರ ಹೋಟೆಲ್ಗೆ ಹೋಗಿ ಚಹಾ ಸೇವನೆ
- ಮದುವೆ ಮನೆಯಲ್ಲಿ ಪಂಕ್ತಿ ಭೋಜನದಲ್ಲಿ ಭಾಗಿ
- ಹಿರಿಯರ ಆರೋಗ್ಯ ವಿಚಾರಿಸುವ ವಿಧಾನಸಭಾಧ್ಯಕ್ಷ
ಅದೇ ರೀತಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಅಂಕೋಲಾ ಪಟ್ಟಣಕ್ಕೆ ಆಗಮಿಸಿದ್ದ ಕಾಗೇರಿ, ಜನ ಸಂಘದ ಹಿರಿಯ ಕಾರ್ಯಕರ್ತ ಅಶೋಕ ಮಹಾಲೆ ಅವರ ಹೋಟೆಲಿಗೆ ಭೇಟಿ ನೀಡಿ, ಕರೆ ಲಾಡು – ಚಹ ಸೇವಿಸಿ ಸರಳತೆಗೆ ಸಾಕ್ಷಿಯಾದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಥಮ ಬಾರಿ ಶಾಸಕರಾಗಿದ್ದು ಅಂಕೋಲಾ ಕ್ಷೇತ್ರದಿಂದ. ಈ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾದವರು ಮತ್ತೊಮ್ಮೆ ಆಯ್ಕೆ ಆಗುವುದಿಲ್ಲ ಎಂಬ ಅಂಕೋಲಾ ಕ್ಷೇತ್ರದ ಪ್ರತೀತಿ ಬದಲಿಸಿದ ಕಾಗೇರಿ, ಮೂರು ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಈ ಆಯ್ಕೆಗೆ ಸಹಕರಿಸಿದ ಹಿರಿಯ ಕಾರ್ಯಕರ್ತರಲ್ಲಿ ಓರ್ವರಾದ ಅಶೋಕ ಮಹಾಲೆ ಅವರನ್ನು ನೆನಪಿಸಿಕೊಂಡು ಈಗ ಕಾರವಾರ ರಸ್ತೆಯಲ್ಲಿರುವ ಪುಟ್ಟ ಹೋಟೆಲ್ಗೆ ಭೇಟಿ ನೀಡಿ, ಅವರ ಕುಶಲೋಪರಿಯನ್ನ ಕಾಗೇರಿ ವಿಚಾರಿಸಿದರು.
ಅದೇ ರೀತಿ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿರುವ ಇನ್ನೋರ್ವ ಹಿರಿಯ ರಾಮಚಂದ್ರ ನಾಯ್ಕ ಅವರ ಅಂಗಡಿಗೂ ಹೋಗಿ ಅವರ ಆರೋಗ್ಯ ವಿಚಾರಿಸಿದರು. ನಾಮಧಾರಿ ದಹಿಂಕಾಲ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ವೆಂಕಟ ರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಇಷ್ಟೇ ಅಲ್ಲದೆ, ಅಂಕೋಲಾ ಪಟ್ಟಣದ ಆರ್ಯ ದುರ್ಗಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪ್ರಮುಖರಾದ ದಯಾನಂದ ಪ್ರಭು ಅವರ ಮಗಳ ಮದುವೆಯಲ್ಲಿ ಭಾಗವಹಿಸಿ, ಇದೇ ಸಂದರ್ಭದಲ್ಲಿ ಮದುವೆ ಸಮಾರಂಭದಲ್ಲಿ ಭೇಟಿಯಾದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರೊಂದಿಗೆ ಸಾಮಾನ್ಯರಂತೆ ಮದುವೆ ಮನೆಯ ಊಟದ ಪಂಕ್ತಿಯಲ್ಲಿ ಕುಳಿತು ಊಟ ಸೇವಿಸಿ, ನಂತರ ಮತ್ತೊಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದರು.
ಶಾಸಕರಾದರೂ, ಗೌರವದ ಸ್ಥಾನವಾದ ವಿಧಾನ ಸಭಾಧ್ಯಕ್ಷರಾದರೂ ಕೂಡ ಈಗಲೂ ಸರಳವಾಗಿ ಮದುವೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರೊಂದಿಗೆ ಪಾಲ್ಗೊಂಡು ಸರಳತೆ ಮೆರೆಯುವ ವಿಶ್ವೇಶ್ವರ ಹೆಗಡೆ ಕಾಗೇರಿಯಂಥವರು ಈಗಿನ ರಾಜಕೀಯ ಕ್ಷೇತ್ರದಲ್ಲಿ ಬಹಳ ಅಪರೂಪವೇ ಸರಿ.