Karnataka news paper

ವರಿಷ್ಠರು ಹೇಳಿದರೆ ಸಚಿವ ಸ್ಥಾನ ಬಿಟ್ಟುಕೊಡುವೆ ಎಂದ ಈಶ್ವರಪ್ಪ; ಪುನಾರಚನೆಗೆ ರೇಣುಕಾಚಾರ್ಯ ಬೇಡಿಕೆ


ಹುಬ್ಬಳ್ಳಿ: ಎರಡ್ಮೂರು ಬಾರಿ ಸಚಿವರಾಗಿದ್ದವರು ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳುವ ಮೂಲಕ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

ಸಂಪುಟ ಪುನಾರಚನೆ ಮಾಡಬೇಕೆಂದು ರೇಣುಕಾಚಾರ್ಯ ಪರೋಕ್ಷ ಬೇಡಿಕೆ ಮಂಡಿಸಿದರು. ಇದಕ್ಕೆ ಗ್ರಾಮೀಣಾಭಿವೃದ್ ಸಚಿವ ಕೆ.ಎಸ್‌. ಈಶ್ವರಪ್ಪ, ”ಅದಕ್ಕೇನಂತೆ ಪಕ್ಷದ ವರಿಷ್ಠರು ಹೇಳಿದರೆ ಸಚಿವ ಸ್ಥಾನ ಬಿಟ್ಟುಕೊಡುತ್ತೇವೆ” ಎಂದು ತಿರುಗೇಟು ನೀಡಿದರು.

ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಎರಡನೇ ದಿನದ ಸಭೆಗಳಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಹೀಗೆ ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯ ಕಾರ‍್ಯಕಾರಿಣಿಗೆ ತೆರೆ: ಪ್ರಮುಖರ ಗೈರು, ಹೊರಬೀಳದ ಗಟ್ಟಿ ನಿರ್ಧಾರ..!

”ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಿ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕು. ಹಿರಿಯ ಸಚಿವರು ರಾಜೀನಾಮೆ ನೀಡಿ ಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು” ಎಂದು ರೇಣುಕಾಚಾರ್ಯ ಒತ್ತಿ ಹೇಳಿದರು.

”ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಡುವಂತೆ ಒತ್ತಾಯಿಸುವುದಿಲ್ಲ. ಯಾರಿಗೆ ಬೇಕಾದ್ರೂ ಕೊಡಲಿ. ಆದರೆ, ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು” ಎಂದು ರೇಣುಕಾಚಾರ್ಯ ಆಗ್ರಹಿಸಿದರು.

ನಾನು ತಯಾರಿದ್ದೇನೆ

ಪಕ್ಷದ ವರಿಷ್ಠರು ಹೇಳಿದರೆ ಧಾರಾಳವಾಗಿ ಸಚಿವ ಸ್ಥಾನ ಬಿಟ್ಟು ಕೊಡಲು ತಯಾರಿದ್ದೇನೆ. ನನ್ನನ್ನು ಸಂಪುಟದಿಂದ ಕೈ ಬಿಡುವುದಾದರೆ ಅದಕ್ಕೂ ನಾನು ರೆಡಿ ಇದ್ದೀನಿ. ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಅಕಾರ ಎಷ್ಟರ ಮಟ್ಟಿಗೆ ಒಳ್ಳೆಯದು, ಕೆಟ್ಟದ್ದು ನಮಗೆ ಗೊತ್ತು ಎಂದು ಸಚಿವ ಈಶ್ವರಪ್ಪ ಹೇಳಿದರು.

ರೇಣುಗೆ ಈಶ್ವರಪ್ಪ ತರಾಟೆ

ಹಿರಿಯರು ರಾಜೀನಾಮೆ ಕೊಡಲಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಳಿಕ ಸಿಡುಕಿನಿಂದಲೇ ಕಾರ‍್ಯಕಾರಿಣಿ ಸಭೆಯ ಸಭಾಂಗಣಕ್ಕೆ ತೆರಳಿದರು. ಅಲ್ಲಿ ಪಕ್ಷದ ಪ್ರಮುಖರು, ಕೆಲ ಸಚಿವರೆದರು ರೇಣುಕಾಚಾರ್ಯ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು: ಸಿಎಂ ಬೊಮ್ಮಾಯಿ ಮಾತಿನ ಅರ್ಥವೇನು?

ಈ ವೇಳೆ ಅವರಿಬ್ಬರ ಮಧ್ಯೆ ತೀವ್ರ ಮಾತಿನ ಜಟಾಪಟಿಯೂ ನಡೆಯಿತು. ಪ್ರಧಾನ ಕಾರ್ಯದರ್ಶಿ ಹಾಗೂ ಇತರರ ಮುಖಂಡರು, ರೇಣುಕಾಚಾರ್ಯರಿಗೆ ಸ್ವಲ್ಪ ಹೊತ್ತು ಹೊರಗೆ ಹೋಗುವಂತೆ ಸೂಚಿಸಿ ಈಶ್ವರಪ್ಪ ಅವರನ್ನು ಸಮಾಧಾನ ಮಾಡಿದರು ಎಂದು ಗೊತ್ತಾಗಿದೆ. ಈಶ್ವರಪ್ಪ ಒಳಗೆ ಹೋದ ಕೆಲ ಸಮಯದ ಬಳಿಕ ರೇಣುಕಾಚಾರ್ಯ ಸಭಾಂಗಣದ ಹೊರಗಡೆ ಕಾಣಿಸಿಕೊಂಡಿದ್ದು ಕಂಡು ಬಂತು.



Read more