Karnataka news paper

ಬಿಜೆಪಿ ರಾಜ್ಯ ಕಾರ‍್ಯಕಾರಿಣಿಗೆ ತೆರೆ: ಪ್ರಮುಖರ ಗೈರು, ಹೊರಬೀಳದ ಗಟ್ಟಿ ನಿರ್ಧಾರ..!


ಹೈಲೈಟ್ಸ್‌:

  • ಕಾರ್ಯಕಾರಿಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬರಲಿಲ್ಲ
  • ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಕೂಡಾ ಗೈರಾಗಿದ್ದರು
  • ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿಲ್ಲ..!

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಕಳೆದ 2 ದಿನಗಳಿಂದ ನಡೆದ ರಾಜ್ಯ ಬಿಜೆಪಿ ಕಾರ‍್ಯಕಾರಿಣಿಗೆ ಬುಧವಾರ ತೆರೆ ಬಿದ್ದಿತು. ಆದರೆ, ಕಾರ್ಯಕಾರಿಣಿಗೆ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಬಿಎಸ್‌ವೈ ಸೇರಿದಂತೆ ಕೆಲ ಪ್ರಮುಖ ನಾಯಕರೇ ಬರದಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಗಟ್ಟಿ ನಿರ್ಧಾರಗಳು ಹೊರಬೀಳಲಿಲ್ಲ. ಜತೆಗೆ ಕೋರ್ ಕಮಿಟಿ ಸಭೆ ಕೂಡ ನಡೆಯಲಿಲ್ಲ.

ಹತ್ತು ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಪಕ್ಷದಿಂದ ಸರಕಾರಕ್ಕೆ ಸಲಹೆ ಸೂಚನೆಗಳು ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು. ಹಾಗೆಯೇ ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷ ವಿರೋಧಿಗಳ ವಿರುದ್ಧ ಕಠಿಣ ಕ್ರಮದ ನಿರ್ಧಾರ, ಬಿಟ್‌ ಕಾಯಿನ್‌ ಹಗರಣ ಕುರಿತು ಚರ್ಚೆ ಆಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಇಲ್ಲಿ ನಾಯಕತ್ವ ಬದಲಾವಣೆ ಕುರಿತು ಸೊಲ್ಲೆತ್ತದಂತೆ ಪಕ್ಷದ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿರುವುದನ್ನು ಬಿಟ್ಟರೆ ಅಂತಹ ಗಂಭೀರ ತೀರ್ಮಾನಗಳೇನೂ ಆಗಲಿಲ್ಲ.

ಯೋಜನೆ ಬಗ್ಗೆಯೇ ಭಾಷಣ

ಪ್ರಸಕ್ತ ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ ಬಗ್ಗೆ ಕೆಲ ಚರ್ಚೆಗಳು ಆಗಿವೆ. 2023ರ ವಿಧಾನಸಭೆ ಚುನಾವಣೆ ಗೆಲ್ಲಲು ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ಎರಡೂ ದಿನ ಸರಕಾರದ ಯೋಜನೆಗಳ ಬಗ್ಗೆಯೇ ಭಾಷಣಗಳು ನಡೆದವು. ಈ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವಂತೆ ನಾಯಕರು ಪಕ್ಷದ ಪದಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಕ್ಷ ಸಂಘಟನೆಗೆ ಪೂರಕವಾಗಿ ವಿಸ್ತಾರಕ ಯೋಜನೆಯನ್ನು ಮುಂಬರುವ ಫೆಬ್ರವರಿಯಿಂದ ಆರಂಭಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಪೇಜ್‌ ಸಮಿತಿಗೆ ವಿಶೇಷ ಆದ್ಯತೆ ನೀಡಲು ಕಾರ‍್ಯಕಾರಿಣಿ ನಿರ್ಣಯಿಸಿದೆ.

ಸಮುದಾಯಗಳತ್ತ ಚಿತ್ತ

ಚುನಾವಣೆ ಗೆಲ್ಲಲು ಸಂಘಟನೆ, ನಾಯಕತ್ವ, ವಿಶ್ವಾಸರ್ಹತೆ ಹಾಗೂ ನಿರ್ವಹಣೆ ಪ್ರಮುಖವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ. ಟಿ. ರವಿ ಕಾರ್ಯಕಾರಿಣಿಯಲ್ಲಿ ತಿಳಿಸಿದರು. 2014ರ ಪೂರ್ವದ ರಾಜಕೀಯ ಸ್ಥಿತಿ ಈಗಿಲ್ಲ. ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿಕೆಶಿ ಖಾಲಿ ಇಲ್ಲದ ಸಿಎಂ ಸೀಟ್‌ಗೆ ಕನಸು ಕಾಣುತ್ತಿದ್ದಾರೆ. ಜೆಡಿಎಸ್‌ ಕುಟುಂಬ ಆಧಾರಿತ ಪಕ್ಷವಾಗಿದೆ. ಇದೆಲ್ಲವನ್ನು ಅರಿತು ನಾವು ಸಣ್ಣ ಸಣ್ಣ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಗುರುತಿಸುವ ಕೆಲಸ ಆಗಬೇಕು. ಪರಸ್ಪರ ಅಪನಂಬಿಕೆಯಿಂದ ಅಭಿವೃದ್ಧಿ ಕುಂಠಿತಗೊಳ್ಳಬಾರದು ಎಂದು ಹೇಳಿದ್ದಾರೆ ಎಂದು ಬಿಜೆಪಿ ಮಾಧ್ಯಮ ವಕ್ತಾರ ಎಂ. ಜಿ. ಮಹೇಶ ಮಾಹಿತಿ ನೀಡಿದ್ದಾರೆ.

ಬಿಎಸ್ ವೈ ಇನ್ ದುಬೈ; ಹುಬ್ಬಳ್ಳಿ ಕೋರ್ ಕಮಿಟಿ ಸಭೆ ರದ್ದು!
ಹಿಂದುತ್ವವನ್ನು ಜಾತಿ, ಭಾಷೆಯ ಆಧಾರದ ಮೇಲೆ ಒಡೆಯುವ ಪ್ರಯತ್ನಗಳು ನಡೆದಿವೆ. ಭಕ್ತಿ ಇಲ್ಲದ ಶಕ್ತಿ ಅಪಾಯಕಾರಿ. ಸುಳ್ಳನ್ನು ಸತ್ಯವೆಂದು ನಂಬಿಸುವ ಕೆಲಸವನ್ನು ಕಾಂಗ್ರೆಸ್‌ ನಡೆಸಿದೆ. ರಾಜಕೀಯವನ್ನು ಸಿದ್ಧಾಂತಕ್ಕಿಂತ ತಂತ್ರಗಾರಿಕೆಯಿಂದ ಗೆಲ್ಲಬೇಕು. ಕೆಲ ಜಿಲ್ಲೆಗಳಲ್ಲಿ ಜಾತಿ ರೋಗದಂತೆ ವ್ಯಾಪಿಸಿದೆ. ಇದು ಅಪಾಯಕಾರಿ. ಮುಂದಿನ ಚುನಾವಣೆ ಕೌರವರು – ಪಾಂಡವರ ಮಧ್ಯೆ ನಡೆಯುವ ಯುದ್ಧ. ಅಲ್ಲಿ ಪಾಂಡವರಂತೆ ನಾವು ಗೆದ್ದು ತೋರಿಸಬೇಕು ಎಂದು ನಾಯಕರು ಹುರುಪು ತುಂಬಿದರು.

ಚುನಾವಣೆಗೆ ದಿಕ್ಸೂಚಿ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿ ಮುಂದಿನ ಚುನಾವಣೆಗೆ ದಿಕ್ಸೂಚಿ ನೀಡಿದೆ. ಬಿಜೆಪಿಯ 150 ಪ್ಲಸ್‌ ಘೋಷಣೆಯೊಂದಿಗೆ 2023ರ ಚುನಾವಣೆ ಎದುರಿಸಲು ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ತಯಾರಿ ನಡೆಸಲು ಸಭೆ ಅನುಕೂಲ ಕಲ್ಪಿಸಿದೆ. ಮುಂದಿನ 3 ತಿಂಗಳವರೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿ. ಪೇಜ್‌ ಸಮಿತಿಗೆ ಒತ್ತು ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ಬಿಜೆಪಿ ಕಾರ್ಯಕಾರಿಣಿ, ಕೋರ್‌ ಕಮಿಟಿ ಸಭೆ; ವರಿಷ್ಠರಿಗೆ ಸವಾಲಾದ ಆಂತರಿಕ ಗೊಂದಲ ನಿವಾರಣೆ!
ನೂತನ ಎಂಎಲ್‌ಸಿಗಳಿಗೆ ಸನ್ಮಾನ

ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಜನ ನೂತನ ಎಂಎಲ್‌ಸಿ ಹಾಗೂ ಉಪ ಚುನಾವಣೆಯಲ್ಲಿ ಗೆದ್ದ 1 ಎಂಎಲ್‌ಎಯನ್ನು ರಾಜ್ಯ ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲಾಯಿತು. ನೀವು ಜನಪರ ಸೇವೆ ಸಲ್ಲಿಸಿ ಪಕ್ಷಕ್ಕೆ ಬಲ ತುಂಬಬೇಕು ಎಂದು ನಾಯಕರು ನೂತನ ಶಾಸಕರಿಗೆ ಕಿವಿಮಾತು ಹೇಳಿದರು.

ಒಳಗೆ ಶಿಸ್ತು, ಹೊರಗೆ ಅಶಿಸ್ತು:

ನಮದು ಶಿಸ್ತಿನ ಪಕ್ಷ ಎನ್ನುತ್ತಲೇ ಕಾರ್ಯಕಾರಿಣಿ ಆರಂಭಿಸಿದ ಬಿಜೆಪಿ ನಾಯಕರಿಗೆ ಒಳಗೆ ಶಿಸ್ತು ಹೊರಗೆ ಅಶಿಸ್ತು ಎಂಬುದು ಸ್ಪಷ್ಟವಾಗಿಯೇ ಗೋಚರವಾಯಿತು. ನಾಯಕತ್ವದ ಬಗ್ಗೆ ಮಾತನಾಡಿದರೆ ಕಠಿಣ ಕ್ರಮ ಎಂದು ವರಿಷ್ಠರು ಸೂಚಿಸಿದ್ದರಾದರೂ ಪಕ್ಷದ ಕೆಲ ಶಾಸಕರು ಸಂಪುಟ ವಿಸ್ತರಣೆ ವಿಚಾರವಾಗಿ ಮಾಧ್ಯಮಗಳ ಎದುರು ಹಿರಿಯ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಕೋರ್‌ ಕಮೀಟಿಯಲ್ಲಿ ಸಿಎಂ ಭಾಗವಹಿಸಲಿದ್ದಾರೆ ಎಂದು ಬರೆಯಲಾಗಿದೆ. ಆದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಕೋರ್‌ ಕಮಿಟಿ ಶೆಡ್ಯೂಲೇ ನಿಗದಿ ಆಗಿಲ್ಲ ಎಂದು ಹೇಳಿದರು. ಅಂದರೆ ಇಲ್ಲಿ ಸಂವಹನ ಕೊರತೆ ಎದ್ದು ಕಾಣುತ್ತಿತ್ತು.

ರಾಜ್ಯ ಕಾರ್ಯಕಾರಣಿಗೆ ನಡ್ಡಾ, ಬಿಎಸ್‌ವೈ, ಜಾರಕಿಹೊಳಿ ಬ್ರದರ್ಸ್ ಗೈರು! ಸರ್ಕಾರದ ಸಾಧನೆ ಹೇಳಲಷ್ಟೇ ಸೀಮಿತ!



Read more