ಹೈಲೈಟ್ಸ್:
- ಪತ್ನಿಯ ಮೊಬೈಲ್ಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ
- ಮಹಿಳೆಯ ಪತಿ ಹಾಗೂ ಭದ್ರತಾ ಸಿಬ್ಬಂದಿ ನಡುವೆ ಪರಸ್ಪರ ಹೊಡೆದಾಟ
- ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿ ದೂರು
ಖಾಸಗಿ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಯತೀಶ್ ಅಶ್ಲೀಲ ಚಿತ್ರ ಕಳುಹಿಸಿ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿ ಗುಟ್ಟಹಳ್ಳಿ ನಿವಾಸಿ ವಾಸು ಅವರ ಪತ್ನಿ ನೀಡಿದ ದೂರಿನ ಆಧಾರದ ಮೇರೆಗೆ ಸೆಕ್ಯೂರಿಟಿ ಗಾರ್ಡ್ ಯತೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆದರೆ ಇದಕ್ಕೂ ಮುನ್ನ ಹಣ ಮತ್ತು ಬಡ್ಡಿ ಕೊಟ್ಟಿಲ್ಲ ಎಂದು ಆರೋಪಿಸಿ ವಾಸು ತನ್ನ ಪುತ್ರನನ್ನು ಅಪಹರಿಸಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ವಾಸು ವಿರುದ್ಧ ಯತೀಶ್ ತಂದೆ ನಂಜುಂಡಪ್ಪ ದೂರು ನೀಡಿದ್ದರು. ಸದ್ಯ ವಾಸು ಹಾಗೂ ಯತೀಶ್ ಇಬ್ಬರಿಗೂ ನೋಟಿಸ್ ನೀಡಿ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಸು ಪತ್ನಿ ಹಾಗೂ ಯತೀಶ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪರಿಚಯಸ್ಥರಾಗಿದ್ದರು. ಮಹಿಳೆ ಕಂಪನಿಯಲ್ಲಿ ಸೀನಿಯರ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅದೇ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಯತೀಶ್ ಕೆಲಸ ಮಾಡುತ್ತಿದ್ದ. ಹೀಗಾಗಿ, ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿ ಕೊಂಡಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಯತೀಶ್, ನವೆಂಬರ್ 10 ರಂದು ರಾತ್ರಿ ಮಹಿಳೆ ಮೊಬೈಲ್ ನಂಬರ್ಗೆ ಅಶ್ಲೀಲ ಸಂದೇಶ ಕಳುಹಿಸಿದ್ದ.
ನಂತರ ತಡ ರಾತ್ರಿ ವರೆಗೂ ವಾಟ್ಸ್ ಆ್ಯಪ್ ಕರೆ ಮಾಡುತ್ತಿದ್ದ. ಕರೆ ಸ್ವೀಕರಿಸಿದಾಗ ತನ್ನೊಂದಿಗೆ ಸಹಕರಿಸುವಂತೆ ಅಸಭ್ಯವಾಗಿ ಮಾತನಾಡಿದ್ದ. ಈ ವಿಷಯವನ್ನು ಆಕೆ ಪತಿ ವಾಸುಗೆ ತಿಳಿಸಿದ್ದರು. ನವೆಂಬರ್ 15ರಂದು ಯತೀಶ್ನನ್ನು ಭೇಟಿಯಾದ ವಾಸು, ಈ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದನ್ನು ಕೇಳಿಸಿಕೊಂಡ ಅಕ್ಕ – ಪಕ್ಕದ ಜನರು ವಾಸು ಜತೆ ಸೇರಿ ಯತೀಶ್ ಮೇಲೆ ಹಲ್ಲೆ ನಡೆಸಿದ್ದರು.
ಪ್ರತಿ ದೂರು: ಇದಾದ ಬಳಿಕ ನವೆಂಬರ್ 18ರಂದು ಯತೀಶ್ ಮನೆಗೂ ಬಾರದೇ, ಕಚೇರಿಗೂ ಬಾರದೆ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿದ್ದ. ಈ ವೇಳೆ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಇದರಿಂದ ಭಯಗೊಂಡ ಅವರ ತಂದೆ ನಂಜುಂಡಪ್ಪ, ವಾಸು ಹಾಗೂ ಆತನ ಸಹಚರರು ಯತೀಶ್ ಮೇಲೆ ಹಲ್ಲೆ ನಡೆಸಿ ದುರುದ್ದೇಶದಿಂದ ಕೂಡಿ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಇದೀಗ ಯತೀಶ್ ಮನೆಗೆ ಮರಳಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಲ್ಲದೆ, ವಾಸುವಿನಿಂದ ಯತೀಶ್ ಹಣ ಪಡೆದಿದ್ದ. ಹೀಗಾಗಿ, ಹಣಕಾಸು ವಿಚಾರವಾಗಿ ತನ್ನ ಪುತ್ರ ಯತೀಶ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ ಎಂದು ನಂಜುಂಡಪ್ಪ ಆರೋಪಿಸಿದ್ದಾರೆ.