Karnataka news paper

ರಾಜ್ಯ ಕಾರ್ಯಕಾರಣಿಗೆ ನಡ್ಡಾ, ಬಿಎಸ್‌ವೈ, ಜಾರಕಿಹೊಳಿ ಬ್ರದರ್ಸ್ ಗೈರು! ಸರ್ಕಾರದ ಸಾಧನೆ ಹೇಳಲಷ್ಟೇ ಸೀಮಿತ!


ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಗೈರು ಬಿಜೆಪಿ ರಾಜ್ಯ ಕಾರ‍್ಯಕಾರಣಿಯಲ್ಲಿ ಎದ್ದು ಕಂಡಿದೆ. ಜೊತೆಗೆ ಸಭೆಯ ಗಂಭೀರತೆಯಲ್ಲೂ ಕೊರತೆ ಕಾಣುತ್ತಿತ್ತು.

ಕಾರ‍್ಯಕಾರಣಿ ಸಭೆಯಲ್ಲಿ ಪ್ರಮುಖ ವಿಷಯಗಳ ಚರ್ಚೆ ನಡೆಯದೆ ಕೇಂದ್ರ, ರಾಜ್ಯ ಸರಕಾರದ ಯೋಜನೆಗಳು, ಸಾಧನೆಗಳನ್ನು ಬಿಂಬಿಸುವುದಕ್ಕೆ ಮಾತ್ರ ಮೊದಲ ದಿನ ಸೀಮಿತವಾಗಿತ್ತು. ಕಡಿಮೆ ಸಂಖ್ಯೆ ಸದಸ್ಯರು ಪಾಲ್ಗೊಂಡಿದ್ದು ಚರ್ಚೆಗೆ ಇಂಬು ನೀಡಿತು. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸೇರಿದಂತೆ ಬಹುತೇಕ ನಾಯಕರು ಬೆಳಗ್ಗೆಯೇ ನಿಗದಿತ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದರು. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅವರ ಜತೆ ಸಚಿವರಾದ ಡಾ. ಸುಧಾಕರ, ಎಸ್‌.ಟಿ. ಸೋಮಶೇಖರ, ಆರ್‌.ಅಶೋಕ ಅವರು ಮಧ್ಯಾಹ್ನ ಊಟದ ಹೊತ್ತಿಗೆ ಆಗಮಿಸಿದರು. ಸಿಎಂ ನೇರವಾಗಿ ಉಸ್ತುವಾರಿ ಅರುಣಸಿಂಗ್‌ ಅವರ ಭೇಟಿಗೆ ತೆರಳಿ ಕೆಲ ಸಮಯ ಸಮಾಲೋಚಿಸಿದರು. ತದನಂತರದಲ್ಲಿ ಗೋ ಪೂಜೆ, ಧ್ವಜಾರೋಹಣ ನೆರವೇರಿಸಲಾಯಿತು.
ರಾಜ್ಯ ಕಾರ್ಯಕಾರಿಣಿಯಲ್ಲಿ ಆರೋಪ, ಪ್ರತ್ಯಾರೋಪಗಳಿಗೆ ಅವಕಾಶವಿಲ್ಲ: ಪ್ರಹ್ಲಾದ್‌ ಜೋಶಿ
ಬೆಳಗ್ಗೆ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಪಕ್ಷದ ಪ್ರಭಾರಿಗಳು, ಸಹಪ್ರಭಾರಿಗಳ ಸಭೆಯಲ್ಲಿ 2023ರ ವಿಧಾನಸಭೆ ಮಿಷನ್‌- 150 ಘೋಷಣೆಯೊಂದಿಗೆ ಚುನಾವಣೆಗೆ ಸಜ್ಜುಗೊಳಿಸಲು ಯೋಜನೆ, ತಂತ್ರಗಳ ಬಗೆಗೆ ಕಾರ್ಯಕರ್ತರಿಗೆ ಸಲಹೆ, ಸೂಚನೆ ನೀಡಲಾಯಿತು. ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸಲು ಮತ್ತು ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವಂತೆ ನಾಯಕರು ನಿರ್ದೇಶನ ನೀಡಿದರು.

ಗೈರು ಚರ್ಚೆಗೆ ಗ್ರಾಸ
ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಾತಿ ಎದ್ದು ಕಾಣುತ್ತಿತ್ತು. ಪರಿಷತ್‌ ಕ್ಷೇತ್ರದ ಫಲಿತಾಂಶ ಕುರಿತು ಪ್ರಮುಖ ಚರ್ಚೆ ನಡೆಯಲಿದೆ ಎಂದು ಪಕ್ಷದ ಪ್ರಮುಖರು ಹೇಳಿಕೊಂಡಿದ್ದರು. ಏತನ್ಮಧ್ಯೆ ಜಾರಕಿಹೊಳಿ ಬ್ರದರ್ಸ್‌ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರರ ಗೈರು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಸಿಎಂ ಬದಲಾವಣೆ ಬಗ್ಗೆ ಮಾತಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ; ಬಸನಗೌಡ ಯತ್ನಾಳ್‌
ಪರಿಷತ್‌ ಚುನಾವಣೆಯಲ್ಲಿ ಪರಾಜಿತಗೊಂಡ ಮಹಾಂತೇಶ ಕವಟಗಿಮಠ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ರನ್ನು ವೈಯಕ್ತಿಕವಾಗಿ ಭೇಟಿಯಾಗಿ ಚರ್ಚಿಸಿದ್ದು, ಪಕ್ಷದ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆನ್ನಲಾಗಿದೆ. ವ್ಯಾಪಕ ಚರ್ಚೆಗೊಳಗಾಗುತ್ತಿರುವ ಸಿಎಂ ಬದಲಾವಣೆ ಮತ್ತು ಸಂಪುಟ ವಿಸ್ತರಣೆ ಬಗೆಗೆ ಕಾರ‍್ಯಕಾರಿಣಿಯಲ್ಲಿ ನಾಯಕರು ಸ್ಪಷ್ಟನೆ ನೀಡುವಂತೆ ಕೆಲವು ಮುಖಂಡರು ಪ್ರಸ್ತಾಪಿಸಲು ಸಜ್ಜಗೊಂಡಿದ್ದರು. ಇದನ್ನು ಅರಿತ ಸ್ಥಳೀಯ ನಾಯಕರು, ಅಂಥವರನ್ನು ಕರೆದು, ಅನಗತ್ಯ ವಿಷಯ ಪ್ರಸ್ತಾಪಿಸದಂತೆ ತಾಕೀತು ಮಾಡಿದರು ಎನ್ನಲಾಗಿದೆ.

ಕಾರ‍್ಯಕಾರಿಣಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೋದಿ ಸರಕಾರದ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಬಿಚ್ಚಿಟ್ಟರು. ಕೊರೊನಾ ನಿಯಂತ್ರಣ ಮತ್ತು ಲಸಿಕೆ ವಿತರಣೆಯಲ್ಲಿ ಮೋದಿಯವರ ದಿಟ್ಟ ನಿರ್ಧಾರಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ತಕ್ತಪಡಿಸಿದೆ ಎಂದು ಬಣ್ಣಿಸಿದರು. ಮತಾಂತರ ನಿಷೇಧ ವಿಧೇಯಕ ಮಂಡಿಸಿದ್ದಕ್ಕೆ ಪಕ್ಷವು ರಾಜ್ಯ ಸರಕಾರಕ್ಕೆ ಅಭಿನಂದಿಸುವ ನಿರ್ಣಯ ಕೈಗೊಂಡಿತು.
ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ವಿಚಾರಕ್ಕೆ ಕಟೀಲ್ ಪ್ರತಿಕ್ರಿಯೆ
ಸದಸ್ಯತ್ವ ಇದೆ.. ಇಲ್ಲ..!
ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಕಾರ‍್ಯಕಾರಿಣಿ ಸದಸ್ಯತ್ವ ಹೊಂದಿಲ್ಲ. ಹಾಗಾಗಿ ಸಭೆಗೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರೆ, ಅವರಿಬ್ಬರೂ ಕಾರ‍್ಯಕಾರಿಣಿ ಸದಸ್ಯರಿದ್ದು, ರಾಜ್ಯಾಧ್ಯಕ್ಷರ ಅನುಮತಿ ಪಡೆದು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ವಕ್ತಾರ ಪಿ.ರಾಜೀವ್‌ ಸ್ಪಷ್ಟನೆ ನೀಡಿದರು. ತದ್ವಿರುದ್ಧದ ಈ ಹೇಳಿಕೆಗಳು ಕಾರ್ಯಕರ್ತರಲ್ಲಿ ಚರ್ಚೆಗೆ ಗ್ರಾಸವಾದವು.



Read more