
ಲಂಡನ್: ರಾಣಿ ಎರಡನೇ ಎಲಿಜಬೆತ್ ಅವರು ಕ್ರಿಸ್ಮಸ್ ಆಚರಿಸುತ್ತಿದ್ದ ವಿಂಡ್ಸರ್ ಕ್ಯಾಸಲ್ಗೆ ನುಗ್ಗಿದ್ದ ಭಾರತ ಮೂಲದ 19 ವರ್ಷದ ಯುವಕನ ಉದ್ದೇಶ ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸುವುದಾಗಿತ್ತು ಎಂಬ ವಿಷಯ ತಿಳಿದ ಆತನ ಪೋಷಕರು ಹೌಹಾರಿದ್ದಾರೆ.
‘1919ರಲ್ಲಿ ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸುವ ಸಲುವಾಗಿ ರಾಣಿ ಎಲಿಜಬೆತ್ ಅವರನ್ನು ಕೊಲ್ಲುವುದು ನನ್ನ ಉದ್ದೇಶವಾಗಿತ್ತು’ ಎಂದು ಬಂಧಿತ ಯುವಕ ಜಸ್ವಂತ್ ಸಿಂಗ್ ಚೈಲ್ ನ್ಯ್ಯಾಪ್ಚಾಟ್ ವಿಡಿಯೊದಲ್ಲಿ ಹೇಳಿದ ಅಂಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದು, ಯುವಕನ ಪೋಷಕರು ಇದೀಗ ಆತನ ಜೀವದ ಬಗ್ಗೆ ಆತಂಕದಿಂದಿದ್ದಾರೆ. ಬ್ರಿಟನ್ನ ಮಾನಸಿಕ ಆರೋಗ್ಯ ಕಾಯ್ದೆಯ ಅಡಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಲಂಡನ್: ಅರಮನೆ ಮೈದಾನಕ್ಕೆ ನುಸುಳಿದ ಶಸ್ತ್ರಸಜ್ಜಿತ ಆರೋಪಿ–ಬಂಧನ
ಯುವಕನ ಪೋಷಕರು ಹ್ಯಾಂಪ್ಶೈರ್ನಲ್ಲಿ ವಾಸವಾಗಿದ್ದು, ಅವರು ಐಟಿ ಸಂಸ್ಥೆಯೊಂದರ ನಿರ್ದೇಶಕರು. ಯುವಕನಿಗೆ ಇಬ್ಬರು ಅವಳಿ ಸಹೋದರಿಯರೂ ಇದ್ದಾರೆ. ‘ನನ್ನ ಪುತ್ರನಿಗೆ ಏನೋ ತೊಂದರೆ ಆಗಿದೆ. ಆದು ಏನೆಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಆತನೊಂದಿಗೆ ಮಾತನಾಡುವ ಅವಕಾಶ ನಮಗೆ ಸಿಕ್ಕಿಲ್ಲ. ಆತ ಬಯಸಿದ ನೆರವು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಯುವಕನ ತಂದೆ ಜಸ್ಮೀರ್ ಸಿಂಗ್ (58) ಹೇಳಿದ್ದಾರೆ ಎಂದು ‘ದಿ ಟೈಮ್ಸ್’ ವರದಿ ಮಾಡಿದೆ.