Karnataka news paper

ಸಿಎಂ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ: ​ತೈಲ ಲೇಪನ, ಆಡಿನ ಹಾಲಿನ ಮಾತ್ರೆ ಬಳಕೆ


ಹೈಲೈಟ್ಸ್‌:

  • ಸಿಎಂ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ
  • ತೈಲ ಲೇಪನ, ಆಡಿನ ಹಾಲಿನ ಮಾತ್ರೆ ಬಳಕೆ
  • 6 ತಿಂಗಳ ಕೋರ್ಸ್‌ ಅಗತ್ಯ ಎಂದ ಮೈಸೂರಿನ ಲೋಕೇಶ್‌

ಬೆಳಗಾವಿ : ಬೆಳಗಾವಿ ಅಧಿವೇಶನದ ವೇಳೆ ಸಿಎಂ ಬೊಮ್ಮಾಯಿ ಅವರು ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಮೈಸೂರಿನ ನಾಟಿ ವೈದ್ಯ ಲೋಕೇಶ್‌ ಟೇಕಲ್‌ ಅವರು 10 ದಿನಗಳ ಕಾಲ ಬೆಳಗಾವಿಯಲ್ಲೇ ಇದ್ದು ಸಿಎಂಗೆ ಚಿಕಿತ್ಸೆ ನೀಡಿದ್ದಾರೆ. ಸಿಎಂ ತಂಗಿದ್ದ ಬೆಳಗಾವಿಯ ವಿಟಿಯು ಅತಿಥಿಗೃಹದಲ್ಲಿ ಲೋಕೇಶ್‌ ಅವರು ಪ್ರತಿ ದಿನ ಚಿಕಿತ್ಸೆ ನೀಡಿದ್ದಾರೆ.

ತೈಲ ಲೇಪನ ಮತ್ತು ಆಡಿನ ಹಾಲಿನ ಮಾತ್ರೆಯನ್ನು ಒಳಗೊಂಡಿರುವ ಆರು ತಿಂಗಳ ಕೋರ್ಸ್‌ ಇದಾಗಿದೆ. ಪ್ರಾಥಮಿಕ ಚಿಕಿತ್ಸೆಯಲ್ಲೇ ನೋವು ಸ್ವಲ್ಪ ಮಟ್ಟಿಗೆ ಶಮನ ಆಗಿದೆ ಎಂದು ಹೇಳಲಾಗಿದೆ. ಬೊಮ್ಮಾಯಿ ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದು ಕೆಲವೊಮ್ಮೆ ಅವರಿಗೆ ನಡೆಯಲು ಕೂಡ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ನಾಟಿ ವೈದ್ಯ ಲೋಕೇಶ್‌ ಅವರನ್ನು ಸಿಎಂಗೆ ಪರಿಚಯಿಸಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದ್ದರು.

ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿರುವ ಲೋಕೇಶ್‌,”ಸಿಎಂ ಬೊಮ್ಮಾಯಿ ಮಂಡಿನೋವಿನಿಂದ ನರಳುತ್ತಿದ್ದರು. ಚಿಕಿತ್ಸೆ ಪಡೆದ ಎರಡೇ ದಿನದಲ್ಲಿ ಮಂಡಿ ನೋವು ಬಹುತೇಕ ಕಡಿಮೆಯಾಗಿದೆ. ಇನ್ನು ಸುಮಾರು 20 ದಿನಗಳ ಕಾಲ ಔಷಧ ತೆಗೆದುಕೊಳ್ಳಬೇಕು. 40 ದಿನಗಳ ಚಿಕಿತ್ಸೆಯ ಕೋರ್ಸ್‌ ಇರುತ್ತದೆ. ಈಗ ಮೊದಲ ಹಂತವಾಗಿ 20 ದಿನಗಳ ಚಿಕಿತ್ಸೆ ನೀಡಲಾಗಿದೆ. ದೀರ್ಘಕಾಲದ ಚಿಕಿತ್ಸೆ ಅಗತ್ಯ ಇಲ್ಲ. ಒಂದು ಕೋರ್ಸ್‌ ಮುಗಿಸಲೇಬೇಕು. ನೋವು ಕಡಿಮೆಯಾಗುತ್ತಿದೆ. ಆದರೆ ಕೆಲವು ತಿಂಗಳು ಚಿಕಿತ್ಸೆ ಮುಂದುವರಿಸಬೇಕಿದೆ,”ಎಂದರು.

ಎಷ್ಟು ಹಳೆಯದಾದ ಮಂಡಿ ನೋವನ್ನು ಕೂಡ ಕಮ್ಮಿ ಮಾಡುವ ಮನೆಮದ್ದುಗಳು

”ಸನಾತನ ಪದ್ಧತಿಯ ಪ್ರಕಾರ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ನೋವಿಗೆ ಬಾಹ್ಯಲೇಪನ ಮಾಡಲು ಕೆಲವು ದೇಸಿ ಪದ್ಧತಿಯ ತೈಲಗಳನ್ನು ನೀಡಲಾಗಿದೆ. ಆಡಿನ ಹಾಲಿನ ಮಾತ್ರೆಯನ್ನು ನೀಡಿದ್ದು 20 ದಿನಗಳ ಕಾಲ ದಿನಾಲೂ ತೆಗೆದುಕೊಳ್ಳಲು ಸಲಹೆ ನೀಡಿದ್ದೇನೆ,” ಎಂದರು.

ಆಡಿನ ಹಾಲಿನ ವಿಶೇಷತೆ

”ಮೇಕೆ ಹಾಲಿನ ಬಗ್ಗೆ ಪುರಾತನ ಕಾಲದಿಂದಲೂ ಉಲ್ಲೇಖವಿದೆ. ಚರಕ-ಶುಶ್ರುತ ಸಂಹಿತೆಯಲ್ಲೂ ಇದರ ಮಾಹಿತಿ ಇದೆ. ಪಾಶ್ರ್ವವಾಯುವಿಗೂ ಮದ್ದಾಗಿ ಬಳಸುತ್ತಾರೆ. ಮೇಕೆ ಹಾಲಿನ ಜೊತೆಗೆ ಇತರ ಐದು ಮೂಲಿಕೆಗಳನ್ನು ಸೇರಿಸಿ ಮಾತ್ರೆ ಮಾಡಲಾಗುತ್ತದೆ. ಮೆಣಸು, ಬೆಳ್ಳುಳ್ಳಿ, ಮತ್ತು ವನಸ್ಪತಿಗಳ ಬೇರುಗಳನ್ನು ಬಳಸಿಕೊಂಡು ವಿಶೇಷ ವಿಧಾನದಿಂದ ಔಷಧ ತೆಯಾರಿಸಿದ್ದೇವೆ,” ಎಂದು ಲೋಕೇಶ್‌ ಮಾಹಿತಿ ನೀಡಿದ್ದಾರೆ.

ಸವದಿಯೂ ಗುಣಮಖ
”ಚರ್ಮವ್ಯಾಧಿಯಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನನ್ನ ಬಳಿ ಚಿಕಿತ್ಸೆ ಪಡೆದಿದ್ದು ಅವರಿಗೆ ವಾಸಿಯಾಗಿದೆ. ಅವರೇ ಸಿಎಂಗೂ ಚಿಕಿತ್ಸೆ ಕೊಡಬಹುದೇ ಎಂದು ಕೇಳಿ ಕರೆ ಮಾಡಿದ್ದರು. ಅದರಂತೆ ಔಷಧ ನೀಡಿದ್ದೇನೆ,” ಎಂದು ಹೇಳಿದ್ದಾರೆ.



Read more