ಬೆಂಗಳೂರು: ‘ಕೋವಿಡ್ನಿಂದ ಮೃತಪಟ್ಟ ಎಪಿಎಲ್ ಕುಟುಂಬದವರಿಗೆ ₹1 ಲಕ್ಷ ಪರಿಹಾರ ನೀಡುವ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಕೋವಿಡ್ನಿಂದ ಮೃತಪಟ್ಟವರ ಕುಟುಂಬದವರಿಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಹಾರ ಧನ ವಿತರಿಸಿ ಅವರು ಮಾತನಾಡಿದರು.
‘ಬಿಪಿಎಲ್ ಮಾತ್ರವಲ್ಲದೇ ಎಪಿಎಲ್ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ತಲಾ ₹50 ಸಾವಿರ ಪರಿಹಾರ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಕ್ಕೆ ಮಾತ್ರ ₹1 ಲಕ್ಷ ಸೇರಿಸಿ ಒಟ್ಟು ₹1.50 ಲಕ್ಷ ಕೊಡುತ್ತಿದೆ. ಈ ಒಂದು ಲಕ್ಷವನ್ನು ಎಪಿಎಲ್ ಕುಟುಂಬಕ್ಕೂ ನೀಡಬೇಕು’ ಎಂದು ಶಾಸಕ ಬಿ.ಝಡ್. ಜಮೀರ್ ಅಹಮ್ಮದ್ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಹಣಕಾಸಿನ ಸ್ಥಿತಿಗತಿ ನೋಡಿ ಕೊಂಡು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.